ಮಳೆ; ಮುಂಬೈನಲ್ಲಿ 24 ಗಂಟೆಗಳ ರೆಡ್ ಅಲರ್ಟ್ ಘೋಷಣೆ
ಮುಂಬೈ,ಜು.8: ವಿಪರೀತ ಮಳೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಮುಂಬೈನಲ್ಲಿ ಶುಕ್ರವಾರ ಮಧ್ಯಾಹ್ನ 1 ರಿಂದ ಮುಂದಿನ 24 ಗಂಟೆಗಳವರೆಗೆ ರೆಡ್ ಅಲರ್ಟ್ ಘೋಷಿಸಿದೆ.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಬೈಕರ್ಗಳು ತಮ್ಮ ಪ್ರಯಾಣ ಮತ್ತು ವೇಳಾಪಟ್ಟಿಯನ್ನು ಅದೇ ರೀತಿ ಯೋಜಿಸಲು ನಾವು ವಿನಂತಿಸುತ್ತೇವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ 5 ದಿನಗಳಲ್ಲಿ ಒಡಿಶಾ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತು ಮಾಹೆ, ಆಂಧ್ರ ಪ್ರದೇಶ ಕರಾವಳಿ ಮತ್ತು ಯಾನಂ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಳೆ ಮತ್ತು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಮುಂಬೈ ಪ್ರಾದೇಶಿಕ ಹವಾಮಾನ ಕೇಂದ್ರವು ಬುಧವಾರ ಮುಂಬೈ, ಥಾಣೆ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಅಂಧೇರಿ ಸಬ್ವೇ ಜಲಾವೃತ
ಜುಲೈ 10ರವರೆಗೆ ಮುಂಬೈ ಮತ್ತು ಥಾಣೆಗೆ ಆರೆಂಜ್ ಅಲರ್ಟ್ ನೀಡಿತ್ತು. ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜುಲೈ 9 ರವರೆಗೆ ರೆಡ್ ಅಲರ್ಟ್ ಮತ್ತು ಜುಲೈ 10 ರಂದು ಆರೆಂಜ್ ಅಲರ್ಟ್ನಲ್ಲೇ ಇದೆ. ಜುಲೈ 8ರಂದು ಪಾಲ್ಘರ್ಗೆ ರೆಡ್ ಅಲರ್ಟ್ ನೀಡಿದೆ. ಗುರುವಾರ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಂಧೇರಿ ಸಬ್ವೇ ಜಲಾವೃತವಾಗಿತ್ತು. ನಗರದ ಹಲವೆಡೆ ಬುಧವಾರ ತೀವ್ರ ಜಲಾವೃತವಾಗಿತ್ತು.

ತುಂಬಿ ಹರಿದ ಪೊವೈ ಸರೋವರ
ದಾದರ್ ಮತ್ತು ಸಿಯಾನ್ ಪ್ರದೇಶಗಳಲ್ಲಿ ಜಲಾವೃತವಾಗಿದ್ದು, ಮಂಗಳವಾರ ಸಂಜೆ ಪೊವೈ ಸರೋವರವು ತುಂಬಿ ಹರಿಯಲಾರಂಭಿಸಿತ್ತು. ಮುಂಬೈ ನಗರದಲ್ಲಿ ಸೋಮವಾರದಿಂದ ಭಾರೀ ಮಳೆಯಾಗುತ್ತಿದ್ದು, ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಂಗಳವಾರ ಮುಂಬೈನ ಘಾಟ್ಕೋಪರ್ನ ಪಂಚಶೀಲ ನಗರದಲ್ಲಿ ಭಾರೀ ಮಳೆಯ ನಡುವೆ ಭೂಕುಸಿತ ಸಂಭವಿಸಿ, ಮನೆ ನೆಲಸಮವಾದ ಘಟನೆ ವರದಿಯಾಗಿದೆ. ಬುಧವಾರ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆಯ ಬಳಿ ಭೂಕುಸಿತ ವರದಿಯಾಗಿದೆ. ಅದೃಷ್ಟವಶಾತ್ ಇದುವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ರಾಜ್ಯದ ಹಲವು ನದಿಗಳು ಎಚ್ಚರಿಕೆಯ ಮಟ್ಟ ತಲುಪಿವೆ. ಕುಂಡಲಿಕಾ ನದಿಯು ಎಚ್ಚರಿಕೆಯ ಮಟ್ಟವನ್ನು ದಾಟಿದ್ದು, ಅಂಬಾ, ಸಾವಿತ್ರಿ, ಪಾತಾಳಗಂಗಾ, ಉಲ್ಲಾಸ್ ಮತ್ತು ಗರ್ಹಿ ನದಿಗಳ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ಅನಾಹುತ ಘಟನೆಗಳ ಬಗ್ಗೆ ಎಚ್ಚರಿಕೆ
ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯ ನಡುವೆ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಅನ್ನು ಘೋಷಿಸಿದ ಹಿನ್ನೆಲೆಯಲ್ಲಿ ಮುಂಬೈ ಜನರು ನಗರದ ಬೀಚ್ಗಳಿಗೆ ಭೇಟಿ ನೀಡುವುದನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ (BMC) ನಿಷೇಧಿಸಿದೆ. ಜನರು ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಬೀಚ್ಗಳಿಗೆ ಭೇಟಿ ನೀಡಬಹುದು ಎಂದು ಪಾಲಿಕೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಅರೇಬಿಯನ್ ಸಮುದ್ರದಲ್ಲಿ ಅನಾಹುತ ಘಟನೆಗಳನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಲ್ಲಾ ಬೀಚ್ಗಳಿಗೆ ಅಗತ್ಯ ಸೂಚನೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಅವಧಿಯಲ್ಲಿ, ಮುಂಬೈನ ಬೀಚ್ಗಳು ಸಾರ್ವಜನಿಕರಿಗೆ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಪ್ರವೇಶಕ್ಕೆ ತೆರೆದಿರುತ್ತವೆ ಎಂದು ಈ ಮೂಲಕ ನಿರ್ದೇಶಿಸಲಾಗಿದೆ" ಎಂದು ಮುನ್ಸಿಪಲ್ ಕಮಿಷನರ್ ಮತ್ತು ಆಡಳಿತಾಧಿಕಾರಿ ಇಕ್ಬಾಲ್ ಸಿಂಗ್ ಚಾಹಲ್ ಆದೇಶ ಹೊರಡಿಸಿದ್ದಾರೆ.
ಮುಂಬೈ ಮಹಾನಗರ ಪಾಲಿಕೆ ಎಲ್ಲಾ ಬೀಚ್ಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಹೇಳಿದೆ. ಇದರಿಂದ ಜನರು ಈ ನಿರ್ಬಂಧಗಳ ಬಗ್ಗೆ ಗೊತ್ತಾಗುತ್ತದೆ. ನಗರದ ಪೊಲೀಸ್, ಅಗ್ನಿಶಾಮಕ ಇಲಾಖೆಯ ಲೈಫ್ ಗಾರ್ಡ್ಗಳು ಮತ್ತು ಬಿಎಂಸಿ ಸಿಬ್ಬಂದಿ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಲಾಗಿದೆ.












Click it and Unblock the Notifications