ಟೂಲ್ಕಿಟ್ ಪ್ರಕರಣ: ನಿಕಿತಾ ಜೇಕಬ್ಗೆ ಮೂರು ವಾರಗಳ ನಿರೀಕ್ಷಣಾ ಜಾಮೀನು
ಮುಂಬೈ, ಫೆಬ್ರವರಿ 17: ರೈತರ ಪ್ರತಿಭಟನೆಯ ಟೂಲ್ ಕಿಟ್ ಪ್ರಕರಣದಲ್ಲಿ ದೆಹಲಿಯ ತಿಸ್ ಹಜಾರಿ ನ್ಯಾಯಾಲಯದಿಂದ ಜಾಮೀನುರಹಿತ ವಾರೆಂಟ್ ಎದುರಿಸುತ್ತಿರುವ ಮುಂಬೈ ಮೂಲದ ವಕೀಲೆ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಪ್ರಯಾಣ ಕಾಲದ ಉದ್ದೇಶಿತ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನಿಕಿತಾ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ. ನಾಯಕ್ ಅವರ ಏಕ ಸದಸ್ಯ ನ್ಯಾಯಪೀಠ ಮೂರು ವಾರಗಳ ನಿರೀಕ್ಷಣಾ ಜಾಮೀನು ನೀಡಿದರು. ಪೊಲೀಸ್ ಅಧಿಕಾರಿಗಳು ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಿ, ಆಕೆಯ ಲ್ಯಾಪ್ಟಾಪ್ ಮತ್ತು ಫೋನ್ ವಶಪಡಿಸಿಕೊಂಡಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಅರ್ಥ ನಿಕಿತಾ ಅವರು ತನಿಖೆಗೆ ಲಭ್ಯವಿದ್ದಾರೆ ಎಂದು ಆಕೆ ತಿಳಿಸಿದಂತಾಗಿದೆ ಎಂಬುದಾಗಿ ನ್ಯಾಯಪೀಠ ಹೇಳಿತು.
ಆದರೆ ಜಾಮೀನಿಗಾಗಿ ಇನ್ನು ಮೂರು ವಾರಗಳ ಬಳಿಕ ನಿಕಿತಾ ಅವರು ದೆಹಲಿಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕಿದೆ. ಈ ಪ್ರಕರಣದ ವ್ಯಾಪ್ತಿಯ ಕುರಿತು ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ದೆಹಲಿ ಪೊಲೀಸರ ಆರೋಪದ ಪ್ರಕಾರ, ಪರಿಸರ ಹೋರಾಟಗಾರ್ತಿ ದಿಶಾ ರವಿ, ನಿಕಿತಾ ಜೇಕಬ್ ಮತ್ತು ಬೀಡ್ನ ಎಂಜಿನಿಯರ್ ಶಂತನು ಮುಲುಕ್ ಸೇರಿ ರೈತರ ಪ್ರತಿಭಟನೆಯ ಕುರಿತು ವಿದೇಶಿ ಸೆಲೆಬ್ರಿಟಿಗಳಿಂದ ಟ್ವೀಟ್ ಮಾಡಿಸಲು ಟೂಲ್ಕಿಟ್ ತಯಾರಿಸಿದ್ದರು. ಅದನ್ನು ಗ್ರೆಟಾ ಥನ್ಬರ್ಗ್ ಆಕಸ್ಮಿಕವಾಗಿ ಟ್ವೀಟ್ ಮಾಡಿದ್ದರು.
ಇದೇ ಪ್ರಕರಣದಲ್ಲಿ ದೆಹಲಿ ಕೋರ್ಟ್ನಿಂದ ಜಾಮೀನುರಹಿತ ವಾರಂಟ್ ಎದುರಿಸುತ್ತಿರುವ ಶಂತನು ಅವರಿಗೆ ಔರಂಗಾಬಾದ್ ಪೀಠವು ಮಂಗಳವಾರ 10 ದಿನಗಳ ಪ್ರಯಾಣ ಕಾಲದ ಉದ್ದೇಶಿತ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.












Click it and Unblock the Notifications