ತ್ರಿಪಕ್ಷ 'ಮಹಾ' ಸರ್ಕಾರ ರಚನೆ: ಠಾಕ್ರೆ ಸಂಪುಟ ಸೇರಿದವರ ಪಟ್ಟಿ
ಮುಂಬೈ, ನವೆಂಬರ್ 28: ಮಹಾರಾಷ್ಟ್ರ ರಾಜಧಾನಿ ಮುಂಬೈನ ಶಿವಾಜಿಪಾರ್ಕ್ ಐತಿಹಾಸಿಕ ಘಟನೆಗೆ ಇಂದು ಸಾಕ್ಷಿ ಆಯಿತು. ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆ ಆಗಿದ್ದು, ಠಾಕ್ರೆ ಕುಟುಂಬದ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹೊಳೆಯು ಕೇಸರಿ ಬಣ್ಣದ ಕುರ್ತಾ ಧರಿಸಿ ವೇದಿಕೆಗೆ ಆಗಮಿಸಿದ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಛತ್ರಪತಿ ಶಿವಾಜಿ ಮತ್ತು ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿ ವೇದಿಕೆಗೆ ಹಣೆ ಹಚ್ಚಿ ನೆರೆದಿದ್ದ ಜನರಿಗೆ ನಮಸ್ಕಾರ ಸಲ್ಲಿಸಿದರು.
ಉದ್ಧವ್ ಠಾಕ್ರೆ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣ ಚಿತ್ರಣ
ಶಿವಸೇನಾದ ಬಾಹುಬಲದ ಮುಖಂಡರೆಂದೇ ಹೆಸರುವಾಸಿಯಾದ ಏಕನಾಥ್ ಶಿಂಧೆ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜೊತೆಗೆ ಶಿವಸೇನೆಯ ಸುಭಾಶ್ ದೇಸಾಯಿ ಸಹ ಪ್ರಮಾಣ ವಚನ ಸ್ವೀಕರಿಸಿದರು. ಇವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಇವರು ಶಿವಸೇನೆಯ ವೈಟ್ ಕಾಲರ್ ಮುಖಂಡರೆಂದೇ ಹೆಸರುಪಡೆದಿದ್ದಾರೆ.
ಎನ್ಸಿಪಿಯ ಹಿರಿಯ ಶಾಸಕ ಜಗ್ಗನ್ ಬುಜ್ಬಲ್ ಅವರು ಪ್ರಮಾಣವಚನ ಸ್ವೀಕರಿಸಿದರು. ಇವರು ಮೊದಲಿಗೆ ಶಿವಸೇನಾ ದಲ್ಲಿಯೇ ಇದ್ದರು. ಆದರೆ ಮೊದಲ ಬಾರಿಗೆ ಬಾಳ ಠಾಕ್ರೆ ವಿರುದ್ಧ ಬಂಡಾಯ ಎದ್ದಿದ್ದರು. ನಂತರ ಬಾಳ ಠಾಕ್ರೆ ಬಂಧನಕ್ಕೂ ಕಾರಣವಾಗಿ, ಶಿವಸೇನೆ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದರು.
ಎನ್ಸಿಪಿ ಹಿರಿಯ ಶಾಸಕ ಜಯಂತ್ ಪಾಟೀಲ್ ಸಹ ಪ್ರಮಾಣ ವಚನ ಸ್ವೀಕರಿಸಿದರು. ಇವರು ಸಂವೇದನಾಶೀಲ ನಾಯಕರೆಂದು ಗುರುತಿಸಲ್ಪಡುತ್ತಾರೆ. ಅಜಿತ್ ಪವಾರ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವಲ್ಲಿ ಇವರ ಪಾತ್ರ ಹೆಚ್ಚಿತ್ತು.
ಠಾಕ್ರೆ ಕುಟುಂಬದ ಮೊದಲ ಸಿ.ಎಂ ಉದ್ಧವ್ ವ್ಯಕ್ತಿಚಿತ್ರ
ಕಾಂಗ್ರೆಸ್ನ ಬಾಳಾಸಾಹೇಬ್ ತಾರೋಠ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇವರು ಮಹಾರಾಷ್ಟ್ರ ಕಾಂಗ್ರೆಸ್ನ ಅಧ್ಯಕ್ಷರಾಗಿದ್ದಾರೆ. ಅವರ ನಂತರ ಕಾಂಗ್ರೆಸ್ನ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು. ಇವರು ವಿದರ್ಭ ಭಾಗದವರಾಗಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಗಣ್ಯರ ದಂಡೇ ನೆರೆದಿತ್ತು. ಶರದ್ ಪವಾರ್, ಬಿಜೆಪಿ ಮಾಜಿ ಸಿಎಂ ದೇವೇಂದ್ರ ಪಢ್ನವೀಸ್, ಮಧ್ಯಪ್ರದೇಶ ಸಿಎಂ ಕಮಲನಾಥ್, ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ಮತ್ತು ಠಾಕ್ರೆ ಕುಟುಂಬ ಸದಸ್ಯ ರಾಜ್ ಠಾಕ್ರೆ, ಅಜಿತ್ ಪವಾರ್, ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ನೀತಾ ಅಂಬಾನಿ ಇನ್ನೂ ಹಲವು ಮುಖಂಡರು ಭಾಗವಹಿಸಿದ್ದರು.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ, ಮುಖಂಡ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಗೈರಾದರು. ಮನಮೋಹನ್ ಸಿಂಗ್ ಉದ್ಧವ್ ಠಾಕ್ರೆಗೆ ಪತ್ರ ಬರೆದು ಶುಭ ಕೋರಿದ್ದಾರೆ.