ಶ್ರೀಮಂತ್ ಪಾಟೀಲ್ ಇರುವ ಆಸ್ಪತ್ರೆಗೆ ನುಗ್ಗಿದ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ

ಮುಂಬೈ, ಜುಲೈ 20: ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಿಯೊಬ್ಬರು ಶುಕ್ರವಾರ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.

ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿರುವ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಳ್ಳಲು ಮುಂಬೈನ ಬಾಂದ್ರಾ ಕ್ಷೇತ್ರದ ಶಾಸಕಿ ಯಶೋಮತಿ ಠಾಕೂರ್ ಬಂದಿದ್ದರು. ಆಗ ಈ ಹೈಡ್ರಾಮಾ ನಡೆದಿದೆ.

ರಾಜ್ಯ ರಾಜಕಾರಣದಲ್ಲಿ ತೀವ್ರ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿಯಾಗಲು ಮತ್ತು ಸಂಪರ್ಕಿಸಲು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಕೂಡ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ರೆಸಾರ್ಟ್‌ನಲ್ಲಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು ರಾತ್ರೋರಾತ್ರಿ ರೆಸಾರ್ಟ್‌ನಿಂದ ಕಣ್ಮರೆಯಾಗಿ ಮುಂಬೈನ ಆಸ್ಪತ್ರೆಯಲ್ಲಿ ಪತ್ತೆಯಾಗಿರುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಅವರನ್ನು ಅಪಹರಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಆರೋಪಿಸಿದ್ದರು. ಆದರೆ, ಸ್ಪೀಕರ್‌ಗೆ ಪತ್ರ ಬರೆದಿದ್ದ ಶ್ರೀಮಂತ್ ಪಾಟೀಲ್ ಅವರು ತಮ್ಮನ್ನು ಯಾರೂ ಅಪಹರಿಸಿಲ್ಲ. ಚೆನ್ನೈಗೆ ಬಂದಾಗ ಎದೆ ನೋವು ಉಂಟಾಗಿತ್ತು. ಪರಿಚಯದ ವೈದ್ಯರು ಮುಂಬೈಗೆ ಬರುವಂತೆ ಹೇಳಿದ್ದರಿಂದ ಅಲ್ಲಿಗೆ ಹೋಗಿ ದಾಖಲಾಗಿದ್ದೇನೆ. ಸದನದ ಉಳಿದ ಕಲಾಪಗಳಿಗೆ ಗೈರು ಹಾಜರಾಗುತ್ತೇನೆ ಎಂದು ತಿಳಿಸಿದ್ದರು.

ಭೇಟಿಗೆ ಅವಕಾಶ ನೀಡದ ಪೊಲೀಸರು

ಭೇಟಿಗೆ ಅವಕಾಶ ನೀಡದ ಪೊಲೀಸರು

ಮಹಾರಾಷ್ಟ್ರ ಮಹಿಳಾ ಕಾಂಗ್ರೆಸ್‌ನ ರಾಜ್ಯ ಘಟಕದ ಕಾರ್ಯಾಧ್ಯಕ್ಷೆಯೂ ಆಗಿರುವ ಯಶೋಮತಿ ಠಾಕೂರ್ ಅವರು, ಸೇಂಟ್ ಜಾರ್ಜ್ ಆಸ್ಪತ್ರೆಗೆ ರಾತ್ರಿ ತೆರಳಿದ್ದರು. ಆದರೆ, ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡಲಿಲ್ಲ. ಶ್ರೀಮಂತ್ ಪಾಟೀಲ್ ಅವರ ಮಗ ಶ್ರೀನಿವಾಸ್ ಪಾಟೀಲ್ ಅವರೂ ಶಾಸಕಿಗೆ ಒಳ ಪ್ರವೇಶಿಸಲು ಆಸ್ಪದ ನೀಡಲಿಲ್ಲ. ಇದರಿಂದ ಕೆರಳಿದ ಯಶೋಮತಿ ಅವರು ಶ್ರೀನಿವಾಸ್ ಪಾಟೀಲ್ ಮತ್ತು ಪೊಲೀಸರನ್ನು ನಿಂದಿಸಿದರು.

'ಶಾಸಕನಾಗುವ ಆಸೆಯಿಂದ ಹೀಗೆ ಮಾಡುತ್ತಿದ್ದೀಯ'

'ಶಾಸಕನಾಗುವ ಆಸೆಯಿಂದ ಹೀಗೆ ಮಾಡುತ್ತಿದ್ದೀಯ'

'ನಮ್ಮ ಪಕ್ಷದ ಶಾಸಕನನ್ನು ಭೇಟಿ ಮಾಡಲು ನನಗೆ ಅವಕಾಶ ಕೊಡುವುದಿಲ್ಲವೇ? ನಿನ್ನ ತಂದೆಯನ್ನು ಇನ್ನೂ ಒಳ್ಳೆಯ ಆಸ್ಪತ್ರೆಗೆ ನಾನು ದಾಖಲಿಸುತ್ತೇನೆ. ಈ ಆಸ್ಪತ್ರೆಯಲ್ಲಿ ಹೃದ್ರೋಗ ಘಟಕವೇ ಇಲ್ಲ. ಆದರೂ ಅವರಿಗೆ ಇಲ್ಲಿ ಹೇಗೆ ಹೃದಯ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ? ನೀನು ಶಾಸಕನಾಗುವ ಆಸೆಯಿಂದ ಹೀಗೆಲ್ಲ ಮಾಡುತ್ತಿದ್ದೀಯ? ಎಂದು ಶ್ರೀನಿವಾಸ್ ಪಾಟೀಲ್ ವಿರುದ್ಧ ಹರಿಹಾಯ್ದರು.

ಅವಾಚ್ಯ ಪದದಿಂದ ನಿಂದನೆ

ಅವಾಚ್ಯ ಪದದಿಂದ ನಿಂದನೆ

ಒಂದು ಹಂತದಲ್ಲಿ ಯಶೋಮತಿ ಅವರು ಶ್ರೀನಿವಾಸ್ ಪಾಟೀಲ್ ಅವರ ಕೈಗಳನ್ನು ಕೂಡ ಹಿಡಿದು ಎಳೆದರು. ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ತಡೆದು ಶ್ರೀನಿವಾಸ್ ಅವರನ್ನು ಒಳಗೆ ಹೋಗುವಂತೆ ಸೂಚಿಸಿದರು. 'ಈ ಸಮಯದಲ್ಲಿ ರೋಗಿಯನ್ನು ನೋಡಲು ಅವಕಾಶವಿಲ್ಲ. ದಯವಿಟ್ಟು ಹೊರಗೆ ಹೋಗಿ' ಎಂದರು. ಆಗ ಮತ್ತಷ್ಟು ಸಿಟ್ಟಿಗೆದ್ದ ಶಾಸಕಿ, ಪೊಲೀಸರ ವಿರುದ್ಧ 'ನೀವೆಲ್ಲರೂ ದುಡ್ಡು ತೆಗೆದುಕೊಂಡಿದ್ದೀರಾ' ಎಂದು ರೇಗಾಡಿದರು. ಶ್ರೀನಿವಾಸ್ ವಿರುದ್ಧ ಅವಾಚ್ಯ ಪದವನ್ನೂ ಬಳಕೆ ಮಾಡಿದರು.

ಸ್ಪೀಕರ್‌ಗೆ ಪತ್ರ ಬರೆದಿದ್ದ ಪಾಟೀಲ್

ಸ್ಪೀಕರ್‌ಗೆ ಪತ್ರ ಬರೆದಿದ್ದ ಪಾಟೀಲ್

'ಗುರುವಾರ ರಾತ್ರಿ ರೆಸಾರ್ಟ್‌ನಿಂದ ತುರ್ತು ಕೆಲಸದ ಮೇರೆಗೆ ಚೆನ್ನೈಗೆ ತೆರಳುತ್ತಿದ್ದೆ. ಆಗ ಏಕಾ-ಏಕಿ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಮುಂಬೈನ ನನ್ನ ಆಪ್ತ ವೈದ್ಯರಿಗೆ ಸಲಹೆ ಕೇಳಿದೆ ಅವರು ಆಸ್ಪತ್ರೆಗೆ ಆಗಮಿಸುವಂತೆ ಹೇಳಿದರು. ಹಾಗಾಗಿ ನಾನು ರಾತ್ರಿಯೇ ಆಸ್ಪತ್ರೆಗೆ ಬಂದೆ. ಸದನದಲ್ಲಿ ಆರೋಪ ಮಾಡಿದಂತೆ ನನ್ನನ್ನು ಯಾವ ಬಿಜೆಪಿ ಸದಸ್ಯರೂ ಸಂಪರ್ಕ ಮಾಡಿಲ್ಲ, ನನ್ನನ್ನು ಯಾರೂ ಅಪಹರಣ ಸಹ ಮಾಡಿಲ್ಲ, ನಾನು ಕಾಂಗ್ರೆಸ್‌ ಪಕ್ಷದ ಸದಸ್ಯನೇ ಆಗಿದ್ದೇನೆ' ಎಂದು ಶ್ರೀಮಂತ ಪಾಟೀಲ್ ಅವರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+