ಎನ್ಸಿಪಿ ಮುಖಂಡ ದಿಲೀಪ್ ''ಮಹಾ'' ಹಂಗಾಮಿ ಸ್ಪೀಕರ್
ಮುಂಬೈ, ನವೆಂಬರ್ 29: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಶಾಸಕ, ಹಿರಿಯ ಮುಖಂಡ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಶುಕ್ರವಾರದಂದು ನೇಮಿಸಲಾಗಿದೆ.
1956ರ ಅಕ್ಟೋಬರ್ 30ರಂದು ಜನಿಸಿದ ದಿಲೀಪ್ ವಲ್ಸೆ ಪಾಟೀಲ್ ಅವರು ಮಹಾರಾಷ್ಟ್ರದ ಅಂಬೆಗಾಂವ್ ಮೂಲದವರು, 6 ಬಾರಿ ಮಹಾರಾಷ್ಟ್ರದ ವಿಧಾನಸಭಾ ಸದಸ್ಯರಾಗಿ ಅನುಭವ ಹೊಂದಿದ್ದಾರೆ. 2019ರಲ್ಲಿ ಗೆಲುವು ಸಾಧಿಸಿ 7ನೇ ಬಾರಿಗೆ ಅಸೆಂಬ್ಲಿ ಪ್ರವೇಶಿಸಲಿದ್ದಾರೆ.
1999-2009ರ ಅವಧಿಯಲ್ಲಿ ವಿತ್ತ, ಯೋಜನೆ, ಇಂಧನ, ಉನ್ನತ ಶಿಕ್ಷಣ, ಮೆಡಿಕಲ್ ಶಿಕ್ಷಣ ಮುಂತಾದ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಕ್ಕರೆ ಕಾರ್ಖಾನೆ ಸಹಕಾರ ನಿಯಮಿತ ಸಂಸ್ಥೆ( ಎನ್ ಎಫ್ ಸಿಎಸ್ ಎಫ್) ನ ಮುಖ್ಯಸ್ಥರಾಗಿದ್ದಾರೆ.

ದಿಲೀಪ್ ಅವರಿಗೂ ಮುನ್ನ ಬಿಜೆಪಿಯ ಕಾಳಿದಾಸ್ ಕೊಲಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಎಂದು ನೇಮಿಸಲಾಗಿತ್ತು. ಶನಿವಾರದಂದು ಹೊಸ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.
ಸದನದ ನಡಾವಳಿ, ವಿಶ್ವಾಸಮತಯಾಚನೆಗೆ ಎಷ್ಟು ಕಾಲಾವಕಾಶ ನೀಡಬೇಕು ಎಂಬುದು ಸ್ಪೀಕರ್ ನಿರ್ದೇಶನದಂತೆ ನಡೆಯಲಿದೆ. ವಿಶ್ವಾಸಮತ ಯಾಚನೆ ಚರ್ಚೆ ಕಾಲಾವಧಿ, ಸದನದ ನಡಾವಳಿ ಬಗ್ಗೆ ಸ್ಪೀಕರ್ ನಿರ್ಣಯ ಅಂತಿಮವಾಗಿರುತ್ತದೆ.












Click it and Unblock the Notifications