ಒಂದು ಕುಟುಂಬದ ಅಧಿಕಾರ ದಾಹಕ್ಕೆ ದೇಶ ಜೈಲಾಯಿತು: ಮೋದಿ
ಮುಂಬೈ, ಜೂನ್ 26: "ಒಂದು ಕುಟುಂಬದ ಅಧಿಕಾರ ದಾಹಕ್ಕೆ, ಗುಲಾಮಗಿರಿಗೆ ಇಡೀ ದೇಶವನ್ನೇ ಸೆರೆಮನೆ ಮಾಡಲಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರತಿ ಮನುಷ್ಯನೂ ಭಯದಲ್ಲೇ ಬದುಕುತ್ತಿದ್ದ. ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು" ಎಂದು ಪ್ರಧಾನಿ ಮೋದಿ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು.
ಮುಂಬೈಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, 'ನಾವು ತುರ್ತು ಪರಿಸ್ಥಿತಿ ದಿನವನ್ನು ಕರಾಳ ದಿನ ಎಂದು ಆಚರಿಸುವುದು ಕೇವಲ ಕಾಂಗ್ರೆಸ್ ಅನ್ನು ಟೀಕಿಸುವುದಕ್ಕಲ್ಲ. ಆದರೆ ನಮ್ಮ ಇಂದಿನ ಯುವಕರಿಗೆ ಭೂತಕಾಲದಲ್ಲಿ ಏನಾಯಿತು ಎಂಬುದು ತಿಳಿಯಬೇಕು ಎಂಬುದು ನಮ್ಮ ಉದ್ದೇಶ' ಎಂದರು.
ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದಲ್ಲಿ ಏನಾಯಿತು ಎಂಬುದು ಈಗಿನ ಯುವಕರಿಗೆ ಗೊತ್ತಿಲ್ಲ. ಸ್ವಾತಂತ್ರ್ಯವಿಲ್ಲದೆ ಬದುಕುವುದು ಎಷ್ಟು ಕಷ್ಟ ಎಂಬುದು ಅವರಿಗೆ ಅರಿವಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

'ಇಂದು ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳ ಪದಚ್ಯುತಿಗೆ ಆಗ್ರಹಿಸುತ್ತಿರುವವರೂ ಅಷ್ಟೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ಹೇರುವವರ ಮನಸ್ಥಿತಿ ಹೇಗಿತ್ತೋ, ಹಾಗೇ ಅವರ ಮನಸ್ಥಿತಿಯೂ ಇದೆ' ಎಂದು ಅವರು ಪರೋಕ್ಷವಾಗಿ ಈಗಿನ ಕಾಂಗ್ರೆಸ್ ಮತ್ತು ವಿಪಕ್ಷಗಳನ್ನು ಟೀಕಿಸಿದರು.
'ದೇಶದಲ್ಲಿ ಆಂತರಿಕ ಶಾಂತಿಯಿಲ್ಲ' ಎಂಬ ಸಬೂಬು ನೀಡಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು 1975, ಜೂನ್ 25 ರಂದು ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳೂ ಶಕ್ತಿ ಕಳೆದುಕೊಂಡು, ಸರ್ವಾಧಿಕಾರ ಆಡಳಿತ ಜಾರಿಗೆ ಬಂದಿತ್ತು. ಈ ಕರಾಳ ದಿನಕ್ಕೆ 43 ವರ್ಷಗಳು ಸಂದ ಹಿನ್ನೆಲೆಯಲ್ಲಿ ಈ ಕುರಿತು ಮೋದಿ ಮಾತನಾಡಿದರು.












Click it and Unblock the Notifications