ಒಂದು ಟ್ವೀಟ್; ರಾಜಸ್ಥಾನದಿಂದ ಮುಂಬೈಗೆ ರೈಲಲ್ಲಿ ಬಂತು ಒಂಟೆ ಹಾಲು
ಮುಂಬೈ, ಏಪ್ರಿಲ್ 12 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳಿಗಾಗಿ ಜನರು ಪರದಾಡುತ್ತಿದ್ದಾರೆ. ಮುಂಬೈನ ಮಹಿಳೆಯೊಬ್ಬರು ಮಾಡಿದ ಟ್ವೀಟ್ಗೆ ರೈಲ್ವೆ ಸ್ಪಂದಿಸಿದ್ದು, ಅಗತ್ಯ ವಸ್ತುವನ್ನು ಸರಬರಾಜು ಮಾಡಿದೆ.
ಮುಂಬೈನ ನೇಹಾ ಕುಮಾರಿ ಅವರು ಒಂಟೆಯ ಹಾಲು ಬೇಕು ಎಂದು ಟ್ವೀಟ್ ಮಾಡಿದ್ದರು. 20 ಲೀಟರ್ ಒಂಟೆ ಹಾಲನ್ನು ರಾಜಸ್ಥಾನದಿಂದ ರೈಲಿನ ಮೂಲಕ ಮುಂಬೈಗೆ ತರಿಸಲಾಗಿದೆ. ಒಂದು ಟ್ವೀಟ್ ಮಾಡಿದ್ದಕ್ಕೆ ಈ ನೆರವು ಸಿಕ್ಕಿದೆ.
ನೇಹಾ ಕುಮಾರಿ ಅವರ ಮೂರುವರೆ ವರ್ಷದ ಮಗ ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದ. ಹಸು, ಮೇಕೆ, ಎಮ್ಮೆ ಮತ್ತು ದನದ ಹಾಲು ಕುಡಿದರೆ ಆತನಿಗೆ ಅಲರ್ಜಿ ಆಗುತ್ತದೆ. ಆದರೆ, ಲಾಕ್ ಡೌನ್ ಪರಿಣಾಮ ಮುಂಬೈನಲ್ಲಿ ಒಂಟೆ ಹಾಲು ಸಿಗುತ್ತಿರಲಿಲ್ಲ.

ಈ ಕುರಿತು ಟ್ವೀಟ್ ಮಾಡಿದ್ದ ಅವರು ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿದ್ದರು. ಈ ಟ್ವೀಟ್ ನೋಡಿ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದರು. ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ರಾಜಸ್ಥಾನದಲ್ಲಿ ಹಾಲು ಸಿಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ಅದನ್ನು ಮುಂಬೈಗೆ ತರಿಸುವುದು ಹೇಗೆ?.
ಅರುಣ್ ಬೋಥ್ರಾ ರಾಜಸ್ಥಾನದಲ್ಲಿ ಅದ್ವಿಕ್ ಫುಡ್ಸ್ ಸಂಪರ್ಕಿಸಿದ್ದರು. ಅವರು ಒಂಟೆ ಹಾಲಿನ ಪೌಡರ್ ನೀಡಲು ತಯಾರಿದ್ದರು. ಆದರೆ, ಅದನ್ನು ತರಿಸಲು ಸಾಧ್ಯವಾಗಲಿಲ್ಲ. ಇದನ್ನು ಅವರು ಟ್ವೀಟ್ ಸಹ ಮಾಡಿದ್ದರು.
ರೈಲ್ವೆ ಇಲಾಖೆ ಅಧಿಕಾರಿ ತರುಣ್ ಜೈನ್ ಒಂಟೆ ಹಾಲನ್ನು ತರಿಸಲು ಇಲಾಖೆಯಿಂದ ಸಾಧ್ಯವೇ ಎಂದು ಅಧಿಕಾರಿಗಳ ಜೊತೆ ಚರ್ಚಿಸಿದರು. ರಾಜಸ್ಥಾನದ ಫಲ್ನಾ ನಿಲ್ದಾಣದಿಂದ ಹಾಲು ತರಿಸಲು ಒಪ್ಪಿಗೆಯೂ ಸಿಕ್ಕಿತು.
ಫಲ್ನಾದಲ್ಲಿ ರೈಲು ನಿಲುಗಡೆ ಇಲ್ಲದಿದ್ದರೂ ಒಂಟೆಯ ಹಾಲಿಗಾಗಿ ರೈಲು ನಿಲ್ಲಿಸಿ 20 ಲೀಟರ್ ಹಾಲನ್ನು ತರಲಾಗಿದೆ. ರೈಲ್ವೆ ಇಲಾಖೆಯ ಕಾರ್ಯಕ್ಕೆ ಜನರು ಸಹ ಮೆಚ್ಚುಗೆ ಸೂಚಿಸಿದ್ದಾರೆ.












Click it and Unblock the Notifications