ದಾವೂದ್ ಬಂಟರ ಸ್ಥಳಗಳ ಮೇಲೆ ಎನ್ಐಎ ದಾಳಿ; ಭಯೋತ್ಪಾದನೆಗೆ ಸಂಚು ಬಹಿರಂಗ
ಮುಂಬೈ, ಮೇ 9: ಪಾಕಿಸ್ತಾನದಲ್ಲಿ ನೆಲಸಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟರು, ಹವಾಲಾ ಆಪರೇಟರ್ಗಳಿಗೆ ಸೇರಿದ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಸೋಮವಾರ ದಾಳಿ ಮಾಡಿದ್ಧಾರೆ.
ನಾಗಪಾದ, ಪಾರೆಲ್, ಗೋರೆಗಾಂವ್, ಬೊರಿವಿಲಿ, ಸಾಂಟಾಕ್ರುಜ್, ಮುಂಬ್ರಾ, ಭೇಂಡಿ ಬಜಾರ್ ಮತ್ತಿತರ ಪ್ರದೇಶಗಳಲ್ಲಿರುವ ಸ್ಥಳಗಳ ಮೇಲೆ ದಾಳಿ ನಡೆದಿದೆ. ದಾಳಿಗೆ ಮುನ್ನವೇ ಕಳೆದ ಫೆಬ್ರವರಿಯಲ್ಲಿ ದಾವೂದ್ ಗ್ಯಾಂಗ್ ಜೊತೆ ಶಾಮೀಲಾಗಿರುವ ಹವಾಲಾ ಆಪರೇಟರ್ಗಳು ಮತ್ತು ಡ್ರಗ್ ಮಾರಾಟಗಾರರ ವಿರುದ್ಧ ಎನ್ಐಎ ಪ್ರಕರಣ ದಾಖಲಿಸಿತ್ತು.
ಭಾರತದ ಹವಾಲ ನೆಟ್ವರ್ಕ್, ಡ್ರಗ್ ಮಾರಟಗಾರರ ಜಾಲದ ಜೊತೆಗೆ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ, ವ್ಯವಸ್ಥಿತ ಅಪರಾಧ ಕೃತ್ಯ ಇತ್ಯಾದಿ ಮೂಲಕ ಭಾರತದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಡಿ ಕಂಪನಿಯ ಉನ್ನತ ಹಂತದ ನಾಯಕತ್ವ ಶಾಮೀಲಾಗಿದೆ ಎಂದು ಆರೋಪಿಸಲಾಗಿತ್ತು.

ಭಯ ಸೃಷ್ಟಿಸುವ ಸಂಚು: ಇಂದಿನ ದಾಳಿಯಲ್ಲಿ ಎನ್ಐಎ ಅಧಿಕಾರಿಗಳಿಗೆ ಮಹತ್ವದ ಸುಳಿವು ನೀಡುವ ಮಾಹಿತಿ ಸಿಕ್ಕಿರುವುದು ತಿಳಿದುಬಂದಿದೆ. ರಾಜಕೀಯ ಮುಖಂಡರೂ ಸೇರಿದಂತೆ ಭಾರತದ ಗಣ್ಯ ವ್ಯಕ್ತಿಗಳ ಮೇಲೆ ಬಾಂಬ್, ಗನ್ ಮೊದಲಾದ ಅಪಾಯಕಾರಿ ಅಸ್ತ್ರಗಳ ಮೂಲಕ ದಾಳಿ ಮಾಡಿ ಜನರ ಮನಸ್ಸಿನಲ್ಲಿ ಭಯ ಸೃಷ್ಟಿಸಲೆಂದೇ ಡಿ ಕಂಪನಿಯಿಂದ ವಿಶೇಷ ಪಡೆಯನ್ನು ಸ್ಥಾಪಿಸಲಾಗಿದೆ ಎಂದು ಸಿಎನ್ಎನ್-ನ್ಯೂಸ್18 ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ದಾವೂದ್ ಇಬ್ರಾಹಿಂ ಬಂಟರಿಗೆ ಸೇರಿದ ಡಿ ಕಂಪನಿಯ ವಿಶೇಷ ತಂಡವು ಶಿವಸೇನಾ ಮುಖಂಡರನ್ನು ವಿಶೇಷವಾಗಿ ಗುರಿ ಮಾಡಿರುವುದು ತಿಳಿದುಬಂದಿದೆ. ಈ ನಾಯಕರನ್ನು ಹತ್ಯೆಗೈಯಲು ದಾವೂದ್ ಬಂಟ ಛೋಟಾ ಶಕೀಲ್ ಇಬ್ಬರು ಶಾರ್ಪ್ಶೂಟರ್ಗಳನ್ನು ಕಳುಹಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ.

ಭಾರತದ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ವಾತಾವರಣ ಸೃಷ್ಟಿ ಮಾಡಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಗುರಿ ಮಾಡಲಾಗಿದೆ ಎಂಬ ಮಾಹಿತಿಯೂ ಇದೆ ಎಂದು ವರದಿ ಮಾಡಲಾಗಿದೆ.
ದಾವೂದ್ ಇಬ್ರಾಹಿಂ, ಹಾಜಿ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಚಿಕ್ನಾ, ಇಬ್ರಾಹಿಮ್ ಮುಷ್ತಾಕ್ ಅಬ್ದುಲ್ ರಜಾಕ್ ಮೆಮೋನ್ ಅಲಿಯಾಸ್ ಟೈಗರ್ ಮೊಮೋನ್ ಮೊದಲಾದವರು ಪ್ರಮುಖ ಆರೋಪಿಗಳಾಗಿದ್ದಾರೆ.
ದಾವೂದ್ ಇಬ್ರಾಹಿಂ 1993 ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಮುನ್ನ ಮುಂಬೈನ ಭೂಗತ ಜಗತ್ತಿನ ಡಾನ್ ಆಗಿದ್ದವ. ಬಾಂಬ್ ಸ್ಫೋಟದ ಬಳಿಕ ಮುಂಬೈ ತೊರೆದು ಪಾಕಿಸ್ತಾನದ ಕರಾಚಿಯಲ್ಲಿ ನೆಲೆ ಮಾಡಿಕೊಂಡು ಅಲ್ಲಿಂದಲೇ ಮುಂಬೈ ಭೂಗತ ಪ್ರಪಂಚವನ್ನು ಆಳುತ್ತಿದ್ದಾನೆ. ಮುಂಬೈನ ಆರ್ಥಿಕತೆಯ ಪ್ರಮುಖ ಭಾಗ ಹಾಗೂ ಬಾಲಿವುಡ್ ಈ ದಾವೂದ್ನ ಡಿ ಕಂಪನಿಯ ಹಿಡಿತದಲ್ಲಿದೆ ಎಂಬ ಮಾತುಗಳಿವೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications