ಮಹಾರಾಷ್ಟ್ರದಲ್ಲಿ ಕರ್ನಾಟಕ ಮೂಲದ ಸಾಧು ಹತ್ಯೆ
ನಾಂದೇಡ್, ಮೇ 24 : ಮಹಾರಾಷ್ಟ್ರದ ನಾಂದೇಡ್ನಲ್ಲಿ ಸಾಧುವೊಬ್ಬರನ್ನು ಹತ್ಯೆ ಮಾಡಲಾಗಿದೆ. ಪಾಲ್ಗರ್ನಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಿದ ಪ್ರಕರಣದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.
ಹತ್ಯೆಯಾದವರನ್ನು ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಎಂದು ಗುರುತಿಸಲಾಗಿದೆ. ನಾಂದೇಡ್ನಲ್ಲಿರುವ ಆಶ್ರಮದಲ್ಲಿಯೇ ಇವರ ಹತ್ಯೆ ನಡೆದಿದೆ.
ನಾಂದೇಡ್ ಜಿಲ್ಲೆಯ ಉಮ್ರಿಯಲ್ಲಿರುವ ಆಶ್ರಮದಲ್ಲಿ ಸಾಧುವಿನ ಮೃತದೇಹ ಶನಿವಾರ ರಾತ್ರಿ ಪತ್ತೆಯಾಗಿದೆ. ಆಶ್ರಮದ ಶೌಚಾಲಯದಲ್ಲಿ ಮತ್ತೊಬ್ಬ ವ್ಯಕ್ತಿಯ ಮೃತದೇಹವೂ ಪತ್ತೆಯಾಗಿದೆ. ಇಬ್ಬರನ್ನೂ ಯಾರೋ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಆಶ್ರಮದಲ್ಲಿ ಎರಡು ಶವಗಳು ಸಿಕ್ಕಿರುವುದನ್ನು ನಾಂದೇಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಕುಮಾರ್ ಮಾಗರ್ ಖಚಿತಪಡಿಸಿದ್ದಾರೆ. ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನೂ ಸಿಕ್ಕಿಲ್ಲ.
ದರೋಡೆ ಮಾಡಲು ಆಶ್ರಮಕ್ಕೆ ನುಗ್ಗಿದ್ದ ಯುವಕ ಎರಡೂ ಕೊಲೆಗಳನ್ನು ಮಾಡಿದ್ದಾನೆ ಎಂದು ಮಹಾರಾಷ್ಟ್ರದ ಸುದ್ದಿವಾಹಿನಿಗಳು ವರದಿ ಪ್ರಸಾರ ಮಾಡಿವೆ. ಪೊಲೀಸರು ಈ ಕುರಿತು ಅಧಿಕೃತವಾದ ಯಾವುದೇ ಹೇಳಿಕೆ ನೀಡಿಲ್ಲ.
"ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ" ಎಂದು ಎಸ್ಪಿ ವಿಜಯ್ ಕುಮಾರ್ ಮಾಗರ್ ತಿಳಿಸಿದ್ದಾರೆ.












Click it and Unblock the Notifications