ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಕೇವಲ ಹೃದಯವಿದೆ: ಡಿಕೆ ಶಿವಕುಮಾರ್
Recommended Video
ಮುಂಬೈ, ಜುಲೈ 10: ಅತೃಪ್ತ ಶಾಸಕರ ಮನವೊಲಿಸಿ ಅವರನ್ನು ಕರೆತರಲು ಮುಂಬೈಗೆ ಹೋಗಿರುವ ಟ್ರಬಲ್ ಶೂಟರ್ ಶಿವಕುಮಾರ್ ಅವರಿಗೇ ಟ್ರಬಲ್ ಎದುರಾಗಿದೆ. ಹೋಟೆಲ್ನಲ್ಲಿ ರೂಂ ಬುಕ್ ಮಾಡಿಕೊಂಡು ಹೋಗಿದ್ದರೂ ಶಾಸಕರು ತಂಗಿದ್ದ ರಿನೈಸನ್ಸ್ ಹೋಟೆಲ್ ಮುಂಭಾಗದಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ.
ಡಿಕೆ ಶಿವಕುಮಾರ್ ಅವರೊಂದಿಗೆ ಸಚಿವ ಜಿಟಿ ದೇವೇಗೌಡ, ಶಾಸಕರಾದ ಬಾಲಕೃಷ್ಣ, ಶಿವಲಿಂಗೇಗೌಡ ಕೂಡ ಮುಂಬೈಗೆ ತೆರಳಿದ್ದು, ನಾಲ್ವರೂ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದರೂ ಫಲಪ್ರದವಾಗಿಲ್ಲ.
ಅತೃಪ್ತ ಶಾಸಕರನ್ನು ಅವರ ಕೋಠಡಿಗೆ ಹೋಗಿ ಭೇಟಿಯಾಗುವುದಿಲ್ಲ. ನಮ್ಮ ಕೊಠಡಿಗೆ ಹೋಗಬೇಕು. ಗ್ರಾಹಕರಾಗಿ ಬಂದಿದ್ದರೂ ಒಳಗೆ ಬಿಡುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಮತ್ತು ಇತರೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮತ್ತಷ್ಟು ಅತೃಪ್ತರು ಬರಲಿದ್ದಾರೆ: ಜಾರಕಿಹೊಳಿ ಮತ್ತೊಂದು ಬಾಂಬ್ Live Updates
ನೀವು ಶಾಸಕರನ್ನು ಕರೆದುಕೊಂಡು ಬರಲೇಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಫೋನ್ ಮೂಲಕ ಕುಮಾರಸ್ವಾಮಿ ಅವರಿಗೆ ಡಿಕೆಶಿ ಮಾಹಿತಿ ನೀಡುತ್ತಿದ್ದಾರೆ.
ಹೋಟೆಲ್ ಬಳಿ 'ಶಿವಕುಮಾರ್ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಮ್ಮ ಬಳಿ ಆಯುಧವಿಲ್ಲ
ರೆನೈಸನ್ಸ್ ಹೋಟೆಲ್ನಲ್ಲಿ ಕೊಠಡಿ ಬುಕ್ ಮಾಡಿದ್ದೇವೆ. ನಮ್ಮ ಶಾಸಕರನ್ನು ಭೇಟಿಯಾಗಬೇಕು. ಹೋಟೆಲ್ ಗ್ರಾಹಕರಾಗಿ ಬಂದರೂ ಒಳಗೆ ಬಿಡುತ್ತಿಲ್ಲ. ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಕೇವಲ ಹೃದಯವಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಎಚ್ ಡಿಕೆ, ಡಿಕೆಶಿ ಭೇಟಿ ಇಷ್ಟವಿಲ್ಲ: ಪೊಲೀಸರಿಗೆ ಅತೃಪ್ತರ ಪತ್ರ
ನಮ್ಮ ಶಾಸಕರನ್ನು ಕೂಡಿ ಹಾಕಿದ್ದಾರೆ
ಬಿಜೆಪಿಯ ಆರ್ ಅಶೋಕ್, ಕೆಜಿ ಬೋಪಯ್ಯ ಅವರು ಹೋಟೆಲ್ ಒಳಗೆ ಹೋಗಿ ಶಾಸಕರನ್ನು ಭೇಟಿಯಾಗಿದ್ದರು. ಅವರನ್ನು ಹೇಗೆ ಬಿಟ್ಟಿರಿ? ಮಹಾರಾಷ್ಟ್ರ ಸರ್ಕಾರದ ಬಗ್ಗೆ ಗೌರವವಿದೆ. ಭದ್ರತಾ ಕಾರಣದಿಂದ ಒಳಗೆ ಹೋಗಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ಶಾಸಕರನ್ನು ಮುಂಬೈಗೆ ಕರೆದುಕೊಂಡು ಬಂದು ಕೂಡಿ ಹಾಕಿದ್ದಾರೆ. ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದರು.
ಸಂಸಾರದಲ್ಲಿ ಇವೆಲ್ಲ ಸಹಜ
ನಾವು 30-40 ವರ್ಷದಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ. ರಾಜಕೀಯದಲ್ಲಿ ವೈಮನಸ್ಸು ಸಹಜ. ಸಂಸಾರದಲ್ಲಿ ಇವೆಲ್ಲ ಇರುತ್ತದೆ. ಹೋಟೆಲ್ನಲ್ಲಿ ಇರುವ ಶಾಸಕರು ನಮ್ಮ ಸ್ನೇಹಿತರು. ರಾಜಕೀಯ ಕ್ಷೇತ್ರದಲ್ಲಿ ಯಾವುದೂ ಶಾಶ್ವತವಲ್ಲ. ಎಲ್ಲವನ್ನೂ ಸರಿಪಡಿಸಬೇಕು. ಪಂಚಾಯಿತಿ ನಡೆಸಬೇಕು. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಮುಂಜಾನೆ ಐದು ಗಂಟೆಗೆ ಎದ್ದು ಸ್ನಾನ ಮಾಡದೆಯೂ ಬಂದಿದ್ದೇನೆ. ಹೋಟೆಲ್ ಒಳಗೆ ಹೋಗಿ ಸ್ನಾನ ಮಾಡಲೂ ಬಿಡುತ್ತಿಲ್ಲ. ಪೊಲೀಸರು ನಮ್ಮ ಜತೆಯೂ ಬರಲಿ. ನಮ್ಮ ಜತೆ ಕೊಠಡಿಗೂ ಬರಲಿ.
ಅತೃಪ್ತರ ರಾಜೀನಾಮೆ ಸ್ವೀಕರಿಸುವಂತೆ ಸ್ಪೀಕರ್ ಗೆ ಬಿಎಸ್ ವೈ ಆಗ್ರಹ
ಬಿಜೆಪಿಯವರು ರಣಹೇಡಿಗಳು
ನಮ್ಮ ಶಾಸಕರು ಕರೆಯದೆ ನಾನು ಬರುತ್ತೇನೆಯೇ? ಬಿಜೆಪಿಯವರು ರಣ ಹೇಡಿಗಳು. ಈ ರೀತಿ ಹೇಡಿಗಳಂತೆ ಕುತಂತ್ರ ಮಾಡುವ ಬದಲು ನಾವು ಇಂತಹ ರಾಜಕಾರಣ ಮಾಡುತ್ತಿದ್ದೇವೆ ಎಂದು ಧೈರ್ಯವಾಗಿ ಹೇಳಲಿ. ಬಿಜೆಪಿಯವರು ನಾವು ಇದರಲ್ಲಿ ಭಾಗಿಯಾಗಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಇದೆಲ್ಲ ಏಕೆ ನಡೆಯುತ್ತಿದೆ ಬಿಜೆಪಿಯವರು ಹಿಂದಿನಿಂದಲೂ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.