ಮಹಾರಾಷ್ಟ್ರದಲ್ಲಿ NCPಗೆ ಭಾರೀ ಆಘಾತ: ಶಿವಸೇನೆ ಸೇರಿದ ಪಕ್ಷಾಧ್ಯಕ್ಷ
ಮುಂಬೈ, ಜುಲೈ 25: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇರುವ ಹೊತ್ತಲ್ಲಿ, ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತ ಎದುರಾಗಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಅಹಿರ್ ಅವರು ಗುರುವಾರ ಮುಂಬೈಯಲ್ಲಿ ಶಿವಸೇನೆಗೆ ಸೇರಿದ್ದಾರೆ. ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ, ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಉಪಸ್ಥಿತಿಯಲ್ಲಿ ಅವರು ಪಕ್ಷ ಸೇರಿದರು.
ಪಕ್ಷದ ಅಧ್ಯಕ್ಷ, ಹಿರಿಯ ನಾಯಕ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ ಸಿಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ, ಅಂದರೆ 2009-14 ರ ಅವಧಿಯಲ್ಲಿ ಸಚಿವ ಸಂಪುಟದ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಸಚಿನ್ ಚುನಾವಣೆ ಹತ್ತಿರದಲ್ಲಿರುವಾಗ ತೆಗೆದುಕೊಂಡ ಈ ಆಘಾತಕಾರಿ ನಿರ್ಧಾರದ ಪಕ್ಷಕ್ಕೆ ಆಘಾತವನ್ನುಂಟು ಮಾಡಿದೆ.

ಎನ್ ಸಿಪಿ ಮುಖಂಡ ಶರದ್ ಪವಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿನ್ ಇಂಥ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕಾರಣ, ಪಕ್ಷದ ಮಹತ್ವದ ನಿರ್ಧಾರವೊಂದರ ಬಗ್ಗೆ ಅವರಿಗೆ ಸಹಮತವಿಲ್ಲದಿರುವುದು ಎಂದು ಮೂಲಗಳು ತಿಳಿಸಿವೆ.
ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿದ್ದವು. ಇದು ಸಚಿನ್ ಅವರಿಗೆ ಇಷ್ಟವಿರಲಿಲ್ಲ. ಈ ಬಗ್ಗೆ ಪವಾರ್ ಅವರೊಂದಿಗೆ ಚರ್ಚೆ ನಡೆಸಿದರೂ ಪವಾರ್ ತಮ್ಮ ನಿರ್ಧಾರ ಬದಲಿಸಲು ಸಿದ್ಧವಾಗಿರಲಿಲ್ಲ. ಆ ಕಾರಣದಿಂದಲೇ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.
ಎನ್ ಸಿಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಛಗನ್ ಭುಜ್ಬಲ್ ಸಹ ಎನ್ ಸಿಪಿ ತೊರೆದು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಎನ್ ಸಿಪಿ ಶಾಸಕ ವೈಭವ್ ಪಿಚಡ್ ಅವರೂ ಶಿವಸೇನೆಗೆ ಸೇರಲಿದ್ದಾರೆ ಎಂಬ ವದಂತಿ ಇದೆ.
ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಶಃದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರೂ ಕಾಂಗ್ರೆಸ್ ತೊರೆದು ಶಿವಸೇನೆಗೆ ಸೇರಿದ್ದರು. ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಅಮಾನತ್ತಾಗಿದ್ದ ಮುಖಂಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು, ಅವರಿಗೆ ಆಯಕಟ್ಟಿನ ಹುದ್ದೆ ನೀಡಿದ ಬಗ್ಗೆ ಬೇಸರಗೊಂಡಿದ್ದ ಅವರು ರಾಜೀನಾಮೆ ನೀಡಿದ್ದರು.












Click it and Unblock the Notifications