ಈ ಅಶಿಕ್ಷ 'ಶಿಕ್ಷಕ'ನನ್ನು ಜನರು ಅದ್ಹೇಗೆ ಆರಿಸಿದರೋ?
ಹಿಂದೊಮ್ಮೆ ಮಹಾರಾಷ್ಟ್ರ ಸದನದಲ್ಲಿ ಚಪಾತಿ ಗುಣಮಟ್ಟ ಉತ್ತಮಮಟ್ಟದಲ್ಲಿ ಇಲ್ಲವೆಂದು, ರಂಜಾನ್ ಸಮಯದಲ್ಲಿ ಉಪವಾಸ ಮಾಡುತ್ತಿದ್ದ ಮುಸ್ಲಿಂ ಯುವಕನೊಬ್ಬನ ಗಂಟಲಿಗೆ ಆ ಚಪಾತಿಯನ್ನು ತುರುಕಿ ರಾದ್ಧಾಂತ ಎಬ್ಬಿಸಿದ್ದರು ರವೀಂದ್ರ ಗಾಯಕ್ವಾಡ್.
ಮುಂಬೈ, ಮಾರ್ಚ್ 25 : ಏರ್ ಇಂಡಿಯಾದ ಹಿರಿಯ ಉದ್ಯೋಗಿಗೆ ಚಪ್ಪಲಿಯಿಂದ ಹೊಡೆದು ರಾದ್ಧಾಂತ ಮಾಡಿಯೂ ಕ್ಷಮೆ ಕೇಳಲು ನಿರಾಕರಿಸುತ್ತಿರುವ ರವೀಂದ್ರ ಗಾಯಕ್ವಾಡ್ ಅವರು ರಾಜಕೀಯಕ್ಕೆ ಧುಮುಕುವ ಮುನ್ನ ಶಿಕ್ಷಕರಾಗಿದ್ದರು.
ಹೌದು, ಮಹಾರಾಷ್ಟ್ರದ ಓಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ವಿಧಾನಸಭೆ ಕ್ಷೇತ್ರದಿಂದ 2 ಬಾರಿ ಮತ್ತು ಓಸ್ಮಾನಾಬಾದ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗುವ ಮುನ್ನ ಶಿವಸೇನೆಯ ನಾಯಕ ರವೀಂದ್ರ ಗಾಯಕ್ವಾಡ್ ಅವರು ಕ್ಷೇತ್ರದ ಜನರಿಗೆ 'ರವಿ ಸರ್!'[ಚಪ್ಪಲಿಯೇಟು ಪ್ರಕರಣ: ಸಂಸದ ರವೀಂದ್ರ ಬೆಂಬಲಕ್ಕೆ ನಿಂತ ಶಿವಸೇನೆ]
ಸ್ಥಳೀಯ ಕಾಲೇಜೊಂದರಲ್ಲಿ ವಾಣಿಜ್ಯ ವಿಷಯ ಕಲಿಸುತ್ತಿದ್ದ ರವೀಂದ್ರ ಗಾಯಕ್ವಾಡ್ ಈಗ ಏರ್ ಇಂಡಿಯಾ ಉದ್ಯೋಗಿಗೆ 40 ಬಾರಿ ಬಾರಿಸಿ ಸುದ್ದಿಯ ಕೇಂದ್ರಬಿಂದುವಾಗಿದ್ದರೂ ಅವರನ್ನು ಪಕ್ಷದಿಂದ ಕಿತ್ತುಹಾಕುವ ಮನಸು ಶಿವಸೇನೆ ಮಾಡಿಲ್ಲ. ಬದಲಿಗೆ ಅವರನ್ನು ಬೆಂಬಲಿಸುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಪದ್ಮಸಿನ್ಹ್ ಪಾಟೀಲ್ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಹೀರೋ ಆಗಿ ಮೆರೆದಾಡಿದ್ದರು. ಅವರಿಗೆ ಹಿಂಸಾತ್ಮಕ ಹಿನ್ನೆಲೆ ಇದ್ದರೂ ಅವರನ್ನು ಮತದಾರರು ಆರಿಸುತ್ತಲೇ ಇದ್ದಾರೆ.
ತಮಗೆ ಬಿಸಿನೆಸ್ ಕ್ಲಾಸ್ ಸೀಟ್ ಸಿಗಲಿಲ್ಲವೆಂದು ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ಜಗಳವಾಡಿ, ಅಶ್ಲೀಲ ಮಾತುಗಳನ್ನಾಡಿ, ಚಪ್ಪಲಿಯಿಂದ ಹೊಡೆದು ಅಸಭ್ಯವಾಗಿ ವರ್ತಿಸಿ ತೀವ್ರ ಟೀಕೆಗೊಳಗಾಗಿದ್ದಾರೆ. ಅವರ ಮೇಲೆ ಏನಿಲ್ಲವೆಂದರೂ 8 ಕೇಸುಗಳನ್ನು ದಾಖಲಿಸಲಾಗಿದೆ.
ಹಿಂದೊಮ್ಮೆ ಮಹಾರಾಷ್ಟ್ರ ಸದನದಲ್ಲಿ ಚಪಾತಿ ಗುಣಮಟ್ಟ ಉತ್ತಮಮಟ್ಟದಲ್ಲಿ ಇಲ್ಲವೆಂದು, ರಂಜಾನ್ ಸಮಯದಲ್ಲಿ ಉಪವಾಸ ಮಾಡುತ್ತಿದ್ದ ಮುಸ್ಲಿಂ ಯುವಕನೊಬ್ಬನ ಗಂಟಲಿಗೆ ಆ ಚಪಾತಿಯನ್ನು ತುರುಕಿ ರಾದ್ಧಾಂತ ಎಬ್ಬಿಸಿದ್ದರು ರವೀಂದ್ರ ಗಾಯಕ್ವಾಡ್.
ರವೀಂದ್ರ ಅವರ ಅಸಭ್ಯ ನಡತೆಯಿಂದ ರೊಚ್ಚಿಗೆದ್ದಿರುವ ಹಲವಾರು ವಿಮಾನಯಾನ ಸಂಸ್ಥೆಗಳು ಅವರು ವಿಮಾನ ಹತ್ತದಂತೆ ಅವರನ್ನು ನಿಷೇಧಿಸಿವೆ. ಇಂಡಿಯನ್ ಏರ್ ಲೈನ್ಸ್, ಸ್ಪೈಸ್ ಜೆಟ್, ಜೆಟ್ ಏರ್ವೇಸ್, ಇಂಡಿಗೋ ಸಂಸ್ಥೆಗಳನ್ನು ಅವರನ್ನು ಬ್ಯಾನ್ ಮಾಡಿವೆ. ಈಕಾರಣದಿಂದಾಗಿ ನಿನ್ನೆ ಅವರು ವಿಮಾನದ ಬದಲಾಗಿ ರೈಲಿನಲ್ಲಿ ಮುಂಬೈ ತಲುಪಿದ್ದರು.
ಅವರ ವಿರುದ್ಧ ಉದ್ದೇಶರಹಿತ ಕೊಲೆ ಮೊಕದ್ದಮೆ, ಸರಕಾರಿ ಉದ್ಯೋಗಿಯನ್ನು ಕರ್ತವ್ಯ ನಿರ್ವಹಿಸದಂತೆ ತಡೆದ ಕೇಸ್ ಜಡಿಯಲಾಗಿದೆ. ತಾನಂದುಕೊಂಡಂತೆ ಕೆಲಸವಾಗದಿದ್ದರೆ ಎಂಥ ಕೆಲಸಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎಂಬ ಆರೋಪ ಅವರ ಮೇಲಿದೆ. ಇಂಥ ಹಿನ್ನೆಲೆಯಿರುವ 'ರೌಡಿ' ರಾಜಕಾರಣಿಯನ್ನು ಕ್ಷೇತ್ರದ ಜನರು ಮೂರು ಬಾರಿ ಗೆಲ್ಲಿಸಿದ್ದು ಹೇಗೆ?