ಮುಂಬೈ ದಾಳಿ ಸಂತ್ರಸ್ತರಿಗೆ ಪುಷ್ಪನಮನ ಸಲ್ಲಿಸಿದ ನೇತನ್ಯಾಹು
ಮುಂಬೈ, ಜನವರಿ 18: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಇಂದು '26/11 ಮುಂಬೈ ದಾಳಿ'ಯಲ್ಲಿ ಮಡಿದವರಿಗೆ ಪುಷ್ಪ ನಮನ ಸಲ್ಲಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಮುಂಬೈ ದಾಳಿಯ ಸಂತ್ರಸ್ತರಿಗೆ ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ನಿರ್ಮಿಸಲಾದ ಸ್ಮಾರಕಕ್ಕೆ ತೆರಳಿದ ನೇತನ್ಯಾಹು ಪುಷ್ಪನಮನ ಸಲ್ಲಿಸಿದರು. 2008ರ ಸೆಪ್ಟೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯಲ್ಲಿ 166 ಜನರು ಅಸುನೀಗಿದ್ದರು.
ನಂತರ ನೇತನ್ಯಾಹು ನಾರಿಮನ್ ಹೌಸ್ ಗೆ ಭೇಟಿ ನೀಡಿದರು. ಅಲ್ಲಿ ಅವರು 11 ವರ್ಷದ ಇಸ್ರೇಲಿ ಮೂಲದ ಹುಡುಗ ಮೋಷೆ ಹೋಲ್ಟ್ಸ್ ಬರ್ಗ್ ನನ್ನು ಭೇಟಿಯಾದರು.

2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಮೋಷೆ ತಂದೆ ರಬ್ಬಿ ಗೇವ್ರಿಯಲ್ ಹೋಲ್ಟ್ಸ್ ಬರ್ಗ್ ಹಾಗೂ ತಾಯಿ ರಿವ್ಕಾ ಹತ್ಯೆಯಾಗಿದ್ದರು. ಯಹೂದಿ ದಂಪತಿ ನಾರಿಮನ್ ಹೌಸ್ ನಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ನಡೆಸುತ್ತಿದ್ದರು. ದಾಳಿ ವೇಳೆ ಇವರು ಉಗ್ರರ ಗುಂಡಿಗೆ ಬಲಿಯಾಗಿದ್ದರಿಂದ ಪುಟ್ಟ ಬಾಲಕ ಮೋಷೆ ಅನಾಥವಾಗಿದ್ದ.
ಕಳೆದ 9 ವರ್ಷಗಳಿಂದ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ಮೋಷೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುರನ್ನು ಭೇಟಿಯಾಗಲು ಮಂಗಳವಾರ ಮುಂಬೈಗೆ ಬಂದಿದ್ದ. ಇಂದು ಆತನನ್ನು ನೇತನ್ಯಾಹು ಭೇಟಿಯಾಗಿ ಧೈರ್ಯ ತುಂಬಿದರು.












Click it and Unblock the Notifications