ರಜನಿ ಸಿನಿಮಾ ಪ್ರೇರಣೆಯಿಂದ ಮಾಡಿದ ಕೆಲಸಕ್ಕೆ ಕಂಬಿ ಹಿಂದೆ ಖಾನ್
ರಾಜ್ ಕುಮಾರ್ ನಟಿಸಿದ್ದ ಬಂಗಾರದ ಮನುಷ್ಯ ಸಿನಿಮಾದಿಂದ ಪ್ರೇರಿತರಾಗಿ ಅದೆಷ್ಟೋ ಮಂದಿ ವ್ಯವಸಾಯ ಆರಂಭಿಸಿದರು ಎಂಬ ವಿಚಾರ ಕೇಳಿರುತ್ತೀರಿ. ಆದರೆ ಅಂಥ ಒಳ್ಳೆ ಕೆಲಸವನ್ನು ಪ್ರೇರಣೆಯಾಗಿ ಪಡೆಯದ ವ್ಯಕ್ತಿಯೊಬ್ಬ, ರಜನೀಕಾಂತ್ ಸಿನಿಮಾದಿಂದ ಪ್ರೇರಿತನಾಗಿ ದುಡ್ಡು ಹೊಡೆಯುವ ಯೋಜನೆ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ಹೆಸರು ಮೊಹ್ಸಿನ್ ಫಿರೋಜ್ ಖಾನ್. ಮಹಾರಾಷ್ಟ್ರದವನು. ದಿನಸಿ ಪದಾರ್ಥಗಳನ್ನು ಮಾರುವ ಮಳಿಗೆಯೊಂದರಲ್ಲಿ ಸೇಲ್ಸ್ ಮನ್ ಆಗಿದ್ದ. ರಜನಿ ಸಿನಿಮಾದಲ್ಲಿ ಭ್ರಷ್ಟರಿಗೆ ಹಣ ಅಕೌಂಟಿಗೆ ಹಾಕುವಂತೆ ಧಮಕಿ ಹಾಕುವ ದೃಶ್ಯ ನೋಡಿ, ಅದೇ ಐಡಿಯಾ ತಾನು ಯಾಕೆ ಮಾಡಬಾರದು ಎನಿಸಿದೆ.
'ಮೆರ್ಸಲ್' ಚಿತ್ರದ ಬಗ್ಗೆ ರಜನಿ ಮೆಚ್ಚುಗೆ, ಬಿಜೆಪಿ ಪೇಚಿಗೆ
ಆ ನಂತರ ಕೆಲಸ ಬಿಟ್ಟಿದ್ದಾನೆ. ಅದೇ ಮಳಿಗೆಗೆ ಬರುತ್ತಿದ್ದ ನಾಲ್ವರು ಗ್ರಾಹಕರು ಫೋನ್ ನಂಬರ್ ತೆಗೆದುಕೊಂಡಿದ್ದಾನೆ. ಮುಂಬೈನವರಾದ ಜಾಕೋಬ್ ಸರ್ಕಲ್ ಎಂಬುವವರಿಗೆ ಒಂದು ಎಸ್ಸೆಮ್ಮೆಸ್ ಬಂದಿದೆ. ಅದರಲ್ಲಿ, 'ನೀವೇನಾದರೂ ಈ ಬ್ಯಾಂಕ್ ಖಾತೆಗೆ ಐದು ಲಕ್ಷ ರುಪಾಯಿ ಹಣ ಹಾಕಲಿಲ್ಲ ಅಂದರೆ ದಾವೂದ್ ಇಬ್ರಾಹಿಂಗೆ ಸಿಟ್ಟು ಬರುತ್ತದೆ' ಎಂಬ ಒಕ್ಕಣೆಯಿದೆ.
ಈ ಬಾರಿ ಅರುಣ್ ಗಾವ್ಳಿ ಹೆಸರು
ನಾಲ್ಕು ಮಂದಿಗೂ ಅಂಥದೇ ಸಂದೇಶ ಬಂದಿದೆ. ಇದ್ಯಾವುದೋ ತಮಾಷೆ ಮೆಸೇಜು ಅಂತ ಅವರೂ ಸುಮ್ಮನಾಗಿದ್ದಾರೆ. ಅದಾಗಿ ಕೆಲವು ದಿನಕ್ಕೆ ಅದೇ ಮೊಬೈಲ್ ಸಂಖ್ಯೆಯಿಂದ ಮತ್ತೊಮ್ಮೆ ಸಂದೇಶ ಬಂದಿದೆ. ಈ ಬಾರಿ ಅರುಣ್ ಗಾವ್ಳಿ ಕೇಳುತ್ತಿದ್ದಾರೆ, ಹತ್ತು ಲಕ್ಷ ರುಪಾಯಿಯನ್ನು ಬ್ಯಾಂಕ್ ಖಾತೆಗೆ ಹಾಕುವಂತೆ ಎಂಬ ಒಕ್ಕಣೆ ಇದೆ.
ಕೆಟ್ಟ ಇಂಗ್ಲಿಷ್, ಬ್ಯಾಂಕ್ ಖಾತೆಯೂ ನಕಲಿ
ಈ ಸಲ ಎಲ್ಲರೂ ಪೊಲೀಸರಿಗೆ ದೂರು ನೀಡಿದ್ದಾರೆ. ತೀರಾ ಕೆಟ್ಟ ಇಂಗ್ಲಿಷ್ ನಲ್ಲಿ ಸಂದೇಶ ಕಳಿಸಿದ್ದು, ಬ್ಯಾಂಕ್ ಖಾತೆ ಸಂಖ್ಯೆಯೂ ನಕಲಿ ಎಂದು ಗೊತ್ತಾಗಿದೆ. ಆದರೆ ಈ ಮೊಬೈಲ್ ಸಂಖ್ಯೆ ಗುಜರಾತ್ ನ ವಾಪಿಯಲ್ಲಿ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಆ ನಂತರ ಮೊಹ್ಸಿನ್ ನನ್ನು ಎಳೆದುತಂದ ಪೊಲೀಸರ ವಿಚಾರಣೆ ನಡೆಸಿದ್ದಾರೆ.
ರಜನೀಕಾಂತ್ ಸಿನಿಮಾ ಪ್ರೇರಣೆ
ಆಗ, ನಾನು ರಜನೀಕಾಂತ್ ಸಿನಿಮಾದಲ್ಲಿ ಇಂಥ ದೃಶ್ಯ ನೋಡಿದ್ದೆ. ಭ್ರಷ್ಟರನ್ನು ರಜನಿ ಬೆದರಿಸುತ್ತಾರೆ. ತಮ್ಮ ಖಾತೆಗೆ ಹಣ ಹಾಕುವಂತೆ ಧಮಕಿ ಹಾಕುತ್ತಾರೆ. ಹಾಗೇ ಮಾಡಬೇಕು ಅಂತ ಯೋಚಿಸಿದೆ. ಆದರೆ ಹೆದರಿಕೆ ಹುಟ್ಟಿಸುವ ಸಲುವಾಗಿ ದಾವೂದ್ ಇಬ್ರಾಹಿಂ ಹಾಗೂ ಅರುಣ್ ಗಾವ್ಳಿ ಹೆಸರು ಬಳಸಿದೆ ಎಂದು ಖಾನ್ ಹೇಳಿಕೊಂಡಿದ್ದಾನೆ.
ತಮಾಷೆಗೆ ಮಾಡಿದ್ದು
ನನಗೆ ದುಡ್ಡೇ ಬೇಕಿರಲಿಲ್ಲ. ತಮಾಷೆಗೋಸ್ಕರ ಹೀಗೆ ಮಾಡಿದೆ ಎಂದು ಕೂಡ ಆತ ಹೇಳಿದ್ದಾನೆ. ಆದರೆ ಪೊಲೀಸರು ಖಾನ್ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್ ಒಂದರವರೆಗೆ ಪೊಲೀಸ್ ಕಸ್ಟಡಿಗೂ ತೆಗೆದುಕೊಂಡಿದ್ದಾರೆ.