ಭಿಕ್ಷುಕರು, ಮನೆಯಿಲ್ಲದವರಿಗೆ ಸರ್ಕಾರ ಎಲ್ಲವನ್ನೂ ನೀಡಲಾಗುವುದಿಲ್ಲ: ಬಾಂಬೆ ಹೈಕೋರ್ಟ್
ಮುಂಬೈ, ಜುಲೈ 03: ಮನೆಯಿಲ್ಲದವರು, ಭಿಕ್ಷುಕರಿಗೆ ಎಲ್ಲವನ್ನೂ ಸರ್ಕಾರ ನೀಡಲು ಸಾಧ್ಯವಿಲ್ಲ, ಅವರೂ ದುಡಿಯಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಹಾಗೂ ನ್ಯಾ. ಜಿಎಸ್ ಕುಲಕರ್ಣಿ ನೇತೃತ್ವದ ಪೀಠವು ಈ ಹೇಳಿಕೆ ನೀಡಿದೆ.
ಬ್ರಿಜೇಶ್ ಆರ್ಯ ಎಂಬುವರು ಸಲ್ಲಿಸಿದ ಅರ್ಜಿಯಲ್ಲಿ ಮುಂಬೈ ಮಹಾನಗರ ಪಾಲಿಕೆಯು ಮನೆ ಇಲ್ಲದವರಿಗೆ ಮತ್ತು ಭಿಕ್ಷುಕರಿಗೆ ದೈನಂದಿನ ಮೂರು ಹೊತ್ತು ಪೋಷಕಾಂಶಯುಕ್ತ ಆಹಾರ, ನೀರು, ವಸತಿ ಹಾಗೂ ಸಾರ್ವಜನಿಕ ಶೌಚಾಲಯ ಒದಗಿಸಬೇಕು ಎಂದು ಉಲ್ಲೇಖಿಸಲಾಗಿತ್ತು.
ಎನ್ಜಿಒಗಳ ಸಹಾಯದಿಂದ ಮುಂಬೈನಾದ್ಯಂತ ನಿರ್ಗತಿಕರಿಗೆ ಹಾಗೂ ವಸತಿ ಇಲ್ಲದವರಿಗೆ ಆಹಾರದ ಪೊಟ್ಟಣಗಳನ್ನು ಮಹಾನಗರ ಪಾಲಿಕೆ ಈಗಾಗಲೇ ವಿತರಿಸುತ್ತಿದೆ.
ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಲಾಗುತ್ತಿದೆ ಎಂದು ಬಿಎಂಸಿಯು ನ್ಯಾಯಾಲಯಕ್ಕೆ ತಿಳಿಸಿದೆ, ಈ ಸಲ್ಲಿಕೆಯನ್ನು ಸಂಗೀಕರಿಸಿದ ನ್ಯಾಯಾಲಯವು ಈ ಅರ್ಜಿಯ ಕುರಿತು ಹೆಚ್ಚಿನ ನಿರ್ದೇಶನ ಅಗತ್ಯವಿಲ್ಲ ಎಂದರು.
ವಸತಿಯಿಲ್ಲದವರು ಹಾಗೂ ಭಿಕ್ಷುಕರು ದೇಶಕ್ಕಾಗಿ ಸಹ ಕೆಲಸ ಮಾಡಬೇಕು, ಎಲ್ಲವನ್ನೂ ಸರ್ಕಾರ ಅಥವಾ ರಾಜ್ಯದಿಂದ ಒದಗಿಸಲು ಸಾಧ್ಯವಿಲ್ಲ.
ನೀವು ಇಂಥವರ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದೀರಿ ಮತ್ತು ಜನರನ್ನು ಕೆಲಸ ಮಾಡದಂತೆ ತಡೆಯುತ್ತಿದ್ದೀರಿ ಎಂದು ಅರ್ಜಿದಾರರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.