ಪಿಎಂಎಲ್ಎ ಪ್ರಕರಣ: ನವಾಬ್ ಮಲಿಕ್ಗೆ ಮಾರ್ಚ್ 21 ರವರೆಗೆ ನ್ಯಾಯಾಂಗ ಬಂಧನ
ಮುಂಬೈ ಮಾರ್ಚ್ 07: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾನುವಾರದವರೆಗೆ ಜಾರಿ ನಿರ್ದೇಶನಾಲಯ (ಇಡಿ) ಯಲ್ಲಿದ್ದ ರಾಜ್ಯ ಸಂಪುಟ ಸಚಿವ ನವಾಬ್ ಮಲಿಕ್ ಅವರನ್ನು ವಿಶೇಷ ನ್ಯಾಯಾಲಯ ಸೋಮವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ನವಾಬ್ ಮಲಿಕ್ ಅವರನ್ನು ಮಾರ್ಚ್ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಮುಂಬೈ ನ್ಯಾಯಾಲಯ ಕಳುಹಿಸಿದೆ.
ಫೆಬ್ರವರಿ 23ರಂದು ಮಲಿಕ್ ಅವರನ್ನು ವಿಚಾರಣೆಗಾಗಿ ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ ಕರೆದೊಯ್ಯಲಾಯಿತು. ವಿಚಾರಣೆ ಬಳಿಕ ಅವರನ್ನು ಬಂಧಿಸಲಾಯಿತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳ ಆರಂಭದಲ್ಲಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ ಅವರ ಮುಂಬೈನ ನಿವಾಸದ ಮೇಲೆ ಇಡಿ ದಾಳಿ ನಡೆಸಿತ್ತು. ಮುಂಬೈನಲ್ಲಿ ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವ ಹಲವು ಸ್ಥಳಗಳಲ್ಲಿ ಇಡಿ ಶೋಧ ನಡೆಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ಗೆ ಸಂಬಂಧಿಸಿದ 10 ವಿವಿಧ ಸ್ಥಳಗಳಲ್ಲಿ ಇಡಿ ನಾಗ್ಪಾಡಾದಲ್ಲಿ ಶೋಧ ನಡೆಸಿದೆ. ದಾವೂದ್ನ ಸೋದರಳಿಯ ಮತ್ತು ಪಾರ್ಕರ್ನ ಮಗ ಅಲಿಶಾ ಪಾರ್ಕರ್ ಮತ್ತು ಚೋಟಾ ಶಕೀಲ್ನ ಸಹಾಯಕ ಸಲೀಂ ಖುರೇಷಿ ಅಕಾ ಸಲೀಂ ಫ್ರೂಟ್ಸ್ನನ್ನೂ ಏಜೆನ್ಸಿ ವಿಚಾರಣೆ ನಡೆಸಿತ್ತು.
ಮಹಾ ಅಘಾಡಿ ಸರ್ಕಾರದ ಸಚಿವರಾದ ನವಾಬ್ ಮಲಿಕ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ನವಾಬ್ ಮಲಿಕ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಇಡಿ ಬುಧವಾರ(ಫೆಬ್ರವರಿ 23) ಬಂಧಿಸಿದೆ. ಈ ಬಂಧನ ಮಹಾರಾಷ್ಟ್ರದ ರಾಜಕೀಯದಲ್ಲಿ ಕೋಲಹಲವನ್ನು ಸೃಷ್ಟಿಸಿದೆ. ನವಾಬ್ ಮಲಿಕ್ ಬಂಧನದ ನಂತರ ಎಲ್ಲಾ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಡಿ ಕ್ರಮಕ್ಕೆ ಸಂಬಂಧಿಸಿದಂತೆ ಎನ್ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ನವಾಬ್ ಮಲಿಕ್ ಅವರು ಕುರ್ಲಾದಲ್ಲಿ ಹಲವು ವರ್ಷಗಳ ಹಿಂದೆ ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿದ ಜಮೀನಿಗೆ ಸಂಬಂಧಿಸಿದಂತೆ ಇಡಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಮಲಿಕ್ ಭೂಗತ ಪಾತಕಿಗಳಿಂದ ಈ ಜಮೀನನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಮಲಿಕ್ ವಿರುದ್ಧದ ಈ ಗಂಭೀರ ಆರೋಪವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೆಲವು ತಿಂಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದರು. ಮಲಿಕ್ ಈ ಜಮೀನಿನ ಮೌಲ್ಯವನ್ನು ಕಡಿಮೆ ತೋರಿಸಿದ್ದಾರೆಂದು ಫಡ್ನವೀಸ್ ಹೇಳಿದ್ದರು.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ. ಕೆಲ ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಇಕ್ಬಾಲ್ ಕಸ್ಕರ್ನ ಸಾಕ್ಷ್ಯದ ಮೇರೆಗೆ ಇಡಿ ನವಾಬ್ ಮಲಿಕ್ನನ್ನು ವಿಚಾರಣೆಗೊಳಪಡಿಸಿದೆ ಎಂದು ಹೇಳಲಾಗುತ್ತಿದೆ.
ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರ ಹೆಸರು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸದಲ್ಲ. ಆದರೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಎನ್ಸಿಬಿ ಕ್ರೂಸ್ ಡ್ರಗ್ ಕೇಸ್ ವಿಚಾರವಾಗಿ ಬಂಧಿಸಿದಾಗ ಅವರು ಎನ್ಸಿಬಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದರು. ಈ ವಿಷಯದಲ್ಲಿ ನವಾಬ್ ಮಲಿಕ್ ಬಹಿರಂಗವಾಗಿಯೇ ಆರೋಪಗಳನ್ನು ಮಾಡಿದರು. ಈ ವೇಳೆ ನವಾಬ್ ಮಲಿಕ್ ಭಾರೀ ಸುದ್ದಿಯಲ್ಲಿದ್ದರು. ಅವರು ಎನ್ಸಿಬಿಯ ಆಗಿನ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಹರಿಹಾಯ್ದಿದ್ದರು. ಇಡೀ ವಿಚಾರದಲ್ಲಿ ಎನ್ಸಿಬಿ ಕೂಡ ವಿಚಾರದ ಆಳಕ್ಕೆ ಇಳಿಯಬೇಕಾಯಿತು.
Recommended Video
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಲಿಕ್ ಅವರು ಭೂಗತ ಜಗತ್ತಿನ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬೈ ಸ್ಫೋಟದ ಆರೋಪಿ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸರ್ದಾರ್ ವಾಲಿ ಶಾ ಖಾನ್ ಇಬ್ಬರನ್ನು ಫಡ್ನವಿಸ್ ಹೆಸರಿಸಿದ್ದರು. ದಾವೂದ್ ಸಹೋದರಿ ಹಸೀನಾ ಪರ್ಕರ್ ಅವರ ಅಂಗರಕ್ಷಕರಾಗಿದ್ದ ಮೊಹಮ್ಮದ್ ಸಲೀಂ ಪಟೇಲ್ ಅವರ ಹೆಸರು ಬಹಿರಂಗಪಡಿಸಿದ್ದರು. ಹಸೀನಾಳ ಸಂಪೂರ್ಣ ಭೂಮಿ ಮೊಹಮ್ಮದ್ ಸಲೀಂ ಪಟೇಲ್ ಹೆಸರಿನಲ್ಲಿದೆ. ಮಲಿಕ್ ಈ ಇಬ್ಬರು ಆರೋಪಿಗಳಿಂದ ಕುರ್ಲಾ ಬಳಿ ಸುಮಾರು ಮೂರು ಎಕರೆ ಜಮೀನು ಖರೀದಿಸಿದ್ದು, ಅದಕ್ಕೆ ಅತ್ಯಂತ ಕಡಿಮೆ ಬೆಲೆ ನೀಡಲಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.