ಚಿತ್ರಗಳು : ವರ್ಷಧಾರೆಗೆ ತತ್ತರಿಸುತ್ತಿರುವ ಮುಂಬೈ
ಮುಂಬೈ, ಜು. 12 : ಮುಂಗಾರಿನ ಆರಂಭದಲ್ಲಿ ಕೈಕೊಟ್ಟರೂ ಕಳೆದ ಕೆಲ ದಿನಗಳಿಂದ ಭರ್ಜರಿಯಾಗಿ ಸುರಿಯುತ್ತಿರುವ ವರ್ಷಧಾರೆ ಮುಂಬೈ ನಗರಿಯನ್ನು ಅಕ್ಷರಶಃ ತೇಲಾಡಿಸುತ್ತಿದೆ. ಗುರುವಾರ 10 ಸೆಂ.ಮೀ.ನಷ್ಟು ಸುರಿದಿದ್ದ ಮಳೆ ಶುಕ್ರವಾರ ಅಲ್ಪ ಬಿಡುವು ಪಡೆದಿತ್ತು. ಆದರೆ, ಶನಿವಾರ ಭಾರೀ ಮಳೆ ಸುರಿಯದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಮತ್ತು ಶುಕ್ರವಾರ ಸುರಿದ ಕುಂಭದ್ರೋಣ ಮಳೆ ಹೊಸದಾಗಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಬಿಟ್ಟಿಲ್ಲ. ನೀರು ಬ್ಯಾಗ್ ಪರೀಕ್ಷಣಾ ಕೋಣೆಯನ್ನು ಹೊಕ್ಕಿದ್ದು, ಇನ್ನೂ ಹೆಚ್ಚು ಸುರಿದಿದ್ದರೆ ಪ್ರಯಾಣಿಕರ ಬ್ಯಾಗ್ ಗಳು ಮಳೆಗೆ ಆಹುತಿಯಾಗುತ್ತಿದ್ದವು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಎರಡು ದಿನಗಳ ಸತತ ಮಳೆಯಿಂದಾಗಿ ಅಂಧೇರಿ ಅಂಧಕಾರದಲ್ಲಿ ಮುಳುಗಿದೆ. ಹಿಂದ್ಮಾತಾ, ಮಾಹಿಮ್ ಜಂಕ್ಷನ್, ಕುರ್ಲಾ ಪಶ್ಚಿಮ ಮತ್ತು ಚೆಂಬೂರ್ ಪ್ರದೇಶಗಳು ಜಲಾವೃತವಾಗಿವೆ. ರೈಲು ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆ ಇಷ್ಟೊಂದು ಸುರಿಯುತ್ತಿದ್ದರೂ ಹಲವಾರು ಕೆರೆಗಳು ಇನ್ನೂ ತುಂಬಿಲ್ಲದಿರುವುದು ಮುಂಗಾರು ವೈಫಲ್ಯಕ್ಕೆ ಹಿಡಿದ ಕನ್ನಡಿ.
ಬೃಹನ್ಮುಂಬೈ ಕಾರ್ಪೊರೇಷನ್ ವಿಪ್ಪತ್ತು ನಿರ್ವಹಣಾ ತಂಡದ ಪ್ರಕಾರ, ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಆದರೆ, ಈ ಮಳೆಯಿಂದಾಗಿ ಜನಜೀವನ ಸಾಕಷ್ಟು ಅಸ್ತವ್ಯಸ್ತವಾಗಿದೆ. ಮುಂಗಾರಿನಲ್ಲಿ ಇದು ಪ್ರತಿವರ್ಷ ಜರುಗುವ ವಿದ್ಯಮಾನವಾದ್ದರಿಂದ, ಮಕ್ಕಳಿಗೆ ಬೇಸಿಗೆ ರಜಾ ನೀಡುವ ಬದಲು ಮುಂಗಾರು ರಜಾ ನೀಡಬೇಕೆಂಬ ಮಾತು ಕೂಡ ಮಳೆಯಲ್ಲಿಯೇ ಕ್ಷೀಣವಾಗಿ ಕೇಳಿಬಂದಿದೆ.
ಇದೇ ರೀತಿಯ ಮಹಾಮಳೆ 2005ರಲ್ಲಿ ಸುರಿದು ಮುಂಬೈಯನ್ನು ಅರ್ಧಭಾಗದಷ್ಟು ಮುಳುಗಿಸಿತ್ತು. ಆಗ 24 ಗಂಟೆಗಳಲ್ಲಿ ಸುಮಾರು ನೂರು ಸೆಂ.ಮೀ. ಮಳೆ ಸುರಿದಿತ್ತು.

ಮುಂಬೈ ರಸ್ತೆಯಲ್ಲೇ ಈಜುಗೊಳ
ಇಂಥ ಮಳೆ ಕಂಡು ಅದೆಷ್ಟು ದಿನವಾಗಿತ್ತೋ? ರಸ್ತೆಯೇ ಈಜುಗೊಳದಂತಾದಾಗ ಮಕ್ಕಳು ಹುಚ್ಚೆದ್ದು ಆಟಕ್ಕಿಳಿದಿರುವ ದೃಶ್ಯ.

ರಸ್ತೆ ದಾಟಿಸಲು ಟ್ಯಾಕ್ಸಿ ಚಾಲಕನ ಹರಸಾಹಸ
ಭರ್ಜರಿ ಮಳೆಯಿಂದಾಗಿ ರಸ್ತೆ ಎತ್ತ ಸಾಗುತ್ತಿದೆ ಎಂಬುದೇ ತಿಳಿಯದಂತಾಗಿದೆ. ಇಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಸಿಲುಕಿಕೊಂಡ ಟ್ಯಾಕ್ಸಿಯನ್ನು ದಾಟಿಸಲು ಹರಸಾಹಸಪಡುತ್ತಿರುವುದು.

ಎಲ್ಲೆಲ್ಲೂ ಟ್ರಾಫಿಕ್ ಜಾಮ್
ನಗರದ ಜೀವನಾಡಿಯಾಗಿರುವ ಟ್ಯಾಕ್ಸಿಗೆ ಈ ಮಳೆಯಿಂದಾಗಿ ಭಾರೀ ಹೊಡೆತ ಬಿದ್ದಿದೆ.

ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ
ಶುಕ್ರವಾರ ಕೂಡ ಮಳೆ ಮುಂದುವರಿದಿದ್ದರಿಂದ ವಾಹನಗಳ ಸಂಚಾರಕ್ಕೆ ಹೊಡೆತ ಬಿದ್ದಿತ್ತು. ವಾಹನ ಸಂಚಾರ ಕೂಡ ವಿರಳವಾಗಿತ್ತು.

ನಿಧಾನಗತಿಯಲ್ಲಿ ಸಾಗುತ್ತಿರುವ ರೈಲುಗಳು
ಮುಂಬೈ ಮಂದಿಗೆ ರೈಲೇ ಜೀವಾಳ. ರೈಲು ನಿಂತರೆ ಮುಂಬೈ ನಗರವೇ ನಿಂತಂತೆ. ಈ ಕುಂಭದ್ರೋಣ ಮಳೆಯಿಂದಾಗಿ ರೈಲು ತನ್ನ ಎಂದಿನ ವೇಗ ಕಳೆದುಕೊಂಡಿವೆ.

ಶಾಲೆಗೆ ಹೋಗುವುದೋ ಮನೆಗೆ ಮರಳುವುದೋ
ಯುನಿಫಾರ್ಮ್ ಹಾಕ್ಕೊಂಡು ಬ್ಯಾಗ್ ಹೆಗಲಿಗೇರಿಸಿಕೊಂಡ ಮಕ್ಕಳಿಗೆ ದ್ವಂದ್ವ. ಶಾಲೆಗೆ ಹೋಗುವುದೋ ಮನೆಗೆ ಮರಳುವುದೋ?

ಒಂದೆಡೆ ಸಂಕಷ್ಟ, ಮತ್ತೊಂದೆಡೆ ಖುಷಿ
ಧೋಧೋ ಸುರಿಯುತ್ತಿರುವ ಮಳೆಯಿಂದಾಗಿ ಸಂಕಷ್ಟು ಎದುರಾಗಿದ್ದರೂ, ಸದ್ಯ ಮಳೆಯಾಯಿತಲ್ಲ ಎಂದು ಜನರಿಗೆ ಖುಷಿಯೋ ಖುಷಿ. ಇಂಥ ಮಳೆ ಬೆಂಗಳೂರಿಗೆ ಎಂದು ಆಗಮಿಸುವುದು?

ಮಳೆಯಿಂದಾಗಿ ಒದ್ದೆಯಾಗಿರುವ ಮುಂಬೈನ ಮತ್ತೊಂದು ಚಿತ್ರ
ಮಳೆಯಿಂದಾಗಿ ಒದ್ದೆಯಾಗಿರುವ ಮುಂಬೈನ ಮತ್ತೊಂದು ಚಿತ್ರ.












Click it and Unblock the Notifications