ಬಿಜೆಪಿ, ಆರೆಸ್ಸೆಸ್ ವಿರುದ್ಧ 10 ಪಟ್ಟು ಉತ್ಸಾಹದೊಂದಿಗೆ ಹೋರಾಡುತ್ತೇನೆ: ರಾಹುಲ್ ಗಾಂಧಿ
ಮುಂಬೈ, ಜುಲೈ 4: ರೆಸ್ಸೆಸ್ ಮತ್ತು ಬಿಜೆಪಿ ನಿಯಂತ್ರಣಕ್ಕೆ ಸಿಲುಕಿ ದೇಶ ಮತ್ತು ಜನರು ನಲುಗುವಂತಾಗುತ್ತಿದೆ. ತಮ್ಮ ಹೋರಾಟ ರಾಜಕೀಯವಾಗಿರದೆ, ಆರೆಸ್ಸೆಸ್ ಮತ್ತು ಬಿಜೆಪಿಯ ನಿಲುವುಗಳ ವಿರುದ್ಧವಾಗಿತ್ತು ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದ ಕಾಂಗ್ರೆಸ್ನ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ, ಮತ್ತಷ್ಟು ಪ್ರಬಲವಾಗಿ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧದ ಹೋರಾಟವನ್ನು ನಡೆಸುವುದಾಗಿ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅರೆಸ್ಸೆಸ್ ಕೈವಾಡವಿದೆ ಎಂಬ ಹೇಳಿಕೆ ನೀಡಿದ್ದಕ್ಕೆ ಮಾನನಷ್ಟ ಪ್ರಕರಣ ಎದುರಿಸುತ್ತಿದ್ದ ರಾಹುಲ್ ಗಾಂಧಿ, ಮುಂಬೈನ ಸ್ಥಳೀಯ ನ್ಯಾಯಾಲಯಕ್ಕೆ ಗುರುವಾರ ಹಾಜರಾಗಿದ್ದರು. ಈ ಪ್ರಕರಣದಲ್ಲಿ ರಾಹುಲ್ ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯ ಅವರನ್ನು ದೋಷಮುಕ್ತರನ್ನಾಗಿಸಿದೆ.
ಆರೆಸ್ಸೆಸ್ ಮಾನನಷ್ಟ ಮೊಕದ್ದಮೆ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್
ನ್ಯಾಯಾಲಯದ ತೀರ್ಪಿನ ಬಳಿಕ ಮಾತನಾಡಿದ ರಾಹುಲ್, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧದ ತಮ್ಮ ಸೈದ್ಧಾಂತಿಕ ಹೋರಾಟದಲ್ಲಿ ಇನ್ನು ಮುಂದೆ ಕಳೆದ ಐದು ವರ್ಷಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಹುರುಪಿನೊಂದಿಗೆ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
'ನಾನು ಬಡವರು, ರೈತರು ಮತ್ತು ಕಾರ್ಮಿಕರ ಜತೆಗಿದ್ದೇನೆ. ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧದ ಹೋರಾಟ ಮುಂದುವರಿಯಲಿದೆ' ಎಂದರು.
ಹತ್ತು ಪಟ್ಟು ಹೆಚ್ಚು ಹೋರಾಟ
ತಮ್ಮ ಹೋರಾಟವು ಸೈದ್ಧಾಂತಿಕ ಹೋರಾಟ ಎಂದು ಅವರು ಕರೆದಿದ್ದಾರೆ. 'ಕಳೆದ ಐದು ವರ್ಷಗಳಲ್ಲಿ ನಾನು ಮಾಡಿದ್ದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಉತ್ಸಾಹದೊಂದಿಗೆ ಅವರ ವಿರುದ್ಧ ಹೋರಾಟ ನಡೆಸಲಿದ್ದೇನೆ' ಎಂದು ಹೇಳಿದರು.
'ಆಕ್ರಮಣ ನಡೆಯುತ್ತಿದೆ. ನಾನು ಅದನ್ನು ಎಂಜಾಯ್ ಮಾಡುತ್ತಿದ್ದೇನೆ' ಎಂದ ಅವರು ತಮ್ಮ ಹೋರಾಟದ ಬಗ್ಗೆ ಹೆಚ್ಚೇನೂ ಹೇಳಲು ಹೋಗುವುದಿಲ್ಲ. ಹೇಳಬೇಕಿರುವುದ್ದನ್ನೆಲ್ಲ ಬುಧವಾರ ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ಸಾರ್ವಜನಿಕರಿಗೆ ತಿಳಿಸಿರುವುದಾಗಿ ಹೇಳಿದರು.
ಮಾನಹಾನಿ ಪ್ರಕರಣ
ಬಿಜೆಪಿ-ಆರೆಸ್ಸೆಸ್ ಸಿದ್ಧಾಂತಕ್ಕೂ ಗೌರಿ ಲಂಕೇಶ್ ಅವರ ಹತ್ಯೆಗೂ ನಂಟು ಬೆಸೆದಿದ್ದ ಕಾರಣಕ್ಕೆ ಆರೆಸ್ಸೆಸ್ ಕಾರ್ಯಕರ್ತ ಧ್ರುತಿಮಾನ್ ಜೋಶಿ ಎಂಬುವವರು 2017ರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಸೀತಾರಾಮ್ ಯಚೂರಿ ಅವರ ವಿರುದ್ಧ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ನಿಜವಾದ ಅಪಾಯ ಮುಂದಿದೆ: ವಿದಾಯದ ಪತ್ರದಲ್ಲಿ ರಾಹುಲ್ ಗಾಂಧಿ ಕಳವಳ
ರಾಹುಲ್ ತಪ್ಪಿತಸ್ಥರಲ್ಲ
ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ತಪ್ಪಿತಸ್ಥರಲ್ಲ ಎಂದು ಆದೇಶಿಸಿ, ಶ್ಯೂರಿಟಿ ಪಡೆದು ರಾಹುಲ್ ಅವರನ್ನು ಬಿಡುಗಡೆ ಮಾಡಿದೆ. ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಆರ್.ಎಸ್.ಎಸ್ ಇದೆ ಎನ್ನುವ ಹೇಳಿಕೆಯನ್ನು ರಾಹುಲ್ ಗಾಂಧಿ ಮಾರ್ಚ್ 6, 2014ರಲ್ಲಿ ನೀಡಿದ್ದರು. ಈ ಹೇಳಿಕೆ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಭಿವಾಂಡಿ ನ್ಯಾಯಾಲಯದಲ್ಲಿ ಮತ್ತೊಂದು ದೂರಿನ ವಿಚಾರಣೆ ನಡೆಯುತ್ತಿದೆ.
ಆರೆಸ್ಸೆಸ್ ಅಪಾಯಕಾರಿ ಎಂದ ರಾಹುಲ್
ಈ ದೇಶದ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಆರೆಸ್ಸೆಸ್ನ ಉದ್ದೇಶ ಈಗ ಪೂರ್ಣಗೊಂಡಿದೆ. ನಮ್ಮ ಪ್ರಜಾಪ್ರಭುತ್ವವು ಮೂಲಭೂತವಾಗಿ ದುರ್ಬಲವಾಗಿದೆ. ಈಗಿನಿಂದ ನಿಜವಾದ ಅಪಾಯ ಎದುರಾಗಲಿದೆ. ಭಾರತದ ಭವಿಷ್ಯದಲ್ಲಿ ಚುನಾವಣೆಗಳು ಮಾಯವಾಗಲಿದ್ದು, ಕೇವಲ ಆಚರಣೆಯಾಗಿ ಉಳಿಯಲಿವೆ.
ಆರೆಸ್ಸೆಸ್ ಅಧಿಕಾರವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದು ಭಾರತದಲ್ಲಿ ಊಹಿಸಲು ಅಸಾಧ್ಯವಾದ ಮಟ್ಟದ ಹಿಂಸಾಚಾರ ಮತ್ತು ನೋವಿಗೆ ಎಡೆಮಾಡಿಕೊಡಲಿದೆ. ರೈತರು, ನಿರುದ್ಯೋಗಿ ಯುವಜನರು, ಮಹಿಳೆಯರು, ಬುಡಕಟ್ಟುಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಅತಿ ಹೆಚ್ಚು ಸಂಕಷ್ಟ ಅನುಭವಿಸಲಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೇಶದ ಆರ್ಥಿಕತೆ ಮತ್ತು ಪ್ರತಿಷ್ಠೆ ನಾಶವಾಗಲಿದೆ. ಪ್ರಧಾನಿ ಅವರ ಗೆಲುವು ಅವರ ವಿರುದ್ಧದ ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಿದಂತೆ ಅಲ್ಲ. ಯಾವುದೇ ಹಣ ಅಥವಾ ಪಿತೂರಿಯು ಸತ್ಯದ ಬೆಳಕನ್ನು ಮುಚ್ಚಿಹಾಕಲಾರದು ಎಂದು ರಾಹುಲ್ ಗಾಂಧಿ ರಾಜೀನಾಮೆ ಪತ್ರದಲ್ಲಿ ಬರೆದಿದ್ದರು.