'ಶವಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷಿಯಿಲ್ಲ'
ಮುಂಬೈ, ಮೇ 22: ಮಾರಣಾಂತಿಕ ಕೋವಿಡ್-19 ರೋಗದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಯಾವುದೇ ಸ್ಮಶಾನವನ್ನು ಗೊತ್ತುಪಡಿಸುವ ಅಧಿಕಾರ ಮುಂಬೈ ಸಿವಿಕ್ ಕಾರ್ಪೊರೇಷನ್ ಗೆ ಇದೆ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ಅಲ್ಲದೇ, ನೋವೆಲ್ ಕೊರೊನಾ ವೈರಸ್ ಶವಗಳ ಮೂಲಕ ಹರಡುತ್ತದೆ ಎಂಬುದನ್ನು ಖಚಿತ ಪಡಿಸಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಕೋವಿಡ್-19 ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಏಪ್ರಿಲ್ 9 ರಂದು 20 ಸ್ಮಶಾನಗಳನ್ನು ಗುರುತಿಸಿ ಬಿ.ಎಂ.ಸಿ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೂಡಲಾಗಿದ್ದ ದಾವೆಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎಸ್.ಎಸ್.ಶಿಂಧೆ ವಜಾಗೊಳಿಸಿದ್ದಾರೆ.

ಬೃಹನ್ ಮುಂಬೈ ಮುನಿಸಿಪಾಲ್ ಕಾರ್ಪೊರೇಷನ್ (ಬಿ.ಎಂ.ಸಿ) ಹೊರಡಿಸಿದ ಸುತ್ತೋಲೆ ಕಾನೂನಿನ ಪ್ರಕಾರವಾಗಿದೆ. ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನಗಳನ್ನು ಗೊತ್ತುಪಡಿಸುವ ಅಧಿಕಾರ ಬಿ.ಎಂ.ಸಿಗೆ ಇದೆ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುವಾಗ, ಭಾರತ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.












Click it and Unblock the Notifications