Organic Farming: ಸೌತೆ ಬೆಳೆದು 23 ದಿನದಲ್ಲೇ 1.5 ಲಕ್ಷ ರೂ. ಗಳಿಸಿದ ITI ಯುವಕ
ಉತ್ತರ ಪ್ರದೇಶದ ಮೌ ಜಿಲ್ಲೆಯ ಯುವಕ ಅಖಿಲೇಶ್ ಮೌರ್ಯ ಅವರ ಕೃಷಿ ಯಶೋಗಾಥೆ ಇದು. ಹೌದು, ಐಟಿಐ ಮುಗಿಸಿ ಪದವಿ ವ್ಯಾಸಂಗ ಮಾಡಿದ್ದರೂ ಕೂಡ ಕೆಲಸ ಹುಡುಕಿಕೊಂಡು ನಗರದತ್ತ ಮುಖ ಮಾಡುವ ಬದಲು ತಮ್ಮ ಸ್ವಗ್ರಾಮಕ್ಕೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡು ಭಾರಿ ಯಶಸ್ಸು ಕಂಡಿದ್ದಾರೆ. ಕೇವಲ 23 ದಿನಗಳಲ್ಲಿ ಬರೋಬ್ಬರಿ 1.5 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಐಟಿಐ ಪದವೀಧರ ಅಖಿಲೇಶ್ ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ಸಾವಯವ ಕೃಷಿಯತ್ತ ಒಲವು
ತಂದೆಯನ್ನು ನೋಡಿ ಕೃಷಿಯತ್ತ ಆಕರ್ಷಿತರಾಗಿದ್ದ ಅಖಿಲೇಶ್, ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರ ಸಲಹೆಯ ಮೇರೆಗೆ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಸಾವಯವ ಕೃಷಿಗೆ ಒಲವು ತೋರಿದರು. ಒಂದು ಎಕರೆ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡು, ಎತ್ತರಿಸಿದ ಪಾತಿ ವಿಧಾನದಲ್ಲಿ ಸಾವಯವ ಸೌತೆಕಾಯಿ ಬೆಳೆಯಲು ಆರಂಭಿಸಿದರು. ಸಿಂಜೆಂಟಾ, ಕ್ಲಾಸ್ ಅರ್ನೊ ಹಾಗೂ ದೆಹಲಿಯ ಎಸ್ಐಆರ್ ತಳಿಯ ಸೌತೆಕಾಯಿ ಸಸಿಗಳನ್ನು ಕಳೆದ ಮಾರ್ಚ್ ತಿಂಗಳಲ್ಲಿ ನಾಟಿ ಮಾಡಿದ್ದರು. ಉದ್ಯೋಗದ ಪರ್ಯಾಯವಾಗಿ ಶುರುವಾದ ಕೃಷಿ ಇದೀಗ ಅವರ ಮುಖ್ಯ ಆದಾಯದ ಮೂಲವಾಗಿ ಬದಲಾಗಿದೆ.

ಇಳುವರಿ ಮತ್ತು ಮಾರುಕಟ್ಟೆ ಬೆಲೆ
ಮೇ ತಿಂಗಳ ಆರಂಭದಿಂದಲೇ ಸೌತೆಕಾಯಿ ಕೊಯ್ಲು ಶುರುವಾಗಿದೆ. ಪ್ರತಿದಿನ 7 ರಿಂದ 8 ಕ್ವಿಂಟಾಲ್ ಸೌತೆಕಾಯಿ ಇಳುವರಿ ಸಿಗುತ್ತಿದ್ದು, ಮೇ 1 ರಿಂದ ಈವರೆಗೆ ಸುಮಾರು 10 ಟನ್ ಸೌತೆಕಾಯಿಯನ್ನು ಮಾರುಕಟ್ಟೆಗೆ ಪೂರೈಸಿದ್ದಾರೆ. ಆರಂಭದಲ್ಲಿ ಪ್ರತಿ ಕೆಜಿಗೆ 14 ರಿಂದ 15 ರೂಪಾಯಿ ಬೆಲೆ ಇತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ಕೆಜಿಗೆ 20 ರೂಪಾಯಿಗಿಂತ ಹೆಚ್ಚಿನ ಬೆಲೆ ಸಿಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಅಖಿಲೇಶ್ ತಿಳಿಸಿದ್ದಾರೆ. ಕೊಯ್ಲು ಪ್ರಕ್ರಿಯೆ ಬಿರುಸುಗೊಂಡಿರುವುದರಿಂದ ಪ್ರತಿದಿನ 7 ರಿಂದ 8 ಜನ ಸ್ಥಳೀಯ ಕಾರ್ಮಿಕರಿಗೂ ಇವರು ಉದ್ಯೋಗವನ್ನೂ ಸಹ ನೀಡಿದ್ದಾರೆ.
ಕೇವಲ 30 ಸಾವಿರ ಹೂಡಿಕೆ, 1.5 ಲಕ್ಷ ಲಾಭ
ಒಂದು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಕೆ ಹಾಗೂ ಭೂಮಿ ಸಿದ್ಧಪಡಿಸಲು ಅಖಿಲೇಶ್ ಮಾಡಿದ್ದ ಒಟ್ಟು ಹೂಡಿಕೆ ಕೇವಲ 30,000 ರೂಪಾಯಿಗಳು. ಆದರೆ ಸೌತೆಕಾಯಿ ಕೊಯ್ಲು ಶುರುವಾದ ಕೇವಲ 23 ದಿನಗಳ ಅಂತರದಲ್ಲಿ ಬರೋಬ್ಬರಿ 1.5 ಲಕ್ಷ ರೂಪಾಯಿ ಆದಾಯ ಕೈಸೇರಿದೆ. ಕಡಿಮೆ ಹೂಡಿಕೆಯಲ್ಲಿ, ಸೂಕ್ತ ನೀರಾವರಿ ಹಾಗೂ ಸರಿಯಾದ ಬೆಳೆ ಆಯ್ಕೆ ಮಾಡಿಕೊಂಡರೆ ಕೃಷಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂಬುದನ್ನು ಅಖಿಲೇಶ್ ಸಾಬೀತುಪಡಿಸಿದ್ದಾರೆ.
ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಪ್ರೋತ್ಸಾಹಿಸುತ್ತಿರುವ ಬೆಳೆ ವೈವಿಧ್ಯತೆ ಮತ್ತು ಹನಿ ನೀರಾವರಿ ತಂತ್ರಜ್ಞಾನಗಳು ರೈತರಿಗೆ ವರದಾನವಾಗುತ್ತಿವೆ. ವಿದ್ಯಾವಂತ ಯುವಕರು ಸಾಂಪ್ರದಾಯಿಕ ಉದ್ಯೋಗಗಳತ್ತ ಮಾತ್ರ ಗಮನ ಹರಿಸದೆ ಕೃಷಿ, ತೋಟಗಾರಿಕೆ ಮತ್ತು ಸಾವಯವ ಕೃಷಿಯತ್ತ ಮುಖ ಮಾಡುತ್ತಿರುವ ಇತ್ತೀಚಿನ ಸಕಾರಾತ್ಮಕ ಬೆಳವಣಿಗೆಗೆ ಅಖಿಲೇಶ್ ಮೌರ್ಯ ಅವರ ಈ ಸಾಧನೆಯೇ ಒಂದು ಉತ್ತಮ ಉದಾಹರಣೆ.














Click it and Unblock the Notifications