Jakkur Railway Flyover: ಇನ್ಮುಂದೆ ಜಕ್ಕೂರು ರೈಲ್ವೆ ಗೇಟ್ ಕಿರಿಕಿರಿ ಇರಲ್ಲ; ಫ್ಲೈಓವರ್ ಓಪನ್ ಬಗ್ಗೆ ಇಲ್ಲಿದೆ ಸಿಹಿಸುದ್ದಿ
ಬೆಂಗಳೂರು: ಉತ್ತರ ಬೆಂಗಳೂರು ಭಾಗದ ನಿವಾಸಿಗಳಿಗೆ ಪ್ರಮುಖವಾಗಿದ್ದ ಮಹತ್ವದ ಯೋಜನೆಯೊಂದು ಕೊನೆಗೂ ಮುಕ್ತಾಯದ ಹಂತಕ್ಕೆ ತಲುಪಿದೆ. ಜಕ್ಕೂರು ರೈಲ್ವೆ ಗೇಟ್ ಬಳಿ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದ ವಾಹನ ಸವಾರರ ಸಂಕಷ್ಟಕ್ಕೆ ಇನ್ನು ಕೆಲವೇ ದಿನಗಳಲ್ಲಿ ಮುಕ್ತಿ ಸಿಗಲಿದೆ. ಸಿಲಿಕಾನ್ ಸಿಟಿಯ ಯಲಹಂಕ ಹಾಗೂ ಹೆಬ್ಬಾಳ ನಡುವಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೆತ್ತಿಕೊಳ್ಳಲಾಗಿದ್ದ 600 ಮೀಟರ್ ಉದ್ದದ 'ಜಕ್ಕೂರು ರೈಲ್ವೆ ಫ್ಲೈಓವರ್' (Jakkur Railway Flyover) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಜಕ್ಕೂರು ಸುತ್ತಮುತ್ತ ಪರಿಶೀಲನೆ
ಬೆಂಗಳೂರು ಉತ್ತರ ನಗರ ಪಾಲಿಕೆ ಮೂಲಗಳ ಪ್ರಕಾರ, ಇದರ ಸಿವಿಲ್ ಕೆಲಸಗಳು ಮುಗಿದಿದ್ದು, ಕೇವಲ ಡಾಂಬರೀಕರಣ ಕಾರ್ಯ ಮಾತ್ರ ಬಾಕಿ ಉಳಿದಿದೆ. ಮುಂದಿನ ಒಂದು ವಾರದ ಒಳಗಾಗಿ ಇಡೀ ಫ್ಲೈಓವರ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತರಾದ ಎಂ. ಮಹೇಶ್ವರ ರಾವ್ ಅವರು ಶನಿವಾರ ಜಕ್ಕೂರು ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಕೇವಲ ಫ್ಲೈಓವರ್ ಅಷ್ಟೇ ಅಲ್ಲದೆ, ಜಕ್ಕೂರು ಕೆರೆಯ ಸುತ್ತಮುತ್ತಲಿನ ಪರಿಸರ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ರೈಲ್ವೆ ಗೇಟ್ ಕಿರಿಕಿರಿಗೆ ಮುಕ್ತಿ
ಈ ಭಾಗದಲ್ಲಿ ರೈಲುಗಳು ಹಾದುಹೋಗುವಾಗ ರೈಲ್ವೆ ಗೇಟ್ ಹಾಕಲಾಗುತ್ತಿತ್ತು. ಇದರಿಂದಾಗಿ ಜಕ್ಕೂರು, ಯಲಹಂಕ ಮತ್ತು ಹೆಬ್ಬಾಳ ಕಡೆಗೆ ಸಂಚರಿಸುವ ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಫ್ಲೈಓವರ್ ನಿರ್ಮಾಣದಿಂದಾಗಿ ವಾಹನ ಸವಾರರು ರೈಲ್ವೆ ಗೇಟ್ಗಾಗಿ ಕಾಯುವ ಅಗತ್ಯವಿಲ್ಲದೆ ನೇರವಾಗಿ ಸಂಚರಿಸಬಹುದು. ಈ 600 ಮೀಟರ್ ಉದ್ದದ ಮೇಲ್ಪಾಲವು ಯಲಹಂಕ, ಜಕ್ಕೂರು, ಹೆಬ್ಬಾಳ ಮತ್ತು ಮಾನ್ಯತಾ ಟೆಕ್ ಪಾರ್ಕ್ ಕಡೆಗೆ ಹೋಗುವ ರಸ್ತೆಗಳನ್ನು ಸುಲಭವಾಗಿ ಸಂಪರ್ಕಿಸುತ್ತದೆ. ಇದು ಕಚೇರಿಗಳಿಗೆ ಹೋಗುವ ಉದ್ಯೋಗಿಗಳಿಗೆ ಮತ್ತು ಸ್ಥಳೀಯ ನಿವಾಸಿಗಳ ಪ್ರಯಾಣದ ಸಮಯವನ್ನು ಉಳಿಸಲಿದೆ.
ಫ್ಲೈಓವರ್ ಯೋಜನೆಯೊಂದಿಗೆ ಜಕ್ಕೂರು ಕೆರೆಗೆ ಹೊಂದಿಕೊಂಡಿರುವ ರೈಲ್ವೆ ಹಳಿಗಳ ಬಳಿ ಹೊಸ ಪಾದಚಾರಿ ಸೇತುವೆ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಮತ್ತು ವಾಯುವಿಹಾರಿಗಳು ರೈಲ್ವೆ ಹಳಿಗಳನ್ನು ದಾಟುವ ಅಪಾಯ ತಪ್ಪಲಿದ್ದು, ಸುರಕ್ಷಿತವಾಗಿ ಕೆರೆಯ ಆವರಣವನ್ನು ತಲುಪಬಹುದು. ಪ್ರವಾಸೋದ್ಯಮ ಮತ್ತು ಪರಿಸರ ಅಭಿವೃದ್ಧಿಯ ಭಾಗವಾಗಿ ಜಕ್ಕೂರು ಕೆರೆಯ ಸುತ್ತಲೂ ವಿಶಿಷ್ಟವಾದ ಮರದ ನಡಿಗೆ ದಾರಿ ಬರಲಿದೆ. ಇದು ಬೆಳಗಿನ ಜಾವ ಮತ್ತು ಸಂಜೆ ವಾಕಿಂಗ್ ಮಾಡುವವರಿಗೆ ಅತ್ಯಂತ ಆಕರ್ಷಕ ಹಾಗೂ ಆಹ್ಲಾದಕರ ಅನುಭವ ನೀಡಲಿದೆ. ಜಕ್ಕೂರು ಫ್ಲೈಓವರ್ ಕೇವಲ ವಾಹನ ಸವಾರರಿಗೆ ಮಾತ್ರವಲ್ಲದೆ ಸ್ಥಳೀಯ ನಿವಾಸಿಗಳ ನೆಮ್ಮದಿಯ ಜೀವನ ಹಾಗೂ ವಾಯುವಿಹಾರಿಗಳಿಗೂ ಅತ್ಯಂತ ಉಪಯುಕ್ತವಾದ ಯೋಜನೆಯಾಗಿದೆ.
ಜಕ್ಕೂರು ಕೆರೆಗೆ ಹೊಸ ರೂಪ
ಜಕ್ಕೂರು ಕೆರೆಗೆ ಹೊಂದಿಕೊಂಡಿರುವ ರೈಲ್ವೆ ಹಳಿಗಳ ಬಳಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ತಕ್ಷಣವೇ ಪಾದಚಾರಿ ಬ್ರಿಡ್ಜ್ ನಿರ್ಮಿಸಲು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳಿಗೆ ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಜಕ್ಕೂರು ಕೆರೆಯ ಸುತ್ತಲೂ ವೀಕ್ಷಕರು ಹಾಗೂ ವಾಕಿಂಗ್ ಹೋಗುವವರಿಗಾಗಿ ಆಕರ್ಷಕವಾದ ಮರದ ನಡಿಗೆ ದಾರಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ತಿಳಿಸಲಾಗಿದೆ.
ಸದ್ಯ ಜಕ್ಕೂರು ಕೆರೆ ಬಳಿ ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ 10 ಎಂಎಲ್ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP) ನಿರ್ಮಾಣವಾಗುತ್ತಿದೆ. ಈ ಕೆರೆ ಹಾಗೂ ಎಸ್ಟಿಪಿ ಮಧ್ಯೆ ಇರುವ ರಸ್ತೆಯನ್ನು ಅಗಲಗೊಳಿಸಿ, ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲು ಬಿಬಿಎಂಪಿ, ಬಿಡಿಎ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಜಂಟಿಯಾಗಿ ನಕ್ಷೆ ತಯಾರಿಸಿ ವರದಿ ನೀಡುವಂತೆ ಮಹೇಶ್ವರ ರಾವ್ ಸೂಚಿಸಿದ್ದಾರೆ.
ಇದೇ ವೇಳೆ ಜಕ್ಕೂರು ವ್ಯಾಪ್ತಿಯ ಪ್ರಮುಖ ರಸ್ತೆಯಾದ 'ರೈತ ಸಂತೆ' ರಸ್ತೆಯಲ್ಲಿ ಪ್ರಗತಿಯಲ್ಲಿರುವ ವೈಟ್-ಟಾಪಿಂಗ್ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಮುಗಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಜಕ್ಕೂರು ಫ್ಲೈಓವರ್ ಓಪನ್ ಆದಲ್ಲಿ ಉತ್ತರ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ದೊಡ್ಡ ಬಲ ಸಿಗಲಿದೆ.













Click it and Unblock the Notifications