Kodi Mutt Swamiji Prediction: ಡಿಕೆಶಿ ಸಂಪುಟದಲ್ಲಿಲ್ಲದ ಜಮೀರ್ ಅಹ್ಮದ್, ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ
Kodi Mutt Seer Prediction: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಜ್ಯ ರಾಜಕೀಯ, ಮಳೆ-ಬೆಳೆ ಬಗ್ಗೆ ಭವಿಷ್ಯಗಳನ್ನು ನುಡಿಯುತ್ತಲಿರುತ್ತಾರೆ. ಇವರ ಮಾತುಗಳು ನಿಜವಾಗಿರುವ ಉದಾಹರಣೆಗಳಿವೆ. ಆದ್ದರಿಂದ ಆಗಾಗ ಇವರನ್ನು ಭೇಟಿಗೆಂದು ರಾಜಕಾರಣಿಗಳು ಬರುತ್ತಲಿರುತ್ತಾರೆ. ಇದೀಗ ಜಮೀರ್ ಅಹ್ಮದ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದು, ಇದು ಭಾರಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರ ರಾಜಕೀಯ ಭವಿಷ್ಯದ ಕುರಿತು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನೀಡಿರುವ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.

'ಜಮೀರ್ ಅಹಮದ್ ಖಾನ್ ಅವರ ಪರ ಬ್ಯಾಟ್ ಬೀಸಿರುವ ಶ್ರೀಗಳು ಜಮೀರ್ ಇಲ್ಲದೆ ಸರ್ಕಾರ ಇರಲ್ಲ ಮತ್ತು ಸರ್ಕಾರ ಆಗಲ್ಲ,' ಎಂದು ಹೇಳುವ ಮೂಲಕ ಅವರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೇಳೆ ಈ ಹೇಳಿಕೆ ನೀಡಿದರು
ಕೋಡಿಮಠ ಶ್ರೀಗಳು ಹೇಳಿದ್ದೇನು?
ವೇದಿಕೆಯ ಮೇಲೆ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರು ಜಮೀರ್ ಅಹಮದ್ ಖಾನ್ ಅವರ ಭಾವಚಿತ್ರವಿರುವ ಫಲಕಗಳನ್ನು ಹಿಡಿದು ನಿಂತಿದ್ದರು. ಇದೇ ವೇಳೆ ಜಮೀರ್ ಅಹಮದ್ ಖಾನ್ ವಿರುದ್ಧ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಟೀಕೆಗಳ ಕುರಿತು ಮಾತನಾಡಿದ ಶ್ರೀಗಳು, 'ಜಮೀರ್ ಸಾಹೇಬರಿಗೆ ಏನಾಗಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಅವರ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ,' ಎಂದು ಬೇಸರ ವ್ಯಕ್ತಪಡಿಸಿದರು.
'ಅಪಪ್ರಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ'
'ಸಮಾಜದಲ್ಲಿ ವಿಚಾರ, ಸಮಾಚಾರ, ಪ್ರಚಾರಗಳು ಇವೆ. ಆದರೆ ಇವೆಲ್ಲವನ್ನೂ ಮೀರಿಸಿ ಇತ್ತೀಚೆಗೆ ಮತ್ತೊಂದು ದೊಡ್ಡದಾದ ವಿಷಯ ಮುನ್ನೆಲೆಗೆ ಬಂದಿದೆ, ಅದೇ ಅಪಪ್ರಚಾರ. ಇದು ಮೊದಲು ಬಂದು ಇನ್ನುಳಿದ ಎಲ್ಲ ವಿಚಾರಗಳನ್ನು ಮುಚ್ಚಿಹಾಕುತ್ತದೆ. ಆದ್ದರಿಂದ ಇಂತಹ ಸುಳ್ಳು ಅಪಪ್ರಚಾರಗಳಿಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ,' ಎಂದು ಹೇಳಿದರು.
'ನಮ್ಮ ಜಮೀರ್ ಸಾಹೇಬರು ಮತ್ತೊಮ್ಮೆ ಕರ್ನಾಟಕ ಮಂತ್ರಿಮಂಡಲವನ್ನು ಸೇರಲಿದ್ದಾರೆ. ಅವರು ಇಲ್ಲದಿದ್ರೆ ಸರ್ಕಾರ ಇಲ್ಲ, ಇದ್ರೆ ಸರ್ಕಾರ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಪಟ್ಟ ಪ್ರಮುಖರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ, ಮುಂದೆಯೂ ಮಾತನಾಡುತ್ತೇನೆ,' ಎಂದು ಭರವಸೆವನ್ನು ನೀಡಿದರು.
'ಜಮೀರ್ ಅವರದ್ದು ಜಾತ್ಯತೀತ ಸೇವೆ'
ಜಮೀರ್ ಅಹಮದ್ ಅವರ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿದ ಶ್ರೀಗಳು, 'ಅವರ ಮೇಲೆ ಭಗವಂತನ ಕೃಪೆ ಸದಾ ಇರುತ್ತದೆ. ಅವರು ಮಾಡಿರುವ ಜನಸೇವೆ ಮತ್ತು ಸಾಮಾಜಿಕ ಕಾರ್ಯಗಳು ಅವರನ್ನು ರಕ್ಷಿಸುತ್ತವೆ. ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಜಾತ್ಯತೀತವಾಗಿ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ದುಡಿದಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಇಂತಹ ನಾಯಕನಿಗೆ ನಾವೆಲ್ಲರೂ ಒಟ್ಟಾಗಿ ಬೆಂಬಲ ನೀಡಬೇಕಾಗಿದೆ. ಅವರು ಮಂತ್ರಿಯಾಗುವುದನ್ನು ನಾವೆಲ್ಲರೂ ಕಣ್ಣಾರೆ ನೋಡಿ ಸಂತೋಷಪಡೋಣ,' ಎಂದು ಹೇಳಿದರು.
ಶಾಂತಿ ಕಾಪಾಡಲು ಮುಸ್ಲಿಂ ಮುಖಂಡರಿಗೆ ಕರೆ
ಸಭೆಯಲ್ಲಿದ್ದ ಮುಸ್ಲಿಂ ಸಮುದಾಯದ ಯುವಕರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾವುಕರಾಗದೆ ಶಾಂತಚಿತ್ತರಾಗಿ ಇರುವಂತೆ ಮನವಿ ಮಾಡಿದರು. 'ಯಾರೂ ಕೂಡ ಆಕ್ರೋಶಕ್ಕೆ ಒಳಗಾಗಬಾರದು. ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಎಲ್ಲರೂ ತಾಳ್ಮೆಯಿಂದ ಇರಿ,' ಎಂದು ಕರೆ ನೀಡಿದರು.
ಶ್ರೀಗಳ ಈ ಭರವಸೆಯ ಮಾತುಗಳನ್ನು ಕೇಳಿ ಸಭೆಯಲ್ಲಿದ್ದ ಮುಸ್ಲಿಂ ಮುಖಂಡರು ಮತ್ತು ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಕೋಡಿಮಠದ ಶ್ರೀಗಳು ಜಮೀರ್ ಪರ ನುಡಿದ ಈ ಭವಿಷ್ಯವಾಣಿ ಸದ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications