ಕೇಂದ್ರ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ: ಉದ್ದವ್ ಠಾಕ್ರೆ
ಮುಂಬೈ, ಸೆಪ್ಟೆಂಬರ್ 2: ಕೇಂದ್ರ ಸಂಪುಟ ನಾಳೆ(ಸೆ.3) ವಿಸ್ತರಣೆಯಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ತನಗೆ ಬಿಜೆಪಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಶಿವ ಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದರು.
ಭಾನುವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆ; ಎಐಎಡಿಎಂಕೆಗೆ ನಿರಾಸೆ
ಮುಂಬೈಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಮಾಧ್ಯಮಗಳಿಂದ ವಿಷಯ ತಿಳಿದಿದ್ದು ಬಿಟ್ಟರೆ ಬಿಜೆಪಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಶಿವಸೇನೆಯ ಸಂಸದರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವ ಬಗ್ಗೆಯೂ ಯಾರೂ ತಮ್ಮೊಂದಿಗೆ ಚರ್ಚೆ ನಡೆಸಿಲ್ಲ' ಎಂದರು.
ಹಾಗೇ ಮುಂದುವರಿದು, 'ಅಷ್ಟಕ್ಕೂ ನಮ್ಮದು ಅಧಿಕಾರ ದಾಹವಲ್ಲ. ನಮಗೆ ಸಮಾಜ ಸೇವೆಯೆ ಮುಖ್ಯ. ಸದ್ಯಕ್ಕೆ ಮುಂಬೈ ನಾಗರಿಕರ ಕ್ಷೇಮವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಅಷ್ಟೆ' ಎಂದು ಸಂಪುಟ ವಿಸ್ತರಣೆಯಂಥ ಮಹತ್ವದ ವಿಷಯದಲ್ಲೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಯಾಯ್ದಿದ್ದಾರೆ.
ಸೆಪ್ಟೆಂಬರ್ 3, ಭಾನುವಾರದಂದು ಕೇಂದ್ರ ಸಂಪುಟ ವಿಸ್ತರಣೆಯಾಗಲಿದ್ದು, ಕೇಂದ್ರ ಸಂಪುಟದಲ್ಲಿ ಹೊಸ ಮುಖಗಳು ಕಾಣಿಸಿಸಕೊಳ್ಳುವ ಸಾಧ್ಯತೆಯಿದೆ.