ಮುಂಬೈ ದಾಳಿಯಲ್ಲಿ ಪಾಕ್ ಸಂಚು, ಅಧಿಕಾರಿ ಒಪ್ಪಿಕೊಂಡ ಅರ್ಧ ಸತ್ಯ
ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಮಾಜಿ ರಕ್ಷಣಾ ಸಲಹೆಗಾರ ಮುಹಮ್ಮದ್ ದುರಾನಿ 26/11ರ ಮುಂಬೈ ದಾಳಿಯ ಸಂಚನ್ನು ಪಾಕಿಸ್ತಾನದಲ್ಲೇ ರೂಪಿಸಲಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಗೆ ಇದು ಉತ್ತಮ ಉದಾಹರಣೆ ಎಂದಿದ್ದರು.
ಬೆಂಗಳೂರು, ಮಾರ್ಚ್ 7: ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಮಾಜಿ ರಕ್ಷಣಾ ಸಲಹೆಗಾರ ಮುಹಮ್ಮದ್ ದುರಾನಿ 26/11ರ ಮುಂಬೈ ದಾಳಿಯ ಸಂಚನ್ನು ಪಾಕಿಸ್ತಾನದಲ್ಲೇ ರೂಪಿಸಲಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಗೆ ಇದು ಉತ್ತಮ ಉದಾಹರಣೆ ಎಂದಿದ್ದರು.
ಆದರೆ ಇದರಲ್ಲಿ ಪಾಕಿಸ್ತಾನ ಸರಕಾರದ ಯಾವುದೇ ಕೈವಾಡ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಹಮ್ಮದ್ ದುರಾನಿಯ ಇಂಥಹದ್ದೊಂದು ಹೇಳಿಕೆ ದೇಶದಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಆದರೆ ಹಾಗೆ ನೋಡಿದರೆ ದುರಾನಿ ಹೇಳಿದ್ದರಲ್ಲಿ ಹೊಸತೇನೂ ಇಲ್ಲ.[ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರನ ಹತ್ಯೆ]
ಪಾಕಿಸ್ತಾನದ ಲಷ್ಕರ್ ಎ ತಯ್ಯಬಾ ಈ ದಾಳಿಯನ್ನು ಸಂಘಟಿಸಿತ್ತು. ದಾಳಿಗೆ ಬೇಕಾದ ತರಬೇತಿ, ಹಣ, ಸ್ಪೋಟಕಗಳನ್ನು ನೀಡಿ ಉಗ್ರರನ್ನು ಭಾರತದೊಳಕ್ಕೆ ಕಳುಹಿಸಿತ್ತು. ಈ ದಾಳಿಯಿಂದಾಗಿ 160 ಜನ ಸಾವಿಗೀಡಾಗಿದ್ದರು. ಆದರೆ ವಿಚಿತ್ರವೆಂದರೆ ಇಷ್ಟೆಲ್ಲಾ ಮಾತನಾಡುವ ಪಾಕಿಸ್ತಾನ ಕಾನೂನಿನ ಕಟಕಟೆಗೆ ಈ ಉಗ್ರ ಸಂಘಟನೆಯ ಯಾರನ್ನೂ ತರಲೇ ಇಲ್ಲ.
ಈ ದಾಳಿಯಲ್ಲಿ ಪರೋಕ್ಷವಾಗಿ ಪಾಲ್ಗೊಂಡಿದ್ದ ಡೇವಿಡ್ ಕೋಲ್ಮನ್ ಹೆಡ್ಲಿ ಈ ಹಿಂದೆ ವಿಚಾರಣೆಗಳಲ್ಲಿ ಹೇಗೆ ಲಷ್ಕರ್ ಎ ತಯ್ಯಬಾ ದಾಳಿಯನ್ನು ಆಯೋಜಿಸಿತ್ತು ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ ಪಾಕಿಸ್ತಾನದ ಸೇನೆಯ ಅಧಿಕಾರಿಗಳೇ ಮುರ್ಡಿಕೆ ತರಬೇತಿ ಕೇಂದ್ರಕ್ಕೆ ಬಂದು ತರಬೇತಿ ನೀಡುತ್ತಿದ್ದುದನ್ನೂ ಹೇಳಿದ್ದಾನೆ. ಮೇಜರ್ ಸಮೀದ್ ಅಲಿ, ಮೇಜರ್ ಇಕ್ಬಾಲ್ ಹಾಗೂ ಇಬ್ಬರು ಐಎಸ್ಐ ಅಧಿಕಾರಿಗಳು ಈ ದಾಳಿಯಲ್ಲಿ ಕೈ ಜೋಡಿಸಿದ್ದರು. ಆದರೆ ಈ ವ್ಯಕ್ತಿಗಳು ಕೈ ಜೋಡಿಸಿದ್ದನ್ನು ಪಾಕಿಸ್ತಾನ ತಳ್ಳಿ ಹಾಕುತ್ತಾ ಬಂದಿದೆ.[ಭೋಪಾಲ್ -ಉಜ್ಜಿಯಿನಿ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ]
ಘಟನೆ ನಡೆದು 9 ವರ್ಷಗಳಾದರೂ ಹಫೀಸ್ ಸಯೀದ್ ಆಗಲಿ, ಝಕಿ ಉರ್ ರೆಹಮಾನ್ ಲಕ್ವಿ ಯನ್ನಾಗಲಿ ಬಂಧಿಸಿಲ್ಲ ಹಾಗೂ ಯಾವತ್ತೂ ಕಟೆಕಟೆಗೆ ಹತ್ತಿಸಿಯೇ ಇಲ್ಲ. ದಾಳಿಯಲ್ಲಿ ಇವರಿಬ್ಬರ ಕೈವಾಡ ಎಷ್ಟಿತ್ತು ಎಂಬುದನ್ನು ಕಸಬ್ ಹಾಗೂ ಹೆಡ್ಲಿ ಈಗಾಗಲೇ ಬಾಯಿಬಿಟ್ಟಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಎಷ್ಟೇ ಸಾಕ್ಷ್ಯಗಳನ್ನು ನೀಡಿದರೂ ಅದನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ.
ದುರಾನಿಯ ಹೇಳಿಕೆ ಭಾರತಕ್ಕೆ ಅಚ್ಚರಿಯನ್ನಾಗಲೀ ಅಘಾತವನ್ನಾಗಲಿ ತರಲಿಲ್ಲ. ಬದಲಿಗೆ ಇದು ಗೊತ್ತಿದ್ದ ಸತ್ಯವನ್ನೇ ಪುನರುಚ್ಚರಿಸಿದಂತಾಗಿದೆ ಅಷ್ಟೆ.
ಪಾಕಿಸ್ತಾನದಲ್ಲೇ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಹೇಳಿರುವ ದುರಾನಿ ಅರ್ಧ ಸತ್ಯವನ್ನಷ್ಟೇ ಹೇಳಿದ್ದಾರೆ. ಪಾಕಿಸ್ತಾನದ ಭದ್ರತಾ ಸಲಹೆಗಾರರಾಗಿ ಉಗ್ರರ ಜತೆ ಐಎಸ್ಐ ಮತ್ತು ಅಲ್ಲಿನ ಮಿಲಿಟರಿ ಹೊಂದಿರುವ ಸಂಪರ್ಕದ ಬಗ್ಗೆ ಮಾಹಿತಿ ಇರದೇ ಇರಲು ಸಾಧ್ಯವಿಲ್ಲ. ಆದರೂ ಅರ್ಧ ಮಾಹಿತಿಯನ್ನಷ್ಟೇ ನೀಡಿ ಅವರು ಕೈತೊಳೆದುಕೊಂಡಿದ್ದಾರೆ.
ಘಟನೆಯಲ್ಲಿ ಕೈವಾಡ ಇದೆ ಎನ್ನಲಾದ ಇನ್ನೊಬ್ಬ ಅಂತರಾಷ್ಟ್ರೀಯ ಕುಖ್ಯಾತ ಭಯೋತ್ಪಾದಕ ಸಾಜಿದ್ ಮಿರ್ ಹೆಸರನ್ನೂ ದುರಾನಿ ಉಲ್ಲೇಖಿಸಿಲ್ಲ. ಹೀಗೆ ದುರಾನಿ ಮಾತು ಹೊಸ ಬಾಟಲಿಯಲ್ಲಿ ಹಳೆ ಮದ್ಯದಂತಾಗಿದೆ.