ಕೇವಲ 10 ರೂ.ಗೆ ಊಟ: ಯೋಜನೆ ಜಾರಿಗೊಳಿಸಿದ ಶಿವಸೇನಾ
ಮುಂಬೈ, ಡಿಸೆಂಬರ್ 21: ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ತನ್ನ ಕ್ಯಾಂಟೀನ್ನಲ್ಲಿ ಉದ್ಯೋಗಿಗಳಿಗೆ ಕೇವಲ 10 ರೂ. ದರದಲ್ಲಿ ಊಟ ಒದಗಿಸುವ ಯೋಜನೆಗೆ ಚಾಲನೆ ನೀಡಿದೆ.
ಬಿಎಂಸಿಯ ಮೇಯರ್, ಶಿವಸೇನಾ ನಾಯಕಿ ಕಿಶೋರಿ ಪೆಡ್ನೇಕರ್ ಈ ಯೋಜನೆಗೆ ಗುರುವಾರ ಚಾಲನೆ ನೀಡಿದರು. ಹತ್ತು ರೂಪಾಯಿಯ ಊಟವು ಎರಡು ಚಪಾತಿ, ಅನ್ನ, ದಾಲ್ ಮತ್ತು ಎರಡು ಬಗೆಯ ತರಕಾರಿ ಖಾದ್ಯಗಳನ್ನು ಒಳಗೊಂಡಿರಲಿದೆ.
'ಉದ್ಯೋಗಿಗಳಿಗೆ ಹತ್ತು ರೂಪಾಯಿಯಲ್ಲಿ ಊಟ ಒದಗಿಸುವ ಭರವಸೆಯನ್ನು ಶಿವಸೇನಾ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಬಿಎಂಸಿ ಕ್ಯಾಂಟೀನ್ನಲ್ಲಿ ಈ ಆಯ್ಕೆಯ ಅವಕಾಶ ಮೊದಲೇ ಇತ್ತು. ಅದನ್ನು ನಾವು ಇಲ್ಲಿ ಜಾರಿಗೊಳಿಸಲು ನಿರ್ಧರಿಸಿದ್ದೆವು. ಈ ಯೋಜನೆಯು ಶೀಘ್ರದಲ್ಲಿಯೇ ಜನಸಾಮಾನ್ಯರಿಗೂ ಸಿಗಲಿದೆ' ಎಂದು ಕಿಶೋರಿ ಪೆಡ್ನೇಕರ್ ತಿಳಿಸಿದರು.

'ಎಲ್ಲರೂ ಇಲ್ಲಿಗೆ ಊಟಕ್ಕೆ ಬರುತ್ತಿದ್ದಾರೆ. ಉದ್ಯೋಗಿಗಳಿಂದ ಉತ್ತರ ಪ್ರತಿಕ್ರಿಯೆ ಸಿಗುತ್ತಿದೆ. ಹತ್ತು ರೂ.ಗೆ ಊಟ ಸವಿದು ಖುಷಿ ಪಡುತ್ತಿದ್ದಾರೆ' ಎಂದು ಕ್ಯಾಂಟೀನ್ ಮಾಲಕಿ ಸವಿತಾ ಪಾಲ್ಕರ್ ಹೇಳಿದರು.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಒಪ್ಪಂದಕ್ಕೂ ಮುನ್ನ ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಯೋಜನೆಗಳ ಕುರಿತು ತೀವ್ರ ಚರ್ಚೆ ನಡೆಸಿದ್ದವು. ಮಹಾ ವಿಕಾಸ್ ಅಘಾದಿ ಮೈತ್ರಿಕೂಟವು 10 ರೂ.ಗೆ ಊಟ ಒದಗಿಸುವ ಭರವಸೆ ನೀಡಿತ್ತು. ರಾಜ್ಯದ ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಹಾಗೂ ಸಾಕಷ್ಟು ಪ್ರಮಾಣದ ಆಹಾರವನ್ನು ಕೇವಲ ಹತ್ತು ರೂ.ಗೆ ನೀಡುವುದಾಗಿ ತಿಳಿಸಿದ್ದವು. ಅದರ ಮೊದಲ ಹಂತವಾಗಿ ಬಿಎಂಸಿಯಲ್ಲಿ ಯೋಜನೆ ಜಾರಿಯಾಗಿದೆ.












Click it and Unblock the Notifications