ದಾಬೋಲ್ಕರ್ ಹತ್ಯೆ; ಸಮುದ್ರದಿಂದ ಪಿಸ್ತೂಲ್ ವಶಕ್ಕೆ ಪಡೆದ ಸಿಬಿಐ
ಮುಂಬೈ, ಮಾರ್ಚ್ 05 : ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ. 2013ರ ಆಗಸ್ಟ್ 20ರಂದು ಗುಂಡು ಹಾರಿಸಿ ದಾಬೋಲ್ಕರ್ ಹತ್ಯೆ ಮಾಡಲಾಗಿತ್ತು.
ನರೇಂದ್ರ ದಾಬೋಲ್ಕರ್ ಹತ್ಯೆಗೆ ಬಳಕೆ ಮಾಡಿದ್ದ ಪಿಸ್ತೂಲ್ಅನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅರಬ್ಬಿ ಸಮುದ್ರಕ್ಕೆ ಪಿಸ್ತೂಲ್ ಎಸೆಯಲಾಗಿತ್ತು. ನೌಕಾದಳದ ಮುಳುಗು ತಜ್ಞರ ನೆರವು ಪಡೆದು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
ಪಿಸ್ತೂಲ್ ಅನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಾಯೋಗಾಲಯಕ್ಕೆ ಕಳುಹಿಸಲಾಗಿದೆ. 2019ರಲ್ಲಿ ಸಿಬಿಐ ಪುಣೆ ನ್ಯಾಯಾಲಯಕ್ಕೆ ಥಾಣೆ ಸಮೀಪ ಪಿಸ್ತೂಲ್ ಸಮುದ್ರಕ್ಕೆ ಎಸೆಯಲಾಗಿದ್ದು, ಅದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

ನರೇಂದ್ರ ದಾಬೋಲ್ಕರ್ ಮರಣೋತ್ತರ ಪರೀಕ್ಷೆ ವರದಿಯ ಅನ್ವಯ ಗುಂಡಿನ ಗಾತ್ರ, ಇದೇ ಪಿಸ್ತೂಲ್ ಬಳಕೆ ಮಾಡಲಾಗಿದೆಯೇ? ಎಂಬುದನ್ನು ವಿಧಿ ವಿಜ್ಞಾನ ಪ್ರಾಯೋಗಾಲಯ ತೀರ್ಮಾನ ಮಾಡಲಿದೆ. ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನರೇಂದ್ರ ದಾಬೋಲ್ಕರ್ ಹತ್ಯೆಗೂ ಕರ್ನಾಟಕದ ಗೌರಿ ಲಂಕೇಶ್, ಎಂ. ಎಂ. ಕಲಬುರ್ಗಿ ಹತ್ಯೆಗೂ ಸಂಬಂಧವಿರುವುದು ಈಗಾಗಲೇ ತಿಳಿದು ಬಂದಿದೆ. ಆದ್ದರಿಂದ, ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸರು ಸಹ ಸಿಬಿಐ ಜೊತೆ ಈ ತನಿಖೆಗೆ ಕೈ ಜೋಡಿಸಲಿದ್ದಾರೆ.
2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ಸೇತುವೆ ಬಳಿ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ನಡೆದಿತ್ತು. ಬೆಳಗಿನ ವಾಯು ವಿಹಾರ ಹೋಗುತ್ತಿದ್ದ ಅವರ ಮೇಲೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿದ್ದರು. 2014ರಲ್ಲಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.












Click it and Unblock the Notifications