ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ದೂರು
ಮುಂಬೈ, ಜನವರಿ 28: ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರು ಕಾಂಡಿವಾಲಿಯಲ್ಲಿನ ಸಮತಾ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಬಾಂದ್ರಾ ಪೂರ್ವ ಭಾಗದ ನಿರ್ಮಲಾನಗರದಲ್ಲಿ ಮತ್ತೊಂದು ದೂರು ಸಲ್ಲಿಸಲಾಗಿದೆ.
ಬಾಲಕೋಟ್ನಲ್ಲಿ ಭಾರತೀಯ ವಾಯು ಪಡೆಯು 2019ರಲ್ಲಿ ನಡೆಸಿದ ವೈಮಾನಿಕ ದಾಳಿಯ ಬಗ್ಗೆ ಅರ್ನಬ್ ಗೋಸ್ವಾಮಿಗೆ ಮೊದಲೇ ತಿಳಿದಿತ್ತು ಎನ್ನುವುದು ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ಗುಪ್ತಾ ಮತ್ತು ಅರ್ನಬ್ ಗೋಸ್ವಾಮಿ ನಡುವಿನ ವಾಟ್ಸಾಪ್ ಚಾಟ್ಗಳ ವಿವರಗಳಿಂದ ಗೊತ್ತಾಗಿದೆ. ಹೀಗಾಗಿ ಅರ್ನಬ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಲಾಗಿದೆ.
'ಒಎಸ್ಎದ ಸೆಕ್ಷನ್ 5ನ್ನು ಉಲ್ಲಂಘಿಸಿದ್ದಕ್ಕಾಗಿ ಅರ್ನಬ್ ಗೋಸ್ವಾಮಿ ಅವರನ್ನು ಕೂಡಲೇ ಬಂಧಿಸಿದ ವಿಚಾರಣೆಗೆ ಒಳಪಡಿಸುವಂತೆ ಕೋರಿ ಕಾಂಡಿವಾಲಿಯ ಸಮತಾನಗರ ಪೊಲೀಸ್ ಠಾಣೆಯಲ್ಲಿ ಎಸಿಪಿ ಮೋಹಿತೆ ಮತ್ತು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಹಾಕೆ ಅವರಿಗೆ ಅಧಿಕೃತವಾಗಿ ದೂರು ದಾಖಲಿಸಿದ್ದೇನೆ. ಬಾಲಕೋಟ್ ದಾಳಿಯ ಬಗ್ಗೆ ಅವರಿಗೆ ಯಾರು ಮಾಹಿತಿಗಳನ್ನು ನೀಡಿದ್ದರು ಎನ್ನುವುದನ್ನು ತಿಳಿಯಬೇಕಿದೆ' ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಹೇಳಿದ್ದಾರೆ.

ನಿರ್ಮಲ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಶಾಸಕ ಜೀಶಾನ್ ಸಿದ್ದಿಕಿ ಅವರು ಅರ್ನಬ್ ಗೋಸ್ವಾಮಿಯ ಬಂಧನಕ್ಕೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.
ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಬಾರ್ಕ್ ಸಂಸ್ಥೆಯ ಮಾಜಿ ಸಿಇಒ ಪಾರ್ಥೋ ದಾಸ್ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಪಾರ್ಥೋ ಹಾಗೂ ಅರ್ನಬ್ ಗೋಸ್ವಾಮಿ ನಡುವೆ ನಡೆದ ವಾಟ್ಸಾಪ್ ಚಾಟ್ ವಿವರಗಳು ಬಹಿರಂಗವಾಗಿದ್ದು, ಅದರಲ್ಲಿ ಬಾಲಕೋಟ್ ದಾಳಿಯ ಬಗ್ಗೆ ಅರ್ನಬ್ಗೆ ಮೊದಲೇ ಮಾಹಿತಿ ಇದ್ದಿದ್ದು ಬೆಳಕಿಗೆ ಬಂದಿದೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಆರೋಪಿಸಿದೆ.












Click it and Unblock the Notifications