ಕೊರೊನಾ ವೈರಸ್ ಕಾಟದಿಂದ ಮಹಾರಾಷ್ಟ್ರದಲ್ಲಿ ಮತ್ತೆ ಕಡ್ಡಾಯವಾಗುತ್ತಾ ಮಾಸ್ಕ್!?
ಮುಂಬೈ, ಜೂನ್ 2: "ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇದೇ ರೀತಿ ಏರಿಕೆಯಾಗುತ್ತಾ ಹೋದರೆ, ಮತ್ತೊಮ್ಮೆ ರಾಜ್ಯದಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಬಹುದು" ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಗುರುವಾರ ಮುಂಬೈನಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಪರಿಸ್ಥಿತಿಯು ಕೈ ಮೀರದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಮತ್ತು ಆಡಳಿತ ಯಂತ್ರವು ನಿಗಾ ವಹಿಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಚಿತ್ರಣ ಮತ್ತೆ ಬದಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮಹಾರಾಷ್ಟ್ರದಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗು ಹೊಸ ಅಲೆಯನ್ನು ಸೃಷ್ಟಿಸುವ ಆತಂಕವನ್ನು ಹುಟ್ಟಿಸಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಮಾಸ್ಕ್ ಅನ್ನು ಕಡ್ಡಾಯಗೊಳಿಸುವ ಬಗ್ಗೆ ಆಲೋಚಿಸುತ್ತಿದೆ. ಈ ಕುರಿತು ಉಪ ಮುಖ್ಯಮಂತ್ರಿ ನೀಡಿರುವ ಸುಳಿವು ಮತ್ತು ಮಹಾರಾಷ್ಟ್ರದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಮಹಾರಾಷ್ಟ್ರದಲ್ಲಿ ಏರಿಕೆ ಆಗುತ್ತಿರುವ ಕೋವಿಡ್-19
ಮಹಾರಾಷ್ಟ್ರದಲ್ಲಿ ಬುಧವಾರ 1,081 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಇದು ಫೆಬ್ರವರಿ 24ರ ನಂತರ ಅತಿ ಹೆಚ್ಚು ದೈನಂದಿನ ಏರಿಕೆಯಾಗಿದೆ. ಇನ್ನು ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 78,88,167ಕ್ಕೆ ಏರಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ 1,47,860 ಆಗಿರುವುದು ಕೊಂಚ ಸಮಾಧಾನವಾಗಿದ್ದು, ಮಂಗಳವಾರ ರಾಜ್ಯದಲ್ಲಿ 711 ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದವು.

ಕೊರೊನಾ ವೈರಸ್ ಸಂಖ್ಯೆ ಹೆಚ್ಚಾದರೆ ಮಾಸ್ಕ್ ಕಡ್ಡಾಯ
"ಮಹಾರಾಷ್ಟ್ರದಲ್ಲಿ ಇದೇ ರೀತಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೆ ಫೇಸ್ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಬೇಕಾಗುತ್ತದೆ" ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದರು. ರಾಜ್ಯ ಹಣಕಾಸು ಸಚಿವರೂ ಆಗಿರುವ ಅವರು, ಮಾರ್ಚ್ 2022ರ ವೇಳೆಗೆ ಮಹಾರಾಷ್ಟ್ರವು ಕೇಂದ್ರದಿಂದ 29,647 ಕೋಟಿ ಜಿಎಸ್ಟಿ ಬಾಕಿಯನ್ನು ಪಡೆಯಲಿದೆ ಎಂದು ಹೇಳಿದರು.

ದೇಶದಲ್ಲಿ ಒಂದೇ ದಿನ 4,372 ಮಂದಿಗೆ ಕೊವಿಡ್
ಕಳೆದ 24 ಗಂಟೆಗಳಲ್ಲಿ 4,372 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಕಳೆದೊಂದು ದಿನದಲ್ಲಿ ಕೊರೊನಾ ವೈರಸ್ ಮಹಾಮಾರಿಯಿಂದ 5 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 2,584 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 43,165,738ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಇದುವರೆಗೂ 42,620,394 ಸೋಂಕಿತರು ಗುಣಮುಖರಾಗಿದ್ದು, ಗುಣಮುಖರ ಶೇಕಡಾವಾರು ಪ್ರಮಾಣ ಶೇ.98.75ರಷ್ಟಿದೆ. ಅದೇ ರೀತಿ ಮಹಾಮಾರಿ ಕೋವಿಡ್-19 ಸೋಂಕಿಗೆ ದೇಶದಲ್ಲಿ ಇದುವರೆಗೂ 524,641 ಮಂದಿ ಪ್ರಾಣ ಬಿಟ್ಟಿದ್ದು, ಮೃತರ ಪ್ರಮಾಣ ಶೇ.1.22ರಷ್ಟಿದೆ. ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 20,703 ಆಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.03ರಷ್ಟಿದೆ.

ಕೇಂದ್ರದಿಂದ ಜಿಎಸ್ಟಿ ಪರಿಹಾರದ ಕುರಿತು ಪವಾರ್ ಮಾತು
ಎರಡು ದಿನಗಳ ಹಿಂದೆ ರಾಜ್ಯಕ್ಕೆ 14,145 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇನ್ನೂ 15,502 ಕೋಟಿ ರೂಪಾಯಿ ಬರಬೇಕಿದೆ. "ನಾವು ಇನ್ನೂ 2019-20 ರಿಂದ 1,029 ಕೋಟಿ ರೂಪಾಯಿಗಳನ್ನು ಪಡೆಯಬೇಕಾಗಿದೆ. 2020-21 ರಿಂದ 6,470 ಕೋಟಿ ರೂಪಾಯಿಗಳನ್ನು ಪಡೆಯಬೇಕಾಗಿದೆ, ಆದರೆ 2021-22ರ ಬಾಕಿಯು 8,003 ಕೋಟಿ ರೂಪಾಯಿ ಆಗಿದೆ," ಎಂದು ಅಜಿತ್ ಪವಾರ್ ಹೇಳಿದರು. ಇಂಧನ ಮತ್ತು ಅನಿಲದ ಮೇಲಿನ ತೆರಿಗೆ ಇಳಿಸುವ ಮೂಲಕ ರಾಜ್ಯ ಸರ್ಕಾರ 3,500 ಕೋಟಿ ರೂಪಾಯಿ ಆದಾಯವನ್ನು ಕೈಬಿಟ್ಟಿದೆ ಎಂದರು. ರಾಜ್ಯಸಭಾ ಚುನಾವಣೆಗೆ ಮುಕ್ತ ಮತದಾನದ ಮೂಲಕ ಪ್ರಕ್ರಿಯೆ ನಡೆಯಲಿದ್ದು, ಯಾರೂ ಕುದುರೆ ವ್ಯಾಪಾರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.












Click it and Unblock the Notifications