Breaking: ಜುಲೈ 4ರಂದು ಸಿಎಂ ಏಕನಾಥ್ ಶಿಂಧೆ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆ
ಮುಂಬೈ, ಜುಲೈ 01: ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಬಿಜೆಪಿಯ ಬೆಂಬಲ ಪಡೆದು ಸಿಎಂ ಕುರ್ಚಿ ಏರಿದ ಶಿಂಧೆ, ಜುಲೈ 4ರಂದು ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ.
ಶಿವಸೇನೆ-ಬಿಜೆಪಿ ಸರ್ಕಾರವು ಜುಲೈ 4ರಂದು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಏಕನಾಥ್ ಶಿಂಧೆ ಜೊತೆಗೆ ಗುರುತಿಸಿಕೊಂಡ ಇತರೆ ಬಂಡಾಯ ಶಾಸಕರು ಜುಲೈ 2ರಂದು ಮುಂಬೈಗೆ ಆಗಮಿಸಲಿದ್ದಾರೆ.
ಸಿಎಂ ಆದ್ರೇನು ಬಂಡಾಯ ಶಾಸಕರನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೊರೆ!
ಜುಲೈ 3 ಅಥವಾ 4ರಂದು ರಾಜ್ಯಪಾಲರು ಅಧಿವೇಶನ ಕರೆದಿದ್ದಾರೆ. ನಾವು 170 ಶಾಸಕರ ಬೆಂಬಲವನ್ನು ಹೊಂದಿದ್ದು, ಈ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಧಾನಸಭೆಯಲ್ಲಿ ನಾವು ಆರಾಮದಾಯಕ ಬಹುಮತ ಸಾಬೀತುಪಡಿಸುತ್ತೇವೆ," ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಜುಲೈ 3ರಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ: ಮಹಾರಾಷ್ಟ್ರದಲ್ಲಿ ಜುಲೈ 3ರಂದು ತುರ್ತು ಅಧಿವೇಶನವನ್ನು ಕರೆಯಲಾಗಿದ್ದು, ಇದಕ್ಕೆ ಅಗತ್ಯ ಬಿದ್ದಲ್ಲಿ ಸ್ಪೀಕರ್ ಚುನಾವಣೆಯನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ವಿಧಾನಸಭಾ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಕಾಂಗ್ರೆಸ್ನ ನಾನಾ ಪಟೋಲೆ, ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತದನಂತರದಲ್ಲಿ ಸ್ಪೀಕರ್ ಸ್ಥಾನ ಖಾಲಿಯಾಗಿತ್ತು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಜುಲೈ 4ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ಮಂಡಿಸಲಿದ್ದಾರೆ ಎಂದು ವಿಧಾನ ಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.