ಅರ್ನಬ್ ಗೋಸ್ವಾಮಿ ವಿರುದ್ಧ ಐಪಿಎಸ್ ಅಧಿಕಾರಿ ಸಲ್ಲಿಸಿದ್ದ ಮಾನಹಾನಿ ದೂರು ವಜಾ
ಮುಂಬೈ, ಏಪ್ರಿಲ್ 9: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ, ಅವರ ಪತ್ನಿ ಮತ್ತು ಎಆರ್ಜಿ ಓಟ್ಲಿಯರ್ ಮೀಡಿಯಾ ಪ್ರೈ.ಲಿ ವಿರುದ್ಧ ಮುಂಬೈನ ಉಪ ಪೊಲೀಸ್ ಆಯುಕ್ತ ಅಭಿಷೇಕ್ ತ್ರಿಮುಖೆ ಸಲ್ಲಿಸಿದ್ದ ಮಾನಹಾನಿ ದೂರನ್ನು ಸೆಷನ್ಸ್ ನ್ಯಾಯಾಲಯವೊಂದು ವಜಾಗೊಳಿಸಿದೆ. ತ್ರಿಮುಖೆ ಸಲ್ಲಿಸಿರುವ ದೂರು ಸಂಬಂಧಿತ ಕಾನೂನುಗಳಿಗೆ ಅನ್ವಯವಾಗಿಲ್ಲ ಎಂದು ಕೋರ್ಟ್ ತಿಳಿಸಿತು.
ಅಭಿಷೇಕ್ ತ್ರಿಮುಖೆ ನೀಡಿದ್ದ ದೂರು ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 199ಕ್ಕೆ ಅನುಗುಣವಾಗಿ ಇಲ್ಲ. ಕಾನೂನಿನ ಪ್ರಕಾರ ಇಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ದೂರುದಾರನಾಗಿರಬೇಕು. ಆದರೆ ತ್ರಿಮುಖೆ ಅವರ ಪ್ರಕರಣದಲ್ಲಿ ಹಾಗೆ ಆಗಿಲ್ಲ. ಇಲ್ಲಿ ಅವರೇ ದೂರುದಾರರಾಗಿದ್ದಾರೆ ಎಂದು ಸೆಷನ್ಸ್ ನ್ಯಾಯಾಧೀಶ ಉದಯ್ ಪಡ್ವಾಲ್ ಅಭಿಪ್ರಾಯಪಟ್ಟರು.
ಫೆಬ್ರವರಿ 2ರಂದು ದೂರು ದಾಖಲಿಸಿದ್ದ ತ್ರಿಮುಖೆ, 2020ರ ಜೂನ್ 14ರಂದು ನಡೆದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯ ಫೋನ್ ರೆಕಾರ್ಡ್ಗಳನ್ನು ಸಂಗ್ರಹಿಸಿದ್ದರ ಕುರಿತು ನಡೆಸಿದ ಪ್ಯಾನಲ್ ಚರ್ಚೆಯಲ್ಲಿ ತಮ್ಮ ವಿರುದ್ಧ ಅನೇಕ ಮಾನಹಾನಿಕರ ಹೇಳಿಕೆಗಳನ್ನು ಅರ್ನಬ್ ನೀಡಿದ್ದರು. ಅದೇ ವರ್ಷ ಆಗಸ್ಟ್ 7ರಂದು ಆ ಚರ್ಚೆಯನ್ನು ಕಂಪೆನಿಯ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಆರೋಪಿಸಿದ್ದರು.

ಅಲ್ಲದೆ, ಅದೇ ವಿಚಾರವನ್ನು ರಿಪಬ್ಲಿಕ್ ಟಿವಿಯ ಮೈಕ್ರೊಬ್ಲಾಗಿಂಗ್ ವೇದಿಕೆಯಾದ ಟ್ವಿಟ್ಟರ್ನಲ್ಲಿ ಅರ್ನಬ್ ಪ್ರಕಟಿಸಿದ್ದರು. ಆರೋಪಿ ವ್ಯಕ್ತಿಗಳಿಗೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯು ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಕೆರಳಿಸುತ್ತದೆ ಎಂಬುದು ಚೆನ್ನಾಗಿ ಅರಿವಿತ್ತು. ಆರೋಪಿ ವ್ಯಕ್ತಿಗಳು ತಾವು ಜವಾಬ್ದಾರಿಯುತ ಪತ್ರಕರ್ತರಾಗಿ ನಡೆದುಕೊಳ್ಳುವುದನ್ನು ಬಿಟ್ಟು, ಈ ಪ್ರಕರಣವನ್ನು ವೈಭವೀಕರಿಸುವ ಮತ್ತು ಹಗರಣ ಎಂಬಂತೆ ಬಿಂಬಿಸುವ ಮೂಲಕ ಸನ್ನಿವೇಶದ ಲಾಭ ಪಡೆದುಕೊಳ್ಳುವುದನ್ನು ಆಯ್ಕೆ ಮಾಡಿಕೊಂಡರು. ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಮತ್ತು ಚಿತ್ರಗಳನ್ನು ಬಳಸಿಕೊಳ್ಳುವ ಮೂಲಕ ದೂರುದಾರನನ್ನು ಅವಮಾನಿಸುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಿದ್ದರು.












Click it and Unblock the Notifications