ಭೀಮ ಕೋರೆಗಾಂವ್ ಹಿಂಸಾಚಾರ: ದಲಿತ ಸಂಘಟನೆಗಳಿಂದ ಬುಧವಾರ ಮಹಾರಾಷ್ಟ್ರ ಬಂದ್
ಮುಂಬೈ, ಜನವರಿ 2: ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆ ವೇಳೆ ಪುಣೆಯಲ್ಲಿ ಆರಂಭವಾದ ಹಿಂಸಾಚಾರ ತಾರಕಕ್ಕೇರಿದೆ. ಮರಾಠರು ಮತ್ತು ದಲಿತರ ನಡುವಿನ ಬೀದಿ ಜಗಳ ವಿಕೋಪಕ್ಕೆ ಹೋಗಿದ್ದು ಬುಧವಾರ ಮಹಾರಾಷ್ಟ್ರ ರಾಜ್ಯ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿವೆ.
ಪುಣೆಯಲ್ಲಿ ಸೋಮವಾರ ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆ ಸಂದರ್ಭ ಏಕಾಏಕಿ ನಡೆದ ಘರ್ಷಣೆಯಲ್ಲಿ ದಲಿತನೋರ್ವ ಮೃತ ಪಟ್ಟು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಕೋರೆಗಾಂವ್ ವಿಜಯೋತ್ಸವಕ್ಕೆ ಕಲ್ಲು, ಬೀದಿಗಿಳಿದ ದಲಿತ ಸಂಘಟನೆಗಳು
ಇದೀಗ ಮಹಾರಾಷ್ಟ್ರದಾದ್ಯಂತ ಘರ್ಷಣೆ ನಡೆಯುತ್ತಿದ್ದು ರಾಜ್ಯ ಬಂದ್ ಗೆ ಸಂವಿಧಾನ ಶಿಲ್ಬಿ ಡಾ.ಬಿ.ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದಾರೆ.
ಯುದ್ಧದದಲ್ಲಿ ಮರಾಠರನ್ನು ಸೋಲಿಸಿದ ದಿನವನ್ನು 'ವಿಜಯ ದಿವಸ' ಹೆಸರಿನಲ್ಲಿ ದಲಿತರು ಆಚರಿಸಲು ಹೊರಟಿದ್ದರು. ಇದಕ್ಕೆ ಹಿಂಸಾಚಾರದ ಮೂಲಕ ಮರಾಠರು ತಡೆಯೊಡ್ಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ನ್ಯಾಯಾಂಗ ತನಿಖೆ
ಈ ಹಿಂಸಾಚಾರದ ನ್ಯಾಯಾಂಗ ತನಿಖೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶ ನೀಡಿದ್ದಾರೆ. ಜತೆಗೆ ಮೃತಪಟ್ಟ ಯುವಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.ಇನ್ನು
ರೈಲು ಸಂಚಾರ ವ್ಯತ್ಯಯ
ಇಂದು ಕೂಡ ರಾಜ್ಯದಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಸಬ್ ಅರ್ಬನ್ ರೈಲು ಮತ್ತು ಸ್ಥಳೀಯ ರೈಲು ಸಂಚಾರಕ್ಕೆ ಪ್ರತಿಭಟನಾಕಾರರು ತಡೆಯೊಡ್ಡಿದ ಘಟನೆಯೂ ನಡೆದಿದೆ. ಈ ಹಿನ್ನಲೆಯಲ್ಲಿ ಕುರ್ಲಾ ಮತ್ತು ವಶಿ ನಡುವಿನ ಸಬ್ ಅರ್ಬನ್ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಮುಂಬೈನ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.
ಬಿಗುವಿನ ವಾತಾವರಣ
ಯುವಕನ ಸಾವು ಖಂಡಿಸಿ ಹಲವರು ಬೆಳಗ್ಗೆಯೇ ರಸ್ತೆಗಿಳಿದಿದ್ದು ಚೆಂಬುರ್, ವಿಖ್ರೋಲಿ, ಮನಖರ್ಡ್ ಮತ್ತು ಗೋವಂಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ನಗರಗಳಲ್ಲಿ ಅಘೋಷಿತ ಬಂದ್ ಜಾರಿಯಲ್ಲಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗೋವಂಡಿ ಮತ್ತು ಚೆಂಬೂರ್ ನಿಲ್ದಾಣಗಳಲ್ಲಿ ಪ್ರತಿಭಟನಾಕಾರರು ರೈಲಿಗೆ ತಡೆಯೊಡ್ಡಿದ್ದಾರೆ.
ಪತ್ರಕರ್ತನ ಮೇಲೆ ಹಲ್ಲೆ
ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯ ಅಮರ್ ಮಹಲ್, ಕುರ್ಲಾ, ಪ್ರಿಯದರ್ಶಿನಿ, ಸಿದ್ಧಾರ್ಥ್ ಕಾಲೊನಿಗಳಲ್ಲಿ ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ಅಮರ್ ಮಹಲ್ ನಲ್ಲಿ ಸುದ್ದಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನವೂ ನಡೆದಿದ್ದು ವರದಿಯಾಗಿದೆ. ಹಲವು ಕಡೆಗಳಲ್ಲಿ ಗಲಭೆಯಿಂದ ಹತ್ತಾರು ಜನರು ಗಾಯಗೊಂಡಿದ್ದಾರೆ.
ಏನಿದು ಕೊರೆಗಾಂವ್ ಹೋರಾಟ?
ಈಸ್ಟ್ ಇಂಡಿಯಾ ಕಂಪೆನಿ ಪೇಶ್ವೇ ಸೇನೆಯ ವಿರುದ್ಧ ಸೆಣೆಸಿದ್ದೇ ಕೊರೆಗಾಂವ್ ಕದನ. ಈ ಕದನದಲ್ಲಿ ಅಸ್ಪೃಶ್ಯರು ಎನಿಸಿಕೊಂಡಿದ್ದ ಮೆಹರ್ ಸಮುದಾಯದ ದಲಿತರು ಬ್ರಿಟೀಷರಿಗೆ ಬೆಂಬಲ ಸೂಚಿಸಿ ಅವರ ಪರವಾಗಿ ಹೋರಾಟ ನಡೆಸಿದ್ದರು. ಪರಿಣಾಮ ಪೇಶ್ವೆಗಳ ವಿರುದ್ಧ ಈಸ್ಟ್ ಇಂಡಿಯಾ ಕಂಪನಿ ಗೆಲುವು ಸಾಧಿಸಿತ್ತು.
ಇದೇ ಭೀಮ ಕೊರೆಗಾಂವ್ ವಿಜಯ ದಿವಸ.
ಬ್ರಿಟೀಷರ ಗೆಲುವನ್ನು ಸಂಭ್ರಮಿಸುತ್ತಿರುವುದಕ್ಕೆ ಪುಣೆಯ ಕೆಲವು ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಘರ್ಷಣೆ ಸಂಭವಿಸಿದೆ.
100ಕ್ಕೂ ಹೆಚ್ಚು ಜನರ ಬಂಧನ
ಘರ್ಷಣೆ ಹಿನ್ನಲೆಯಲ್ಲಿ 100ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹದಪ್ಸಾರ್, ಫುರ್ಸುಂಗಿಯಲ್ಲಿ ಬಸ್ ಗಳ ಮೇಲೆ ಕಲ್ಲು ತೂರಲಾಗಿದ್ದು ಹಲವು ಬಸ್ ಗಳು ಜಖಂಗೊಂಡಿವೆ. ಅಹಮದ್ ನಗರ ಮತ್ತು ಔರಂಗದಾಬಾದ್ ನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಡಿದೆ.