ದೆಹಲಿಗೆ ತೆರಳಿದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್: ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್?
ಮುಂಬೈ, ಆಗಸ್ಟ್ 4: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯ ಸಚಿವ ಸಂಪುಟದ ಅಂತಿಮ ಪಟ್ಟಿಯ ಕುರಿತು ಬಿಜೆಪಿ ನಾಯಕತ್ವದೊಂದಿಗೆ ಸಮಾಲೋಚಿಸಲು ದೆಹಲಿಗೆ ತೆರಳಿದ್ದಾರೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ವಿಧಾನಸಭೆ ಅಧಿವೇಶನದ ಆರಂಭಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುವ ಅಗತ್ಯವಿದೆ ಇದಕ್ಕಾಗಿ ತುರ್ತಾಗಿ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಜೂನ್ 30ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಸಚಿವ ಸಂಪುಟ ವಿಸ್ತರಣೆ ಬಾಕಿ ಇದೆ. ಬಿಜೆಪಿಯ ಕೇಂದ್ರ ನಾಯಕರು ಸಹಿ ಹಾಕಿದರೆ ನಾಳೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲ ಕೊಶ್ಯಾರಿ ಕೊಲ್ಹಾಪುರ್ ಚಪ್ಪಲಿ ರುಚಿ ನೋಡುವ ಸಮಯ ಎಂದ ಠಾಕ್ರೆ
ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ದೆಹಲಿಗೆ ತೆರಳಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಶಿಂಧೆ ಅತಿಯಾದ ಒತ್ತಡದಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈದ್ಯರ ಶಿಫಾರಸಿನ ನಂತರ ಸಿಎಂ ಏಕನಾಥ್ ಶಿಂಧೆ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಗಳ ದೊಡ್ಡ ಪಟ್ಟಿ
ಸಿಎಂ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ಜುಲೈ 27 ರಂದು ಕ್ಯಾಬಿನೆಟ್ ಪಟ್ಟಿಯ ಕರಡು ಪ್ರತಿಯೊಂದಿಗೆ ದೆಹಲಿಗೆ ಭೇಟಿ ನೀಡಿದ್ದರು. ಆದರೆ ಮುಖ್ಯಮಂತ್ರಿ ಸೇರಿದಂತೆ ಸಂಪುಟದಲ್ಲಿ ಗರಿಷ್ಠ 43 ಸ್ಥಾನಗಳಿಗೆ ಹಲವು ಮಂದಿ ಆಕಾಂಕ್ಷಿಗಳಿರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಏಕನಾಥ್ ಶಿಂಧೆ ಅವರ ಎರಡು ವಾರಗಳ ಬಂಡಾಯದ ಸಂದರ್ಭದಲ್ಲಿ ಬೆಂಬಲಿಸಿದ ಮತ್ತು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಲು ಸಹಾಯ ಮಾಡಿದ ಶಿವಸೇನಾ ಶಾಸಕರು ಸಹಜವಾಗಿಯೇ ಸಚಿವ ಸ್ಥಾನ ಬಯಸುತ್ತಿದ್ದಾರೆ. ತೆರೆಮರೆಯಲ್ಲಿ ಸಹಾಯ ಮಾಡಿದ್ದಕ್ಕಾಗಿ ಬಿಜೆಪಿ ಕೂಡ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಪ್ರಮುಖ ಖಾತೆಗಳನ್ನು ಪಡೆಯಲು ಪೈಪೋಟಿ
ಪ್ರಮುಖ ಖಾತೆಗಳ ಹಂಚಿಕೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ಬಣದ ನಡುವೆ ತಿಕ್ಕಾಟ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯಾಗಿ, ಏಕನಾಥ್ ಶಿಂಧೆ ಅವರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಯ ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ ಮತ್ತು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮನವೊಲಿಸಿದ ಮೂಲಕ ಒಲ್ಲದ ಮನಸ್ಸಿನಿಂದಲೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿರುವ ದೇವೇಂದ್ರ ಫಡ್ನವೀಸ್ ಖಾತೆ ಹಂಚಿಕೆಯಲ್ಲಿ ರಾಜಿಯಾಗಲು ಸಿದ್ಧರಿಲ್ಲ ಎಂದು ಹೇಳಲಾಗಿದೆ.
ಏಕನಾಥ್ ಶಿಂಧೆ ಬಣಕ್ಕೆ ಎಷ್ಟು ಸಚಿವ ಸ್ಥಾನ?
ಮೂಲಗಳ ಪ್ರಕಾರ ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂಧೆ ಬಣವು 15-16 ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಕೆಲವು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ನಾಯಕರು ಕೂಡ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 43 ಸಚಿವರು ಸೇರ್ಪಡೆಗೊಳ್ಳಬಹುದು. ಏಕನಾಥ್ ಶಿಂಧೆ ಸಿಎಂ ಆಗಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ 41 ಹುದ್ದೆಗಳು ಖಾಲಿ ಇವೆ.
ಸಚಿವ ಸಂಪುಟದಲ್ಲಿ ಬಿಜೆಪಿ ಪ್ರಾಬಲ್ಯ
ಬಿಜೆಪಿ-ಶಿಂಧೆ ಸರ್ಕಾರವು 65-35 ಸೂತ್ರಗಳನ್ನು ಹೊಂದಬಹುದು, ಅಂದರೆ ಬಿಜೆಪಿಯಿಂದ 65 ಪ್ರತಿಶತ ಸಚಿವರು ಮತ್ತು ಶಿಂಧೆ ಪಾಳಯದಿಂದ 35 ಪ್ರತಿಶತ ಸಚಿವರು ಹೊಂದಬಹುದು ಎಂದು ಮೂಲಗಳು ತಿಳಿಸಿವೆ. ಅದರಂತೆ ಬಿಜೆಪಿ ನಾಯಕರಿಗೆ 24-25 ಹಾಗೂ ಶಿಂಧೆ ಬಣಕ್ಕೆ 15-16 ಸಚಿವ ಸ್ಥಾನಗಳು ಹಂಚಿಕೆಯಾಗುವ ಸಾಧ್ಯತೆ ಇದೆ.
ಭಾರತೀಯ ಜನತಾ ಪಕ್ಷವು ಸಿಎಂ ಹುದ್ದೆಯನ್ನು ಬಿಟ್ಟುಕೊಟ್ಟಿರಬಹುದು, ಆದರೆ ಸ್ಪೀಕರ್ ಮತ್ತು ಉಪ ಮುಖ್ಯಮಂತ್ರಿಯಂತಹ ಪ್ರಮುಖ ಹುದ್ದೆಗಳೊಂದಿಗೆ ಪಕ್ಷವು ಸಂಪುಟದಲ್ಲಿ ಹೆಚ್ಚಿನ ಮಂತ್ರಿಗಳನ್ನು ಹೊಂದುವ ಸಾಧ್ಯತೆಯಿದೆ ಮತ್ತು ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆಯಿದೆ.
Recommended Video