ಮುಂಬೈ: ಮೋದಿಯಿಂದ 2 ಉಪನಗರ ರೈಲು ಯೋಜನೆಗೆ ಚಾಲನೆ
ಮುಂಬೈ, ಫೆಬ್ರವರಿ 18: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ(ಫೆ.18)ದಂದು ಸಂಜೆ 4.30ಕ್ಕೆ ಥಾಣೆ ಮತ್ತು ದಿವಾ ನಡುವೆ ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೆ, ಅವರು ಮುಂಬೈ ಉಪನಗರ ರೈಲ್ವೆಯ ಎರಡು ಉಪನಗರ ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ ಮತ್ತು ಆನಂತರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕಲ್ಯಾಣ್, ಕೇಂದ್ರ ರೈಲ್ವೆಯ ಮುಖ್ಯ ಜಂಕ್ಷನ್ ಆಗಿದೆ. ದೇಶದ ಉತ್ತರ ಭಾಗದಿಂದ ಮತ್ತು ದಕ್ಷಿಣ ಭಾಗದಿಂದ ಬರುವ ರೈಲುಗಳ ಸಂಚಾರ ಕಲ್ಯಾಣದಲ್ಲಿ ವಿಲೀನಗೊಳ್ಳುತ್ತದೆ ಮತ್ತು ಅಲ್ಲಿಂದ ಸಿಎಸ್ ಎಂಟಿ (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್)ಕಡೆಗೆ ಚಲಿಸುತ್ತವೆ. ಕಲ್ಯಾಣ್ ಮತ್ತು ಸಿಎಸ್ ಎಂಟಿ ನಡುವಿನ ನಾಲ್ಕು ಹಳಿಗಳ ಪೈಕಿ ಎರಡು ಮಾರ್ಗಗಳನ್ನು ನಿಧಾನವಾದ ಸ್ಥಳೀಯ ರೈಲುಗಳಿಗೆ ಮತ್ತು ಎರಡು ಟ್ರ್ಯಾಕ್ಗಳನ್ನು ವೇಗದ ಸ್ಥಳೀಯ, ಮೇಲ್ ಎಕ್ಸ್ಪ್ರೆಸ್ ಮತ್ತು ಸರಕು ರೈಲುಗಳಿಗೆ ಬಳಸಲಾಗುತ್ತಿದೆ. ಉಪನಗರ ಮತ್ತು ದೂರದ ರೈಲುಗಳನ್ನು ಪ್ರತ್ಯೇಕಿಸಲು, ಎರಡು ಹೆಚ್ಚುವರಿ ಟ್ರ್ಯಾಕ್ಗಳನ್ನು ನಿರ್ಮಿಸಲಾಗಿದೆ.
ಥಾಣೆ ಮತ್ತು ದಿವಾ ನಡುವೆ ಸಂಪರ್ಕ ಕಲ್ಪಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ಸುಮಾರು 620 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ 1.4 ಕಿಮೀ ಉದ್ದದ ರೈಲು ಮೇಲ್ಸೇತುವೆ, 3 ಪ್ರಮುಖ ಸೇತುವೆ, 21 ಸಣ್ಣ ಸೇತುವೆಗಳನ್ನು ಒಳಗೊಂಡಿದೆ. ಈ ಮಾರ್ಗಗಳು ಮುಂಬೈನಲ್ಲಿನ ಉಪನಗರ ರೈಲುಗಳ ಸಂಚಾರದೊಂದಿಗೆ ದೂರದ ರೈಲುಗಳ ಸಂಚಾರಕ್ಕೆ ಆಗುತ್ತಿದ್ದ ಅಡಚಣೆಯನ್ನು ಗಮನಾರ್ಹವಾಗಿ ನಿವಾರಿಸಲಿದೆ. ಈ ಹೊಸ ಮಾರ್ಗಗಳು ನಗರದಲ್ಲಿ 36 ಹೊಸ ಉಪನಗರ ರೈಲುಗಳ ಸಂಚಾರ ಆರಂಭಕ್ಕೆ ಅನುವು ಮಾಡಿಕೊಡುತ್ತವೆ.













Click it and Unblock the Notifications