ಭ್ರಷ್ಟಾಚಾರ ಆರೋಪ: ಅನಿಲ್ ದೇಶಮುಖ್ ಬೆಂಬಲಕ್ಕೆ ನಿಂತ ಶರದ್ ಪವಾರ್
ಮುಂಬೈ, ಮಾರ್ಚ್ 22: ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧನ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಗೃಹ ಸಚಿವ ಅನಿಲ್ ದೇಶಮುಖ್ ಅವರ ರಾಜೀನಾಮೆಗೆ ವಿರೋಧಪಕ್ಷಗಳು ಆಗ್ರಹಿಸುತ್ತಿವೆ. ಆದರೆ ಮಿತ್ರಪಕ್ಷ ಶಿವಸೇನಾದ ಬೆಂಬಲಕ್ಕೆ ನಿಂತಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಅವರ ರಾಜೀನಾಮೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಗೃಹ ಸಚಿವರ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಪವಾರ್ ನಿರಾಕರಿಸಿದ್ದಾರೆ. ಪರಮ್ಬೀರ್ ಹೇಳಿರುವ ಅವಧಿಯಲ್ಲಿ ಅನಿಲ್ ದೇಶಮುಖ್ ಅವರು ಕೋವಿಡ್ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರ ರಾಜೀನಾಮೆಯ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ ಎಂದಿದ್ದಾರೆ.
ಅನಿಲ್ ದೇಶಮುಖ್ ಅವರು ಫೆಬ್ರವರಿ 5 ರಿಂದ 15ರವರೆಗೆ ಆಸ್ಪತ್ರೆಯಲ್ಲಿದ್ದರು ಮತ್ತು ಫೆ. 15 ರಿಂದ 27ರವರೆಗೆ ನಾಗ್ಪುರದಲ್ಲಿ ಹೋಮ್ ಐಸೋಲೇಷನ್ನಲ್ಲಿದ್ದರು. ಈ ಎಲ್ಲ ದಾಖಲೆಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಹಂಚಿಕೊಳ್ಳುತ್ತೇವೆ. ಪರಮ್ ಬೀರ್ ಸಿಂಗ್ ಆರೋಪದ ಬಗ್ಗೆ ತನಿಖೆ ನಡೆಯಬೇಕಿದೆ. ಈಗ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪವಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಂಟು ಪುಟಗಳ ಸುದೀರ್ಘ ಪತ್ರ ಬರೆದಿದ್ದ ಪರಮ್ಬೀರ್ ಸಿಂಗ್, 40-50 ಕೋಟಿ ರೂ ಮೊತ್ತವನ್ನು ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ಸೇರಿದಂತೆ ಪ್ರತಿ ತಿಂಗಳೂ 100 ಕೋಟಿ ರೂ. ಹಣ ಸಂಗ್ರಹಿಸುವಂತೆ ಸಚಿನ್ ವಾಜೆಗೆ ಅನಿಲ್ ದೇಶಮುಖ್ ಸೂಚಿಸಿದ್ದರು ಎಂದು ಆರೋಪಿಸಿದ್ದರು. ಈ ಆರೋಪಗಳನ್ನು ನಿರಾಕರಿಸಿರುವ ದೇಶಮುಖ್, ಪರಮ್ಬೀರ್ ಸಿಂಗ್ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಬೆದರಿಸಿದ್ದಾರೆ.












Click it and Unblock the Notifications