ಸಿದ್ದರಾಮಯ್ಯ ದೆಹಲಿ ಭೇಟಿ, ಹೈಕಮಾಂಡ್ ಜತೆ ಮಹತ್ವದ ಸಭೆ: ನಾಯಕತ್ವ ಬದಲಾವಣೆನಾ? ಸಂಪುಟ ಸರ್ಜರಿಯಾ?
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬಿದ್ದು, ನಾಯಕತ್ವ ಬದಲಾವಣೆ ಚರ್ಚೆಗಳು ಮತ್ತೆ ಶುರುವಾಗಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೆಹಲಿಯಿಂದ ಬುಲಾವ್ ಬಂದಿದ್ದು, ಇಂದು ಸೋಮವಾರ (ಮೇ 25) ಸಂಜೆಯೇ ಅವರು ದೇಹಲಿ ತಲುಪಲಿದ್ದಾರೆ. ನಾಳೆ ಮಂಗಳವಾರ ಹೈಕಮಾಂಡ್ ವರಿಷ್ಠರೊಂದಿಗಿನ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ದಿಢೀರ್ ದೆಹಲಿ ಭೇಟಿಯು ಅನೇಕ ವಿಚಾರಗಳಿಗೆ ರೆಕ್ಕೆ ಪುಕ್ಕ ನೀಡಿದ್ದು, ಸಭೆಯ ಅಜೆಂಡಾ ಏನೆಂಬುದು ಇನ್ನೂ ಗೊತ್ತಾಗಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ಬರುವಂತೆ ಹೈಕಮಾಂಡ್ನಿಂದ ನನಗೆ ಕರೆ ಬಂದಿದೆ. ವರಿಷ್ಠರ ಆಹ್ವಾನದ ಮೇರೆಗೆ ನಾನು ದೆಹಲಿಗೆ ಹೋಗಲಿದ್ದೇನೆ. ಆದರೆ ನಾಳೆಯ ಸಭೆಯ ಅಜೆಂಡಾ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕರೆ ಮಾಡಿ ದೆಹಲಿಗೆ ಆಹ್ವಾನಿಸಿದರು. ಮಂಗಳವಾರ ಬೆಳಗ್ಗೆ 11ಗಂಟೆಗೆ ಸಭೆ ಇರುವುದಾಗಿ ನನಗೆ ತಿಳಿಸಿದ್ದಾರೆ. ಆದರೆ ಸಭೆ ಯಾವ ವಿಷಯಕ್ಕೆ ಎಂಬುದರ ಕುರಿತು ಮಾಹಿತಿ ನನಗಿಲ್ಲ. ಅವರ ಕರೆ ಮೇರೆಗೆ ಹೊರಟಿದ್ದೇನೆಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ವೇಳೆ ಸಿಎಂ ಯಾರಾಗಬೇಕು ಎಂಬ ವಿಚಾರ ಹೈಕಮಾಂಡ್ ಅಂಗಳ ತಲುಪಿತ್ತು. ಆದರೆ ಸಿಎಂ ಹಾಗೂ ಡಿಸಿಎಂ ಮಧ್ಯ ಅಧಿಕಾರ ಹಂಚಿಕೆ ಪ್ರಸ್ತಾಪ ನಡೆದಿದ್ದು, ಆ ಬಗ್ಗೆ ಒಪ್ಪಂದ ಆಗಿತ್ತು ಎಂದು ವರದಿ ಆಯಿತು. ಇದೀಗ ಸರ್ಕಾರ ಅಧಿಕಾರ ಹಿಡಿದು ಮೂರು ವರ್ಷವಾದ ಬೆನ್ನಲ್ಲೆ ಸಾಧನಾ ಸಮಾವೇಶ ಸಹ ಮಾಡಿ ಮುಗಿಸಿದೆ. ಇದೇ ವೇಳೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಶಾಸಕರು ಸಚಿವ ಸಂಪುಟ ಪುನರ್ರಚನೆಗೆ ಪಟ್ಟು ಹಿಡಿದ್ದಾರೆ. ಅನೇಕ ಶಾಸಕರು ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ನಾಯಕತ್ವ ಬದಲಾವಣೆ ಚರ್ಚೆಗಾಗಿಯೇ ಅಥವಾ ಸಚಿವ ಸಂಪುಟ ಪುನರ್ ರಚನೆಗಾ? ಎಂಬ ಅನುಮಾನ ಕಾಡುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಅವರು ತಾವು ಐದು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೇನೆ. ಒಂದು ವೇಳೆ ಈ ಬಗ್ಗೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡು ನಾನು ಬದ್ಧ ಎಂದಿದ್ದರು. ಅದೇ ರೀತಿ ಡಿಕೆ ಶಿವಕುಮಾರ್ ಅವರು ನಾನು ಹೈಕಮಾಂಡ್ ನಿರ್ಧಾರಗಳಿಗೆ ತಲೆ ಬಾಗುತ್ತೇನೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಇಬ್ಬರ ಮಧ್ಯೆ ಕುರ್ಚಿಗಾಗಿ ಮುಸಕಿನ ಗುದ್ದಾಟ ಇರುವುದು ಗುಟ್ಟಾಗೇನು ಉಳಿದಿಲ್ಲ. ತೆರೆ ಹಿಂದಿನ ಕಸರತ್ತು ಜೋರಾಗಿಯೇ ಇದೆ.
ನಾಯಕತ್ವ ಬಗ್ಗೆ ಪರೋಕ್ಷ ಸಂದೇಶ ರವಾನೆ ಸಾಧ್ಯತೆ
ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸಚಿವ ಸಂಪುಟ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದೆ ಆದಲ್ಲಿ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಪರೋಕ್ಷವಾಗಿ ಸಂದೇಶ ರವಾನಿಸುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದೆಹಲಿಯ ಸಭೆ ಕ್ಯಾಬಿನೆಟ್ ಕುರಿತು ಅಲ್ಲದೇ ನಾಯಕತ್ವ ಬದಲಾವಣೆ ವಿಚಾರವಾಗಿದ್ದೇ ಆದಲ್ಲಿ ಡಿಕೆ ಶಿವಕುಮಾರ್ ಅವರಿಗೂ ವರಿಷ್ಠರಿಂದ ದೆಹಲಿಗೆ ಬುಲಾವ್ ಬಂದರೂ ಬರಬಹುದು.
ಸಂಪುಟ ಪುನಾರಚನೆಗೆ ಒತ್ತಾಯಿಸಿ ಕೆಲವು ಶಾಸಕರು ದೆಹಲಿಗೆ ತೆರಳಿದ್ದು ಸಾಕಷ್ಟು ಸದ್ದು ಮಾಡಿತ್ತು. ಒಟ್ಟು 34 ಸಚಿವ ಸ್ಥಾನಗಳಿಗೆ ಅನುಮತಿ ಇದೆ. ಒಂದು ವೇಳೆ ಸಂಪುಟ ಸರ್ಜರಿ ಮಾಡುವುದೇ ಆದರೆ ಯಾವೆಲ್ಲ ಸಚಿವರನ್ನು ಕೈ ಬಿಡಬೇಕು. ಅದರ ಮಾನದಂಡಗಳೇನು, ಇಲಾಖೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳು ಚರ್ಚೆ ಆಗಲಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹೊಸದಾಗಿ ಸೇರ್ಪಡೆ ಮಾಡುವ, ಕೈ ಬಿಡುವ ನಾಯಕರ ಹೆಸರು ಹೇಳಲಿದ್ದಾರೆ ಎನ್ನಲಾಗಿದೆ. ಇದರ ನಡುವೆ ನಾಯಕತ್ವ ಬದಲಾವಣೆ ವಿಷಯವೂ ಈ ವೇಳೆ ಚರ್ಚೆಯಾಗುವ ನಿರೀಕ್ಷೆಗಳು ಇವೆ.
ಡಿಕೆ ಶಿವಕುಮಾರ್ ಹೈ ಅಲರ್ಟ್
ಸಿದ್ದರಾಮಯ್ಯ ಅವರನ್ನು ದೆಹಲಿ ಆಹ್ವಾನಿಸುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಲರ್ಟ್ ಆಗಿದ್ದಾರೆ. ಅವರ ಗಮನವೆಲ್ಲ ದೆಹಲಿ ಸಿಎಂ ಹಾಜರಾಗುವ ಸಭೆಯ ಮೇಲೆಯೇ ನೆಟ್ಟಿದೆ. ನನ್ನನ್ನು ಕರೆದರೆ ನಾನು ದೆಹಲಿಗೆ ಹೋಗುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಒಟ್ಟಾರೆ ಸಿಎಂ ದೆಹಲಿ ಪ್ರವಾಸವು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ನಾಳೆಯ ಸಭೆಯು ಅನೇಕ ಆಯಾಮಗಳಲ್ಲಿ ಯೋಚಿಸುವಂತೆ ಮಾಡಿದೆ. ಡಿಕೆಶಿ ಅವರಿಗೆ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟತೆ ಸಿಗುತ್ತಾ ಎಂದು ಕಾಯುತ್ತಿದ್ದಾರೆ. ಸಂಪುಟ ಪುನರ್ ರಚನೆಗೆ ಕಾಯುತ್ತಿರುವ ಶಾಸಕರು, ಮಂತ್ರಿಸ್ಥಾನದ ಆಕಾಂಕ್ಷಿಗಳು ಸಹ ದೆಹಲಿಯತ್ತ ಚಿತ್ತ ಹರಿಸಿದ್ದಾರೆ.
ಇನ್ನಿತರ ವಿಷಯ ಚರ್ಚೆ ಆಗೋ ಸಂಭವ
ಈ ಮೇಲಿನ ವಿಷಯಗಳ ಚರ್ಚೆ ಆಗದೇ ಹೋದಲ್ಲಿ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ವರಿಷ್ಠರೊಂದಿಗೆ ಸಿದ್ದರಾಮಯ್ಯ ಅವರು ಚರ್ಚಿಸಬಹುದು. ಅಥವಾ ಮುಂಬರಲಿರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸುವ ಸಂಭವವಿದೆ ಇದೆ ಎನ್ನಲಾಗುತ್ತಿದೆ.














Click it and Unblock the Notifications