ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣ: ಇ.ಡಿ ವಿಚಾರಣೆಗೆ ಸಂಜಯ್ ರಾವತ್ ಪತ್ನಿ ಗೈರು
ಮುಂಬೈ, ಡಿಸೆಂಬರ್ 29: ಪಿಎಂಸಿ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಮಗೆ ಇನ್ನಷ್ಟು ಸಮಯ ಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಅವರು ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.
ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವರ್ಷಾ ರಾವತ್ ಅವರಿಗೆ ಮಂಗಳವಾರ ಹಾಜರಾಗುವಂತೆ ಇ.ಡಿ. ಸಮನ್ಸ್ ನೀಡಿತ್ತು. ಇದು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಇ.ಡಿ ಕಚೇರಿ ಮುಂದೆ ಶಿವಸೇನಾ ಬೆಂಬಲಿಗರು, ಪ್ರಾದೇಶಿಕ ಬಿಜೆಪಿ ಕಾರ್ಯಾಲಯ ಎಂಬ ಬ್ಯಾನರ್ ಹಾಕಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾರ ಬಗ್ಗೆಯೂ ಹೆದರಿಕೆಯಿಲ್ಲ: ಇ.ಡಿ ನೋಟಿಸ್ಗೆ ಸಂಜಯ್ ರಾವತ್ ಪ್ರತಿಕ್ರಿಯೆ
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ನಲ್ಲಿ (ಪಿಎಂಸಿ) ಕೆಲವು ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ವ್ಯಾಪಕ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಕಳೆದ ಸೆಪ್ಟೆಂಬರ್ನಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಬ್ಯಾಂಕ್ನ ಮೇಲೆ ನಿರ್ಬಂಧ ವಿಧಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಹಣವನ್ನು ವಿತ್ಡ್ರಾ ಮಾಡುವ ಪ್ರಕ್ರಿಯೆಗೆ ತಡೆಯೊಡ್ಡಿತ್ತು. ಇದರಿಂದ ಸುಮಾರು 9 ಲಕ್ಷ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿದ್ದರು.
ಕಾಂಗ್ರೆಸ್ ದುರ್ಬಲವಾಗಿದೆ, ಪವಾರ್ ಯುಪಿಎ ಮುಖ್ಯಸ್ಥರಾದರೆ ಬೆಂಬಲ: ಶಿವಸೇನಾ
ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರವೀಣ್ ರಾವತ್ ಮತ್ತು ವರ್ಷಾ ರಾವತ್ ಅವರ ನಡುವೆ ಹಣಕಾಸಿನ ವರ್ಗಾವಣೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ವರ್ಷಾ ಅವರಿಗೆ ಮುಂಬೈನಲ್ಲಿನ ಇ.ಡಿ. ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸುವಂತೆ ಸೂಚನೆ ನೀಡಲಾಗಿತ್ತು. ಈ ಹಿಂದೆ ಅವರು ಅನಾರೋಗ್ಯ ನೆಪಗಳೊಡ್ಡಿ ಎರಡು ಬಾರಿ ಸಮನ್ಸ್ಗಳಿಂದ ತಪ್ಪಿಸಿಕೊಂಡಿದ್ದರು. ಮಂಗಳವಾರ ಕೂಡ ಅವರು ಗೈರಾಗಿದ್ದಾರೆ.