ಜಾತಿವಾರು ಆಧಾರಿತ ಪ್ರದೇಶಗಳಿಗೆ ಮರುನಾಮಕರಣ: ಮಹಾರಾಷ್ಟ್ರ ಮಹತ್ವದ ನಿರ್ಧಾರ
ಮುಂಬೈ, ಡಿಸೆಂಬರ್ 3: ಜಾತಿವಾರು ಹೆಸರಿನ ಆಧಾರದಲ್ಲಿ ಇರುವ ಕಾಲೋನಿಗಳು ಮತ್ತು ಪ್ರದೇಶಗಳನ್ನು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ಮಹಾರಾಷ್ಟ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಅದರ ಬದಲು ಸಾಮಾಜಿಕ ಕಾರ್ಯಕರ್ತರು ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿದ ನಾಯಕರ ಹೆಸರನ್ನು ಇರಿಸಲಾಗುವುದು ಎಂದು ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ತಿಳಿಸಿದ್ದಾರೆ.
ಹಾಗೆಯೇ 2014ರ ನವೆಂಬರ್ 1 ರಿಂದ 2019ರ ಡಿಸೆಂಬರ್ 31ರ ಒಳಗೆ ದಾಖಲಾದ ಸಾಮಾಜಿಕ ಮತ್ತು ರಾಜಕೀಯ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಪ್ರಸ್ತಾವಕ್ಕೆ ಕೂಡ ರಾಜ್ಯ ಸಂಪುಟ ಅನುಮತಿ ನೀಡಿದೆ. ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದಕ್ಕಾಗಿ ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರ ವಿರುದ್ಧ ದಾಖಲಾದ ಹೆಚ್ಚಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.
ರಾಜ್ಯದಾದ್ಯಂತ ಅನೇಕ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಮಹರ್ವಾಡ, ಮಂಗ್ವಾಡ, ಬ್ರಾಹ್ಮಣವಾಡ, ಮಾಲಿ ಗಲ್ಲಿ, ಧೋರ್ವಸ್ಟಿ ಮುಂತಾದ ಜಾತಿ ಆಧಾರಿತ ಹೆಸರುಗಳನ್ನು ಇರಿಸಲಾಗಿದೆ. ಇಂತಹ ಹೆಸರುಗಳು ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯಕ್ಕೆ ಸರಿಹೊಂದುವುದಿಲ್ಲ ಎಂದು ಧನಂಜಯ್ ಮುಂಡೆ ಹೇಳಿದ್ದಾರೆ.

'ಸಾಮಾಜಿಕ ಸಾಮರಸ್ಯ ಮತ್ತು ಒಳಿತನ್ನು ಕಾಪಾಡುವುದನ್ನು ಗಮನದಲ್ಲಿರಿಸಿಕೊಂಡು ಮತ್ತು ರಾಷ್ಟ್ರೀಯ ಏಕತೆಯನ್ನು ಹೆಚ್ಚಿಸಲು ಗ್ರಾಮೀಣ ಮತ್ತು ನಗರಗಳಲ್ಲಿನ ಎಲ್ಲ ಜಾತಿ ಆಧಾರಿತ ಪ್ರದೇಶಗಳು ಮತ್ತು ಸ್ಥಳಗಳ ಹೆಸರನ್ನು ಬದಲಿಸಲಾಗುವುದು. ಅವುಗಳ ಹೆಸರನ್ನು ಉದಾಹರಣೆಗೆ, ಸಮತಾ ನಗರ, ಭೀಮ್ ನಗರ, ಜ್ಯೋತಿ ನಗರ, ಕ್ರಾಂತಿ ನಗರ ಮುಂತಾದ ಸಾಮಾಜಿಕ ಕಾರ್ಯಕರ್ತರು ಅಥವಾ ಅವರ ಕೆಲಸಗಳಿಗೆ ಸಂಬಂಧಿಸಿದ ಹೆಸರಿಗೆ ಬದಲಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications