Maharashtra Political Crisis: ಶಿಂಧೆ ನೇತೃತ್ವ ಬಂಡಾಯ ಶಾಸಕರ ಗುಂಪಿಗೆ ಹೊಸ ಹೆಸರು
ಮುಂಬೈ, ಜೂ. 25: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಶನಿವಾರ ತಮ್ಮ ಗುಂಪಿಗೆ 'ಶಿವಸೇನಾ ಬಾಳಾಸಾಹೇಬ್' ಎಂದು ಹೆಸರಿಸಿದ್ದಾರೆ.
ನಮ್ಮ ಗುಂಪನ್ನು ಶಿವಸೇನಾ ಬಾಳಾಸಾಹೇಬ್ ಎಂದು ಕರೆಯಲಾಗುವುದು. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಶಿವಸೇನೆ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಏಕನಾಥ್ ಶಿಂಧೆ ಅವರೊಂದಿಗೆ 38 ಬಂಡಾಯ ಪಕ್ಷದ ಶಾಸಕರು ಮತ್ತು ಒಂಬತ್ತು ಸ್ವತಂತ್ರ ಶಾಸಕರು ಜೂನ್ 22 ರಿಂದ ಬಿಜೆಪಿ ಆಡಳಿತವಿರುವ ಅಸ್ಸಾಂನ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ತಂಗಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಒತ್ತಾಯಿಸುತ್ತಿರುವ ಮಧ್ಯೆ ನೂತನ ಶಾಸಕರ ಶಿವಸೇನಾ ಬಾಳಾಸಾಹೇಬ್ ಹೆಸರು ಕೇಳಿಬಂದಿದೆ.
ಪಕ್ಷ ಬಿಡೋರು ಬಿಡಲಿ, ಹೊಸದಾಗಿ ಪಕ್ಷ ಕಟ್ತೀವಿ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಕಾರ್ಯಕಾರಿ ಸಭೆ ನಡೆಯುತ್ತಿರುವ ನಡುವೆಯೇ ಏಕನಾಥ್ ಶಿಂಧೆ ಗುಂಪಿನ ನಿರ್ಧಾರ ಹೊರಬಿದ್ದಿದೆ. 38 ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಿರುವಾಗಲೂ ಮಹಾ ವಿಕಾಸ್ ಅಘಾಡಿ ಸರ್ಕಾರ (ಎಂವಿಎ) ಕೆಚ್ಚೆದೆಯ ಹೋರಾಟವನ್ನು ಮುಂದುವರೆಸಿದೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ಬಣವು ಉಪಸಭಾಪತಿಗೆ ಮನವಿ ಸಲ್ಲಿಸಿದ ನಂತರ ಶುಕ್ರವಾರದಂದು ಏಕನಾಥ್ ಶಿಂಧೆ ಬಣವು ಉಪ ಸ್ಪೀಕರ್ ನರಹರಿ ಜೀರ್ವಾಲ್ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿತು.
ನನಗೂ ಅಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ
ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಠಾಕ್ರೆ ಶುಕ್ರವಾರ ಜಿಲ್ಲಾ ಮುಖ್ಯಸ್ಥರ ಸಭೆಯನ್ನು ಕರೆದಿದ್ದಾರೆ. ನನಗೂ ಅಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಮೊದಲೇ ಹೇಳಿದ್ದೇನೆ. ಶಿವಸೇನೆ ತೊರೆಯುವುದಕ್ಕಿಂತ ಸಾಯುವುದೇ ಹೆಚ್ಚು ಎಂದು ಹೇಳುತ್ತಿದ್ದ ಜನರು ಇಂದು ಪಲಾಯನ ಮಾಡಿದ್ದಾರೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಭಾಷಣದಲ್ಲಿ ಹೇಳಿದ್ದರು.
38 ಶಾಸಕರ ಕುಟುಂಬ ಸದಸ್ಯರ ಭದ್ರತೆ
ಏತನ್ಮಧ್ಯೆ, ಗುವಾಹಟಿಯ ಹೊಟೇಲ್ನಲ್ಲಿ ತಮ್ಮೊಂದಿಗೆ ಬೀಡುಬಿಟ್ಟಿರುವ 38 ಶಾಸಕರ ಕುಟುಂಬ ಸದಸ್ಯರ ಭದ್ರತೆಯನ್ನು ದುರುದ್ದೇಶಪೂರ್ವಕವಾಗಿ ಹಿಂಪಡೆದಿರುವ ಆರೋಪದ ಕುರಿತು ಶಿವಸೇನೆ ಬಂಡಾಯ ನಾಯಕ ಮತ್ತು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ಶನಿವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದಾರೆ.
ಶಿವಸೇನೆ 16 ಬಂಡಾಯ ಶಾಸಕರಿಗೆ ಉಪ ಸಭಾಪತಿ ನೋಟಿಸ್!
ಕಾನೂನುಬಾಹಿರವಾಗಿ ಭದ್ರತೆ ಹಿಂತೆಗೆತ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರಿಗೆ ಬರೆದ ಪತ್ರದಲ್ಲಿ ಶಿಂಧೆ, ಶಾಸಕರಿಗೆ ಅವರ ನಿವಾಸಕ್ಕೆ ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರೋಟೋಕಾಲ್ ಪ್ರಕಾರ ನೀಡಲಾಗಿದ್ದ ಭದ್ರತೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ಆದರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಭದ್ರತೆಯನ್ನು ಹಿಂತೆಗೆದುಕೊಳ್ಳುವ ಶಿಂಧೆ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಆರೋಪಗಳು ಸುಳ್ಳು ಮತ್ತು ಸಂಪೂರ್ಣ ನಿರಾಧಾರ
ಮುಖ್ಯಮಂತ್ರಿಯಾಗಲಿ ಅಥವಾ ಗೃಹ ಇಲಾಖೆಯಾಗಲಿ ಯಾವುದೇ ಶಾಸಕರ ಭದ್ರತೆಯನ್ನು ಹಿಂಪಡೆಯಲು ಆದೇಶ ನೀಡಿಲ್ಲ, ಟ್ವಿಟರ್ ಮೂಲಕ ಮಾಡುತ್ತಿರುವ ಆರೋಪಗಳು ಸುಳ್ಳು ಮತ್ತು ಸಂಪೂರ್ಣ ನಿರಾಧಾರವಾಗಿದೆ ಎಂದು ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.