ದೆಹಲಿಯಲ್ಲಿ ಯುಪಿಎಯನ್ನು ಬಲಿಷ್ಠಗೊಳಿಸಬೇಕು: ಸಂಜಯ್ ರಾವತ್
ಮುಂಬೈ, ಮಾರ್ಚ್ 26: ದೆಹಲಿಯಲ್ಲಿ ಯುಪಿಎಯನ್ನು ಬಲಿಷ್ಠಗೊಳಿಸಬೇಕು, ಆಗ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತೃತೀಯ, ನಾಲ್ಕನೇ ಅಥವಾ ಐದನೇ ರಂಗ ರಚಿಸುವ ನಾಟಕಗಳು ಇಲ್ಲಿಯವರೆಗೆ ವಿಫಲವಾಗಿದೆ, ಹೀಗಾಗಿ ಈಗಿರುವ ಯುಪಿಎ ಮೈತ್ರಿಕೂಟವನ್ನು ಬಲಪಡಿಸಬೇಕು ಎಂದಿದ್ದಾರೆ.
ಪ್ರಜಾಪ್ರಭುತ್ವವನ್ನು ಕೊಲ್ಲಲೂ ಮೋದಿ ಸರ್ಕಾರ ಹಿಂಜರಿಯುವುದಿಲ್ಲ; ಶಿವಸೇನೆ
ದೆಹಲಿಯಲ್ಲಿರುವ ಕೆಲವರು ಯುಪಿಎ-2 ರಚಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಕಾಳಜಿಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಯುಪಿಎ-1ನ್ನು ಬಲಪಡಿಸಬೇಕಿದೆ ಎಂದು ಯಾರ ಹೆಸರನ್ನೂ ಹೇಳದೆ ಸೂಚ್ಯವಾಗಿ ಹೇಳಿದ್ದಾರೆ.
ಯುಪಿಎ-2 ರಚನೆಯಾದರೆ ಈಗಿರುವ ಯುಪಿಎ ಮೈತ್ರಿಕೂಟ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಿದೆ. ವಿರೋಧ ಪಕ್ಷಗಳಿಗೆ ಏನೂ ಇಲ್ಲದಂತಾಗುತ್ತದೆ ಎಂದು ರಾವತ್ ಕಳವಳ ವ್ಯಕ್ತಪಡಿಸಿದ್ದಾರೆ.
ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್(ಯುಪಿಎ) ನ್ನು ಎನ್ ಸಿಪಿ ನಾಯಕ ಶರದ್ ಪವಾರ್ ಮುನ್ನಡೆಸಬೇಕು ಎಂದಿದ್ದಾರೆ. ನಿನ್ನೆ ಕೂಡ ಸಂಜಯ್ ರಾವತ್ ಕಾಂಗ್ರೆಸ್ ಬದಲಿಗೆ ಎನ್ ಸಿಪಿ ಯುಪಿಎಯನ್ನು ಮುನ್ನಡೆಸಬೇಕೆಂದು ಹೇಳಿದ್ದರು.
ಮಾರ್ಚ್ 25 ರಂದು ರಾವತ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್, ಶಿವಸೇನೆ ಯುಪಿಎ ಭಾಗವಾಗಿಲ್ಲದಿರುವುದರಿಂದ ಸಂಜಯ್ ರಾವತ್ ಅವರು ಇಂತಹ ಹೇಳಿಕೆ ನೀಡದಂತೆ ಒತ್ತಾಯಿಸಿದೆ.
ಶರದ್ ಪವಾರ್ ಅವರ ವಕ್ತಾರರೇ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕೇಳಿದ್ದು, ಅದಕ್ಕೆ ಸಂಜಯ್ ರಾವತ್, ಆಗಿರಬಹುದು, ಶರದ್ ಪವಾರ್ ಅವರು ದೇಶದ ನಾಯಕರು. ಉದ್ಧವ್ ಠಾಕ್ರೆ ಏನು, ಶರದ್ ಪವಾರ್ ಅವರು ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಶಿವಸೇನೆ ಪ್ರತಿಕ್ರಿಯೆ ನೀಡಿದೆ.