ಸಮೀರ್ ವಾಂಖೆಡೆಗೆ ವಿಶೇಷ ರಕ್ಷಣೆ ನೀಡಲು ಕೋರ್ಟ್ ನಿರಾಕರಣೆ
ಮುಂಬೈ, ಅಕ್ಟೋಬರ್ 26: ಕ್ರೂಸ್ ಡ್ರಗ್ಸ್ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸಮೀರ್ ವಾಂಖೆಡೆಗೆ ಕಾನೂನು ರಕ್ಷಣೆ ನೀಡಲು ಕೋರ್ಟ್ ನಿರಾಕರಿಸಿದೆ.
ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಸಾಕ್ಷಿದಾರನ ಅಫಿಡವಿಟ್ನ್ನು ನ್ಯಾಯಾಲಯ ಸ್ವೀಕರಿಸದಂತೆ ಕಾನೂನು ರಕ್ಷಣೆ ನೀಡುವ ಆದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿದೆ.
ಆರ್ಯನ್ ಡ್ರಗ್ಸ್ ಪ್ರಕರಣ: ಮುಂಬೈ ಪೊಲೀಸ್ ಕಮಿಷನರ್ಗೆ ಸಮೀರ್ ವಾಂಖೆಡೆ ಬರೆದ ಪತ್ರದಲ್ಲೇನಿದೆ?
ಈ ಪ್ರಕರಣದಲ್ಲಿ ತನಿಖೆಯ ಹಾದಿ ತಪ್ಪಿಸಲು, ತೊಡಕು ಉಂಟು ಮಾಡಲು ಸ್ಮೈಲ್ ಪ್ರಯತ್ನಿಸಿರುವುದಾಗಿ ಎನ್ ಸಿಬಿ ಮತ್ತು ಅದರ ವಲಯ ಅಧಿಕಾರಿ ಆರೋಪಿಸಿದ್ದರು. ಸಾಕ್ಷ್ಯ ತಿರುಚದಂತೆ ಅಥವಾ ಪ್ರಕರಣದ ಹಾದಿ ತಪ್ಪಿಸದಂತೆ ನ್ಯಾಯಾಲಯ ಸೂಕ್ತ ಆದೇಶ ನೀಡಬೇಕೆಂದು ಕೇಂದ್ರಿಯ ಏಜೆನ್ಸಿ ಕೋರಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿವಿ ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠ, ಇಂತಹ ರಕ್ಷಣಾತ್ಮಕ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಬಾಲಿವುಡ್ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಆರೋಪಿಯಾಗಿರುವ ಪ್ರಕರಣದಲ್ಲಿ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರು ಹಣ ಸುಲಿಗೆ ಯತ್ನ ನಡೆಸಿದ್ದಾರೆ ಎಂದು ಸಾಕ್ಷಿದಾರ ಪ್ರಭಾಕರ್ ಸ್ಮೈಲ್ ಆರೋಪಿಸಿದ್ದರು.
ತಮ್ಮ ವಿರುದ್ಧದ ಸುಲಿಗೆ ಆರೋಪದ ವಿರುದ್ಧ ಎನ್ ಸಿಬಿ ಹಾಗೂ ವಲಯ ನಿರ್ದೇಶಕ ಸಮೀರ್ ವಾಖೆಂಡೆ, ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಸ್ವತಂತ್ರ ಸಾಕ್ಷಿದಾರ ಪ್ರಭಾಕರ್ ಸ್ಮೈಲ್ ತಯಾರಾದ ಅಫಿಡವಿಟ್ ನಂತೆ ಸ್ವಯಂ ಪ್ರೇರಿತವಾಗಿ ನ್ಯಾಯಾಲಯ ತೆಗೆದುಕೊಳ್ಳದಂತೆ ಕಾನೂನು ರಕ್ಷಣೆ ನೀಡುವಂತೆ ಆದೇಶ ಮಾಡುವಂತೆ ಡ್ರಗ್ಸ್ ವಿರೋಧಿ ಏಜೆನ್ಸಿ ಹಾಗೂ ವಾಖೆಂಡೆ ಅಫಿಡವಿಟ್ ನಲ್ಲಿ ಕೋರಿದ್ದರು.
ಎನ್ಸಿಬಿ ಮೇಲಿನ ಆರೋಪವೇನು?: ಮುಂಬೈನ ಅರ್ಥರ್ ರೋಡ್ ಜೈಲಲ್ಲಿ ಬಂಧಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.
ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್ ಸಿ ಬಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾನೆ.
ಆರ್ಯನ್ ಖಾನ್ ಬಂಧಿಯಾಗಿದ್ದ ಫೋಟೋವೊಂದು ವೈರಲ್ ಆಗಿತ್ತು. ಅದುವೇ ಆರ್ಯನ್ ಖಾನ್ ಜೊತೆಗಿನ ಕಿರಣ್ ಗೋಸಾವಿ ಎಂಬಾತನ ಸೆಲ್ಫಿ ಫೋಟೋ. ಸದ್ಯ ಈ ಕಿರಣ್ ಗೋಸಾವಿ ನಾಪತ್ತೆಯಾಗಿದ್ದಾನೆ. ಈತನ ಬಾಡಿಗಾಡ್ ಆಗಿರುವ ಪ್ರಭಾಕರ್ ಸೈಲ್ ಎಂಬಾತ 25 ಕೋಟಿ ರೂಪಾಯಿ ವಸೂಲಿ ಆರೋಪದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಬಾಲಿವುಡ್ ನಟ ಶಾರುಖ್ ಖಾನ್ ಮ್ಯಾನೇಜರ್ ಆಗಿರುವ ಪೂಜಾ ದದ್ಲಾನಿ ಹಾಗೂ ಕಿರಣ್ ಗೋಸಾವಿ ಭೇಟಿಯಾಗಿದ್ದರು. ನೀಲಿ ಬಣ್ಣದ ಮರ್ಸಿಡೀಸ್ ಬೆನ್ಜ್ ಕಾರಿನಲ್ಲಿ 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು ಎಂಬುದರ ಬಗ್ಗೆ ಪ್ರಭಾಕರ್ ಹೇಳಿಕೊಂಡಿದ್ದಾನೆ.
ಕಳೆದ ವಾರ ಸಮೀರ್ ವಾಂಖೆಡೆ ಅವರು ಬಾಲಿವುಡ್ ತಾರೆಯರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರಿಂದ ಹಣ ಸುಲಿಗೆ ಮಾಡುವುದಕ್ಕಾಗಿ ಮತ್ತು ಬ್ಲ್ಯಾಕ್ಮೇಲ್ ಮಾಡುವುದಕ್ಕಾಗಿ ದುಬೈಗೆ ತೆರಳಿದ್ದರು ಎಂದು ನವಾಬ್ ಮಲಿಕ್ ಆರೋಪಿಸಿದ್ದರು.
ನನ್ನನ್ನು ಯಾವುದೇ ಉದ್ದೇಶಪೂರ್ವಕ ಸುಳ್ಳು ಆರೋಪದಲ್ಲಿ ಸಿಲುಕಿಸದಂತೆ ನೋಡಿಕೊಳ್ಳಿ ಎಂದು ಪೊಲೀಸ್ ಅಧಿಕಾರಿಗೆ ವಾಂಖೆಡೆ ಮನವಿ ಮಾಡಿದ್ದಾರೆ. ಈ ಹಿಂದೆ ಜೀವ ಬೆದರಿಕೆಯಿದೆ ಎಂದು ನಗರ ಮತ್ತು ರಾಜ್ಯ ಪೊಲೀಸರಿಗೆ ವಾಂಖೆಡೆ ದೂರು ನೀಡಿದ್ದರು.
ಲಂಚ ಆರೋಪಕ್ಕೆ ಎನ್ಸಿಬಿ ಸ್ಪಷ್ಟನೆ: ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಭಾನುವಾರ ಲಂಚ ಬೇಡಿಕೆಯ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಈ ಆರೋಪಕ್ಕೆ ಎನ್ಸಿಬಿ ಸ್ಪಷ್ಟನೆ ನೀಡಿದೆ.