ಎಲ್ಗರ್ ಪರಿಷದ್ ಪ್ರಕರಣ: ಆಸ್ಪತ್ರೆಗೆ ಸ್ಟಾನ್ ಸ್ವಾಮಿ ದಾಖಲಿಸಲು ಬಾಂಬೆ ಹೈಕೋರ್ಟ್ ಅನುಮತಿ
ಮುಂಬೈ, ಮೇ 28: ಎಲ್ಗರ್ ಪತಿಷದ್ ಮಾವೋವಾದಿ ನಂಟಿನ ಪ್ರಕರಣ ಸಂಬಂಧ ಬಂಧಿತರಾಗಿದ್ದ ಹಿರಿಯ ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ಮುಂಬೈನಲ್ಲಿನ ಹೋಲಿ ಫ್ಯಾಮಿಲಿ ಖಾಸಗಿ ಆಸ್ಪತ್ರೆಯಲ್ಲಿ ಹದಿನೈದು ದಿನಗಳ ಅವಧಿ ಅವರನ್ನು ದಾಖಲಿಸುವಂತೆ ತಿಳಿಸಿದೆ.
ಸ್ವಾಮಿ ಅವರ ಮಧ್ಯಂತರ ಜಾಮೀನು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಮಿಹಿರ್ ದೇಸಾಯಿ ಕೋರಿಕೆ ಸಲ್ಲಿಸಿದ ನಂತರ ಈ ಅನುಮತಿ ನೀಡಲಾಗಿದೆ.

ನ್ಯಾಯಾಲಯದ ಅನುಮತಿ ಮೇರೆಗೆ, ಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ಆಸ್ಪತ್ರೆಗೆ ದಾಖಲಾಗಲು ಅವರನ್ನು ಒಪ್ಪಿಸಿದ್ದೇನೆ ಎಂದು ವಕೀಲರು ತಿಳಿಸಿದ್ದಾರೆ.
84 ವರ್ಷದ ಸ್ವಾಮಿ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು ಈ ಹಿನ್ನೆಲೆ ಸರ್ ಜೆಜೆ ಆಸ್ಪತ್ರೆಗೆ ದಾಖಲಿಸುವಂತೆ ಹಾಗೂ ವೈದ್ಯಕೀಯ ವರದಿಯನ್ನು ಮೇ 21ರಂದು ಸಲ್ಲಿಸುವಂತೆ ಮೇ 19ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿತ್ತು. ಆದರೆ ಆಸ್ಪತ್ರೆಗೆ ದಾಖಲಾಗಲು ಸ್ವಾಮಿ ನಿರಾಕರಿಸಿದ್ದರು.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ನಾನು ಆಸ್ಪತ್ರೆಗೆ ದಾಖಲಾಗುವ ಬದಲು ಇಲ್ಲೇ ಇರುತ್ತೇನೆ ಎಂದು ಬಾಂಬೆ ಹೈಕೋರ್ಟ್ಗೆ ಹೇಳಿದ್ದರು.
'ನಾನು ನನ್ನ ಕೊನೆಯ ಸಂದರ್ಭದಲ್ಲಿ ರಾಂಚಿಯಲ್ಲಿರಲು ಬಯಸುತ್ತೇನೆ. ಈಗ ನನ್ನನ್ನು ಆಸ್ಪತ್ರೆಗೆ ದಾಖಲು ಮಾಡುವುದರಿಂದ ಏನೂ ಪ್ರಯೋಜನವಾಗದು ಎಂದು ನನಗನಿಸುತ್ತಿದೆ. ನಿಧಾನವಾಗಿ ನನ್ನ ಸ್ಥಿತಿ ಶೋಚನೀಯವಾಗುತ್ತಿದೆ. ಎಂಟು ತಿಂಗಳ ಹಿಂದೆ ನಾನು ನನ್ನ ಕೆಲವು ಕೆಲಸಗಳನ್ನಾದರೂ ಮಾಡುತ್ತಿದ್ದೆ. ಊಟ ಮಾಡುತ್ತಿದ್ದೆ, ಸ್ವಲ್ಪ ಬರೆಯುತ್ತಿದ್ದೆ, ನಡೆದಾಡುತ್ತಿದ್ದೆ, ಯಾರ ಸಹಾಯ ಪಡೆಯದೆಯೇ ಸ್ನಾನ ಮಾಡುತ್ತಿದ್ದೆ. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿದೆ. ನನಗೆ ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇದ್ದೇನೆ. ಆಹಾರವನ್ನೂ ಯಾರಾದರು ತಿನ್ನಿಸಬೇಕಾಗಿದೆ. ಹೀಗಿರುವಾಗ ನಾನು ರಾಂಚಿಯಲ್ಲಿರಲು ಬಯಸುತ್ತೇನೆ' ಎಂದು ಹೇಳಿದ್ದರು.
2020ರಲ್ಲಿ ಸ್ಟಾನ್ ಸ್ವಾಮಿ ಅವರನ್ನು ಎಲ್ಗರ್ ಪರಿಷದ್ ಮಾವೋವಾದಿ ನಂಟಿನ ಪ್ರಕರಣದಲ್ಲಿ ಬಂಧಿಸಿ ತಲೋಜಾ ಜೈಲಿನಲ್ಲಿ ಇರಿಸಲಾಗಿತ್ತು. ಕಳೆದ ಎಂಟು ತಿಂಗಳಿನಿಂದಲೂ ಅವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾಗುವ ಬದಲು ಮಧ್ಯಂತರ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅವರು ಒತ್ತಾಯಿಸಿದ್ದರು.












Click it and Unblock the Notifications