ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ ಠಾಕ್ರೆಯನ್ನು ತಡೆದಿದ್ದು ಯಾರು!?
ಮುಂಬೈ, ಜೂನ್ 28: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸ್ಫೋಟಗೊಂಡ ನಂತರದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಉದ್ಧವ್ ಠಾಕ್ರೆ ಮುಂದಾಗಿದ್ದರು. ಆದರೆ ಹಿರಿಯ ನಾಯಕರೊಬ್ಬರು ಅವರನ್ನು ತಡೆದಿದ್ದರು ಎಂದು ತಿಳಿದು ಬಂದಿದೆ.
ಶಿವಸೇನೆ ಬಂಡಾಯ ಶಾಸಕರ ರಾಜಕೀಯ ಮೇಲಾಟಗಳಿಂದ ರೋಸಿ ಹೋದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಕಳೆದ ಜೂನ್ 22ರಂದೇ ರಾಜೀನಾಮೆ ಸಲ್ಲಿಸುವುದಕ್ಕೆ ಅಣಿಯಾಗಿದ್ದರು. ಶಿವಸೇನೆ ಮುಖ್ಯಸ್ಥರು "ಒಂದಲ್ಲ ಅಂತಾ ಎರಡು ಬಾರಿ" ರಾಜೀನಾಮೆ ನೀಡುವುದನ್ನು ತಡೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉದ್ಧವ್ ಠಾಕ್ರೆ ರಾಜೀನಾಮೆ ಅನ್ನು ತಡೆದವರು ಯಾರು? ಎಂಬುದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವನ್ನು ರಚಿಸಿರುವುದರ ಹಿಂದಿನ ಮಾಸ್ಟರ್ ಮೈಂಡ್ ಹಾಗೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಜೀನಾಮೆ ತಡೆದರು ಎಂಬ ಸುದ್ದಿ ಹಬ್ಬಿದೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಬಂಡಾಯದ ಬಾವುಟ ಹಾರಿಸುತ್ತಿದ್ದಂತೆ ಸರ್ಕಾರದ ಭಾಗವೇ ಆಗಿರುವ ಶಿವಸೇನೆಯ ಶಾಸಕರೊಂದಿಗೂ ಶರದ್ ಪವಾರ್ ಸಭೆಗಳನ್ನು ನಡೆಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಉದ್ಧವ್ ಠಾಕ್ರೆ ರಾಜೀನಾಮೆಗೆ ಜೂನ್ 21ರಂದೇ ಸಿದ್ಧ
ಮಹಾರಾಷ್ಟ್ರದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದ ಏಕನಾಥ್ ಶಿಂಧೆಯು ಆ ಕಡೆಗೆ 21 ಶಿವಸೇನೆ ಶಾಸಕರನ್ನು ಕರೆದುಕೊಂಡು ಮುಂಬೈನಿಂದ ಗುವಾಹಟಿಗೆ ತೆರಳಿದರು. ಈ ಕಡೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೆ ಉದ್ಧವ್ ಠಾಕ್ರೆ ಸಿದ್ಧರಾಗಿದ್ದರು. ಜೂನ್ 21ರ ಸಂಜೆ 5 ಗಂಟೆಗೆ ಫೇಸ್ ಬುಕ್ ಮೂಲಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ಅಂದೇ ತಮ್ಮ ರಾಜೀನಾಮೆ ಬಗ್ಗೆ ಘೋಷಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಿಮ ಘಳಿಗೆಯಲ್ಲಿ 5 ಗಂಟೆಯ ಫೇಸ್ ಬುಕ್ ಲೈವ್ ಒಂದು ಗಂಟೆ ವಿಳಂಬವಾಗಿ ಶುರುವಾಯಿತು. ರಾಜೀನಾಮೆ ಘೋಷಣೆ ಬಗ್ಗೆ ಎಲ್ಲ ಸಾಧ್ಯತೆಗಳು ಹುಸಿಯಾದವು. ಅಂದಿನ ಆ ನಿರ್ಧರ ಹಿಂದೆ ಕೆಲಸ ಮಾಡಿದ್ದು ಸಹ ಶರದ್ ಪವಾರ್ ಎಂದು ವಿಶ್ಲೇಷಿಸಲಾಗುತ್ತಿದೆ.

ಎರಡನೇ ದಿನವೇ ರಾಜೀನಾಮೆಗೆ ಮುಂದಾದ ಠಾಕ್ರೆ
ಜೂನ್ 21ರಂದು ಅಂತಿಮ ಘಳಿಗೆಯಲ್ಲಿ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದ ಉದ್ಧವ್ ಠಾಕ್ರೆ ಮರುದಿನವೇ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೊರಟಿದ್ದರು. ಜೂನ್ 22ರಂದು ಏಕನಾಥ್ ಶಿಂಧೆ ಪರವಾಗಿ 30ಕ್ಕೂ ಹೆಚ್ಚು ಸಂಖ್ಯೆಯ ಶಾಸಕರು ಸಹಿ ಮಾಡಿದ ಪತ್ರವನ್ನು ಡೆಪ್ಯುಟಿ ಸ್ಪೀಕರ್ ನರಹರಿಗೆ ರವಾನಿಸಿದರು. ಈ ಬೆಳವಣಿಗೆ ಬೆನ್ನಲ್ಲೇ ಅದೇ ದಿನ ಸಂಜೆ 4 ಗಂಟೆಗೆ ಶಿವಸೇನೆ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಿದ ನಂತರದಲ್ಲಿ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮತ್ತೊಮ್ಮೆ ಮೈತ್ರಿಕೂಟದ ಮಹಾ ನಾಯಕ ಎನಿಸಿಕೊಂಡಿದ್ದ ಶರದ್ ಪವಾರ್, ಅವಸರದ ನಿರ್ಧಾರವನ್ನು ತೆಗೆದುಕೊಳ್ಳದಂತೆ ಮನವೊಲಿಸಿದರು ಎಂದು ತಿಳಿದು ಬಂದಿದೆ.

"ಬಂಡಾಯ ಶಾಸಕರು ಹೇಳಿದ್ದರೆ ನಾನೇ ರಾಜೀನಾಮೆ ನೀಡುತ್ತಿದ್ದೆ"
ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯದ ಮಧ್ಯೆ ಸಾರ್ವಜನಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವನಾತ್ಮಕ ನುಡಿಗಳನ್ನು ಹೇಳಿದ್ದರು. "ನಮ್ಮವರಿಗೆ ನನ್ನ ರಾಜೀನಾಮೆ ಬೇಕಿದ್ದರೆ, ಇಷ್ಟೆಲ್ಲ ಮಾಡುವ ಅಗತ್ಯವೇ ಇರಲಿಲ್ಲ. ನಾನು ಯಾವಾಗಲೋ ರಾಜೀನಾಮೆ ಪತ್ರವನ್ನು ಬರೆದು ಇಟ್ಟಿದ್ದೇನೆ. ನಿಮ್ಮಲ್ಲಿ ಒಬ್ಬ ಶಾಸಕರು ಬಂದು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯವನ್ನು ಹೇಳಿದ್ದರೆ ಸಾಕಾಗಿತ್ತು. ನಾನೇ ರಾಜೀನಾಮೆ ನೀಡುತ್ತಿದ್ದೆನು," ಎಂದು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಮುನ್ನಡೆ ಸಾಧಿಸಿದ ಏಕನಾಥ್ ಬಣ
ಮಹಾ ವಿಕಾಸ ಅಘಾಡಿ ಸರ್ಕಾರದ ಅಸಮಾಧಾನಗೊಂಡಿರುವ ಏಕನಾಥ್ ಶಿಂಧೆ ಬಣಕ್ಕೆ ಸುಪ್ರೀಂಕೋರ್ಟ್ ಸಿಹಿಸುದ್ದಿ ನೀಡಿದೆ. ಶಿಂಧೆ ಸೇರಿ 16 ಶಾಸಕರನ್ನು ಅನರ್ಹಗೊಳಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತಡೆ ನೀಡಿತು. ಜುಲೈ 11ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಆದರೆ, ಅಲ್ಲಿಯವರೆಗೂ ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಯಾವ ರೀತಿ ಫಲಿತಾಂಶವನ್ನು ನೀಡಬಲ್ಲದು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎರಡು ಬಾರಿ ರಾಜೀನಾಮೆ ಹೊಸ್ತಿಲಿಗೆ ಹೋಗಿ ವಾಪಸ್ಸಾಗಿರುವ ಸಿಎಂ ಠಾಕ್ರೆ, ಯಾವ ಕ್ಷಣದಲ್ಲಿ ಸಿಎಂ ಕುರ್ಚಿ ಬಿಟ್ಟು ಇಳಿಯುತ್ತಾರೋ ಏನು ಎನ್ನುವುದು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕುತ್ತಿದೆ.












Click it and Unblock the Notifications