ಕೊಡಲಿಯಿಂದ ಕೊಚ್ಚಿ ನಾಲ್ಕು ಕಂದಮ್ಮಗಳ ಬರ್ಬರ ಕೊಲೆ
ಮುಂಬೈ, ಅಕ್ಟೋಬರ್ 16: ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಒಂದೇ ಕುಟುಂಬದ ನಾಲ್ಕು ಪುಟ್ಟ ಮಕ್ಕಳನ್ನು ಕೊಡಲಿಯಿಂದ ಕಡಿದು ಕೊಂದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಜಾಲ್ಗಾನ್ನ ಬೊರ್ಖೇಡಾ ಗ್ರಾಮದಲ್ಲಿ 3-12 ವರ್ಷದ ನಾಲ್ವರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದ ತನಿಖೆಗೆ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಮೆಹ್ತಾಬ್ ಮತ್ತು ರುಮಾಲಿ ಭಿಲಾಲಾ ಕೃಷಿ ಕೆಲಸಗಳಿಗಾಗಿ ವಲಸೆ ಬಂದಿದ್ದರು. ಮಧ್ಯಪ್ರದೇಶದಲ್ಲಿನ ಅವರ ಗ್ರಾಮವು ಕೆಲವೇ ಕಿ.ಮೀ. ದೂರದಲ್ಲಿದ್ದು, ಊರಿನ ಮುಖಂಡರೊಬ್ಬರ ಮಾಲೀಕತ್ವದ ಹೊಲದಲ್ಲಿ ದುಡಿಯುವ ಸಲುವಾಗಿ ಅವರು ಜಲ್ಗಾನ್ಗೆ ಬಂದಿದ್ದರು.

ಜಮೀನಿನಲ್ಲಿ ಕೆಲಸ ಮಾಡಲು ಶುಕ್ರವಾರ ಪೋಷಕರು ತೆರಳಿದ್ದರು. ಎಲ್ಲ ನಾಲ್ವರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಜಮೀನಿನ ಮಾಲೀಕ ಮುಸ್ತಾಫಾ ಗಮನಿಸಿದ್ದಾರೆ. ಮಕ್ಕಳ ಮೃತದೇಹದ ಸಮೀಪವೇ ರಕ್ತಸಿಕ್ತ ಕೊಡಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ಕೊಡಲಿಯಿಂದ ಎಲ್ಲ ನಾಲ್ಕು ಮಕ್ಕಳನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಮೃತ ದುರ್ದೈವಿ ಮಕ್ಕಳನ್ನು ಸೈತಾ (12), ರಾವಲ್ (11), ಅನಿಲ್ (8) ಮತ್ತು ಸುಮನ್ (3) ಎಂದು ಗುರುತಿಸಲಾಗಿದೆ.
ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಐಪಿಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ದಾಖಲೀಕರಣ ಮಾಡಲಾಗುತ್ತದೆ. ಈ ಪ್ರಕರಣ ತುಂಬಾ ನಿಗೂಢ ಎನಿಸಿರುವ ಕಾರಣದಿಂದ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಹಿರಿಯ ವೈದ್ಯರು ಮತ್ತು ವಿಧಿವಿಜ್ಞಾನ ತಜ್ಞರನ್ನು ಪೊಲೀಸರು ಕೋರಿದ್ದಾರೆ.












Click it and Unblock the Notifications