'ಮಹಾ'ದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಾರಣ ಅಮಿತ್ ಶಾ ಅಲ್ಲ.. ಇನ್ಯಾರು..?
ಮುಂಬೈ. ನವೆಂಬರ್ 24: ಮಹಾರಾಷ್ಟ್ರದಲ್ಲಿ ಇನ್ನೇನು ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಸರ್ಕಾರ ರಚಿಸಿಯೇ ಬಿಟ್ಟವು, ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿಬಿಟ್ಟರು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ದಿನಬೆಳಗಾಗುವಷ್ಟರಲ್ಲಿ ಅಲ್ಲಿ ನಡೆದಿದ್ದೆ ಬೇರೆ.
ಯಾರೂ ಕಲ್ಪನೆ ಮಾಡಿರದ ರೀತಿಯಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಎನ್ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಬಿಟ್ಟಿದ್ದರು.
ಮಹಾರಾಷ್ಟ್ರದಲ್ಲಿ ನಡೆದ ಈ ಮಧ್ಯರಾತ್ರಿಯ ಪೊಲಿಟಿಕಲ್ ಹೈಡ್ರಾಮಾ ನಡೆಯಲು ಕಾರಣ ಯಾರು ಎಂದು ಊಹಿಸಿಕೊಂಡರೆ ನಿಮ್ಮ ಕಣ್ಮುಂದೆ ಬರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.

ಆದರೆ ಅವರು ನೇರವಾಗಿ ಕಾರ್ಯಚರಣೆಗೆ ಇಳಿದಿರಲಿಲ್ಲ, ಶಾ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸದವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಭೂಪೇಂದ್ರ ಸಿಂಗ್ ಯಾದವ್.
ಅಮಿತ್ ಶಾರ ನಂಬಿಕಸ್ಥ ಬಂಟನಾಗಿರುವ ಭೂಪೇಂದ್ರ ಸಿಂಗ್ ಯಾದವ್ ಕಳೆದ ಲೋಕಸಭಾ ಚುನಾವಣೆಯಲ್ಲಿ ತೆರೆಮರೆಯಲ್ಲಿ ರಣತಂತ್ರ ಹೆಣೆದು, ಬಿಜೆಪಿಗೆ ಕಷ್ಟವೆನಿಸಿದ್ದ ರಾಜ್ಯಗಳಲ್ಲಿಯೂ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡಿದವರು.

ಪಕ್ಷ ಕೊಟ್ಟ ಕೆಲಸವನ್ನು ಪೂರ್ಣಗೊಳಿಸುವುದರಲ್ಲಿ ಯಾದವ್ ಗೆ ಸರಿಸಾಟಿ ಇಲ್ಲ. ಈಗ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಗೆ ಅದೃಷ್ಟ ತಂದಿಡುವಲ್ಲಿ ಯಾದವ್ ಪಾತ್ರ ಮಹತ್ವದ್ದು.
ಭೂಪೇಂದ್ರ ಯಾದವ್ ಅವಿಶ್ರಾಂತ ಶ್ರಮದಿಂದಾಗಿ ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸಿದೆ. ಆದರೆ ಈ ಸರ್ಕಾರ ಸದ್ಯ ಅತಂತ್ರದಲ್ಲಿದೆ. ಇನ್ನೂ ಬಹುಮತ ವಿಶ್ವಾಸ ವ್ಯಕ್ತಪಡಿಸಿಲ್ಲ.
ಎನ್ಸಿಪಿ ಶಾಸಕರ ನಡೆ ಯಾವ ಕಡೆ ಅನ್ನೋದು ನಿರ್ಧಾರವಾಗಿಲ್ಲ. ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ಕೊಡುವಲ್ಲಿ ಯಾದವ್ ರ ಅವಿರತ ಯತ್ನ ಅಲ್ಲಗೆಳೆಯುವಂತಿಲ್ಲ. ಈ ಮೂಲಕ ಶಾ ಇಟ್ಟ ವಿಶ್ವಾಸವನ್ನು ಯಾದವ್ ಉಳಿಸಿಕೊಂಡ್ರು.












Click it and Unblock the Notifications