ಆಪ್ತ ಸಿದ್ದರಾಮಯ್ಯ ಮೇಲೆ ಮಾತಿನ ಚಾಟಿ ಬೀಸಿದ ಭೈರತಿ ಬಸವರಾಜು
Recommended Video
ಮುಂಬೈ, ಜುಲೈ 09: ಶಾಸಕ ಭೈರತಿ ಬಸವರಾಜು ಅವರು ಸಿದ್ದರಾಮಯ್ಯ ಅವರ ಅತ್ಯಾಪ್ತ ಬಣದಲ್ಲಿ ಗುರುತಿಸಿಕೊಂಡವರು. ಆದರೆ ಈಗ ಅವರೇ ರಾಜೀನಾಮೆ ನೀಡಿದ್ದಾರೆ, ಅಷ್ಟೆ ಅಲ್ಲ ಸಿದ್ದರಾಮಯ್ಯ ಅವರಿಗೆ ಮಾತಿನ ಛಾಟಿ ಬೀಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೊಟೆಲ್ಗೆ ಹೋಗಿ ತಂಗಿರುವ ಭೈರತಿ ಬಸವರಾಜು ಅವರು, ಅಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದ್ದು, 'ಸಿದ್ದರಾಮಯ್ಯ ಬರುವ ಮುಂಚೆಯಿಂದಲೂ ನಾನು ಕಾಂಗ್ರೆಸ್ನಲ್ಲಿದ್ದೇನೆ' ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಈಗ ಅವರಿಗೆ ಮೋಸ ಮಾಡಿದಂತಾಗಲಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಭೈರತಿ ಬಸವರಾಜು, ನಾನು ಸಿದ್ದರಾಮಯ್ಯ ಅವರ ಬಳಿ ನನ್ನ ನೋವು ತೋಡಿಕೊಂಡೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದರು.

'ಸಿದ್ದರಾಮಯ್ಯಗೆ ಹೇಳಿಯೇ ರಾಜೀನಾಮೆ ನೀಡಿದ್ದೇನೆ'
ರಾಜೀನಾಮೆ ನೀಡುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಹೇಳಿಯೇ ಬಂದಿದ್ದೇನೆ ಎಂದ ಭೈರತಿ, 'ನಮ್ಮ ತಾಯಿಯ ಆಣೆ ರಾಜೀನಾಮೆ ನೀಡುತ್ತೇನೆ' ಎಂದು ಸಿದ್ದರಾಮಯ್ಯ ಅವರಿಗೆ ಈಗಾಗಲೇ ಹೇಳಿದ್ದೇನೆ ಎಂದು ಭೈರತಿ ಬಸವರಾಜು ಹೇಳಿದರು.

'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ, ಪಕ್ಷಕ್ಕಲ್ಲ'
ನಾವು ಸರ್ಕಾರದಿಂದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ, ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದ ಅವರು ಯಾವುದೇ ಕಾರಣಕ್ಕೆ ನಾವು ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಭೈರತಿ ಬಸವರಾಜು ಹೇಳಿದ್ದಾರೆ.

ಅನರ್ಹ ಮಾಡಿದರೆ ನಮ್ಮ ಅಭ್ಯಂತರವಿಲ್ಲ: ಭೈರತಿ
ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹ ಮಾಡುತ್ತೇವೆ ಎಂದು ಹೇಳಿರುವ ಸಿದ್ದರಾಮಯ್ಯ ಅವರ ಮಾತಿಗೆ ಉತ್ತರಿಸಿದ ಭೈರತಿ ಬಸವರಾಜು, ಅನರ್ಹ ಮಾಡಿದರೂ ನಮ್ಮ ಅಭ್ಯಂತರವಿಲ್ಲ, ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ, ನಾವೆಲ್ಲ ರಾಜಕೀಯ ಇಲ್ಲದೆಯೂ ಇರಬಲ್ಲೆವು ಆದರೆ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದರು.

ನಮ್ಮನ್ನು ಯಾರೂ ಬಂಧನದಲ್ಲಿ ಇರಿಸಿಲ್ಲ: ಭೈರತಿ
ನಮ್ಮನ್ನು ಯಾರೂ ಬಂಧನದಲ್ಲಿ ಇರಿಸಿಲ್ಲ, ನಾವು ನಮ್ಮ ಸ್ವ-ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇವೆ, ನಾವೆಲ್ಲರೂ ಇಲ್ಲಿಗೆ ಆಟ ಆಡಲು ಬಂದಿಲ್ಲ, ನಾವೆಲ್ಲರೂ ನಮ್ಮ ಸ್ವಂತ ಖರ್ಚಿನಿಂದ ಬಂದಿದ್ದೇವೆ, ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಈ ನಿರ್ಣಯ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ಹೇಳಿದರು.

ಸ್ಪೀಕರ್ ಹೇಳಿದರೆ ಮತ್ತೊಮ್ಮೆ ರಾಜೀನಾಮೆ: ಭೈರತಿ
ಸ್ಪೀಕರ್ ಅವರ ಬಗ್ಗೆ ಅಪಾರ ಗೌರವ ಇದ್ದು, ನಿಯಮದಂತೆ ಅವರು ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ, ಅವರು ಕರೆದರೆ ನಾವು ಈಗಲೇ ಭೇಟಿ ಆಗಲು ಹೋಗಲು ತಯಾರಿದ್ದೇವೆ, ಅವರು ಕೇಳಿದರೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ನಾವು ತಯಾರಿದ್ದೇವೆ ಎಂದು ಭೈರತಿ ಹೇಳಿದ್ದಾರೆ.












Click it and Unblock the Notifications