ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ
ಮುಂಬೈ, ಅ. 15: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿಆರೋಪಿಯಾಗಿರುವ ಆದಿತ್ಯ ಆಳ್ವ ಹುಡುಕಿಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರು ಮುಂಬೈಗೆ ಬಂದಿದ್ದಾರೆ. ಇಂದು ಬಾಲಿವುಡ್ ನಟ, ಆದಿತ್ಯ ಆಳ್ವ ಅವರ ಬಾವ ವಿವೇಶ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ ರಾಣಿ, ಆದಿತ್ಯ ಆಳ್ವ ಸೇರಿದಂತೆ ಹಲವರ ಮೇಲೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಎ-6 ಆರೋಪಿಯಾಗಿರುವ ಆದಿತ್ಯ ಆಳ್ವಾ ತಲೆ ಮರೆಸಿಕೊಂಡಿದ್ದಾರೆ. ನಟ ವಿವೇಕ್ ಒಬೆರಾಯ್ ಸಂಪರ್ಕದಲ್ಲಿ ಆದಿತ್ಯ ಇದ್ದಾರೆ ಎಂಬ ಸುಳಿವು ಸಿಕ್ಕಿದ್ದರಿಂದ ಇಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಕಾಟನ್ ಪೇಟೆ ಠಾಣೆ ಪೊಲೀಸರು ಎಲ್ಲಾ ಆರೋಪಿಗಳ ಮೇಲೆ ಸೆಪ್ಟೆಂಬರ್ 4ರಂದು ಎಫ್ಐಆರ್ ಹಾಕಿದ್ದಾರೆ. ಆದರೆ, ರಾಗಿಣಿ ಅವರ ಆಪ್ತ ಎನ್ನಲಾದ ರವಿಶಂಕರ್ ಹೆಸರು ಮಾತ್ರ ಎಲ್ಲೂ ಪ್ರಸ್ತಾಪಿಸಲಾಗಿಲ್ಲ. ಮೊದಲ ಆರೋಪಿ ಶಿವಪ್ರಕಾಶ್, ಶೇಖ್ ಫಾಜಿಲ್ ಇನ್ನೂ ಪತ್ತೆಯಾಗಿಲ್ಲ.
ಆದಿತ್ಯ ಆಳ್ವ ಸೇರಿದಂತೆ ಆರೋಪಿಗಳ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆ ಸೆಕ್ಷನ್ 21, 21 ಸಿ, 27 ಎ, 27 ಬಿ, 29 ಹಾಗೂ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಪ್ರಕರಣ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ಕನಿಷ್ಠ 10 ರಿಂದ 20 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು ತನಕ ದಂಡ ವಿಧಿಸಬಹುದು.
ರೆಸಾರ್ಟ್ ಮೇಲೆ ದಾಳಿಯಾಗಿತ್ತು
ಹೆಬ್ಬಾಳ ಬಳಿ ಇರುವ ಹೌಸ್ ಆಫ್ ಲೈಫ್ ರೆಸಾರ್ಟ್ ನ ಮೇಲೆ ಮೇಲೆ ದಾಳಿ ನಡೆಸಿರುವ ಸಿಸಿಬಿ, ಸದ್ಯ ಮ್ಯಾನೇಜರ್ ಸಿದ್ದರಾಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಆರೋಪಗಳನ್ನು ಅಲ್ಲಗೆಳೆದಿರುವ ಆದಿತ್ಯ ಮ್ಯಾನೇಜರ್ ಸ್ಟ್ಯಾನಿ, ಇಲ್ಲಿ ಅನೈತಿಕ ಚಟುವಟಿಕೆ, ಡ್ರಗ್ಸ್ ಸೇವನೆ ನಡೆಸಿಲ್ಲ, ಹೈ ಫೈ ಪಾರ್ಟಿ ನಡೆಯುತ್ತಿತ್ತು. ನಾಲ್ಕಾರು ತಿಂಗಳ ಹಿಂದೆ ಒಂದು ಪಾರ್ಟಿ ಬಿಟ್ಟರೆ ನಂತರ ಯಾವುದೇ ಪಾರ್ಟಿ ನಡೆದಿಲ್ಲ. ಸದ್ಯ ರೆಸಾರ್ಟ್ ಮುಚ್ಚುವ ಬಗ್ಗೆ ಮಾತುಕತೆ ನಡೆದಿತ್ತು ಎಂದಿದ್ದಾರೆ.
ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ. ಆದಿತ್ಯ ಅವರ ಸೋದರಿ ಪ್ರಿಯಾಂಕಾ ಅವರು ನಟ ವಿವೇಕ್ ಒಬೆರಾಯ್ ವರಿಸಿದ್ದಾರೆ. ಉದ್ಯಮಿಯಾಗಿ ಗುರಿಸಿಕೊಂಡಿರುವ ಆದಿತ್ಯ ಆಳ್ವ ಅವರ ಸದಾಶಿವ ನಗರದ 10ನೇ ಕ್ರಾಸ್ ನಲ್ಲಿರುವ ಮನೆ ಸದ್ಯ ಖಾಲಿಯಾಗಿದ್ದು, ಆಳ್ವ ಎಲ್ಲಿದ್ದಾರೆ ಎಂಬುದರ ಮಾಹಿತಿಯಿಲ್ಲ, ಬಹುಶಃ ವಿದೇಶಕ್ಕೆ ಹಾರಿರಬಹುದು ಎಂದು ಸಿಸಿಬಿ ಕೂಡಾ ಸ್ಪಷ್ಟಪಡಿಸಿದೆ. ಮ್ಯಾನೇಜರ್ ಸ್ಟ್ಯಾನಿ ಕೂಡಾ ಈ ವಿಷಯ ದೃಢಪಡಿಸಿದ್ದು, ನಂದಿನಿ ಆಳ್ವ ಅವರು ಯುಎಸ್ ಗೆ ತೆರಳಿದ್ದು ಲಾಕ್ಡೌನ್ ನಿಂದಾಗಿ ಮತ್ತೆ ಭಾರತಕ್ಕೆ ವಾಪಸ್ ಬರಲು ಆಗಿರಲಿಲ್ಲ ಎಂದಿದ್ದಾರೆ.












Click it and Unblock the Notifications