ಮಹಾರಾಷ್ಟ್ರ ಮಾದರಿಯಲ್ಲಿ ಗೋಶಾಲೆಗಳನ್ನು ಅಭಿವೃದ್ಧಿ: ಪ್ರಭು ಚೌಹಾಣ್
ಬೆಂಗಳೂರು, ಆಗಸ್ಟ್ 23: ಸರ್ಕಾರಿ ಗೋಶಾಲೆ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಮಹಾರಾಷ್ಟ್ರದ ಗೋಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿರುವ ಪಶುಸಂಗೋಪನಾ ಸಚಿವ ಪ್ರಭು ಬಿ ಚೌವ್ಹಾಣ್, ಮಹಾರಾಷ್ಟ್ರ ಮಾದರಿಯಲ್ಲಿ ಗೋಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಅವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಜೀವವೈವಿಧ್ಯ ಜಾನುವಾರು ಫಾರಂಗೆ ಭೇಟಿ ನೀಡಿ ಜಾನುವಾರು ಸಾಕಣೆ, ಮೇವು ಉತ್ಪಾದನೆ ಮತ್ತು ಗೋವಿನ ಉತ್ಪನ್ನಗಳು ಮತ್ತು ಉಪ ಉತ್ಪನ್ನಗಳ ತಯಾರಿಕೆಯನ್ನು ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದರು. ಗೋಶಾಲೆಯಲ್ಲಿ ಚೆಕ್ ಡ್ಯಾಂ ನಿರ್ಮಿಸಿ, ಮಳೆ ನೀರು ಸಂಗ್ರಹಿಸಿ, ಮೇವು ಬೆಳೆಯಲಾಗುತ್ತಿದೆ. ಈ ವ್ಯವಸ್ಥೆ ಅಳವಡಿಸಿಕೊಂಡರೆ ನೀರು ಪೋಲು ಆಗುವುದಿಲ್ಲ ಎಂದು ಹೇಳಿದರು.
ಪುಣ್ಯಕೋಟಿ ಯೋಜನೆ ಭಾಗವಾಗಿ 31 ಹಸು ದತ್ತು ಪಡೆದ ಸಚಿವ ಪ್ರಭು ಚವ್ಹಾಣ್
ಚೆಕ್ ಡ್ಯಾಂ ನಿರ್ಮಾಣ ಮಾಡುವುದರಿಂದ ಹಸಿರು ವಾತಾವರಣ ನಿರ್ಮಾಣವಾಗಲಿದ್ದು, ಮೇವು ಉತ್ಪಾದನೆಗೆ ಯಾವುದೇ ತೊಂದರೆಯಾಗುವುದಿಲ್ಲ. ನೀರು ಸಂರಕ್ಷಿಸಿ, ನೀರು ಕುಡಿಯಿರಿ ಎಂಬ ಘೋಷವಾಕ್ಯದೊಂದಿಗೆ ನರೇಗಾ ಯೋಜನೆಯಡಿ ಪ್ರತಿ ಐದು ಎಕರೆ ಜಾನುವಾರು ಸಾಕಾಣಿಕೆ ಕೇಂದ್ರಕ್ಕೆ ಮಿನಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ ಎಂದರು.
ಜೀವವೈವಿಧ್ಯದ ಹಸುಗಳ ಫಾರಂನಲ್ಲಿ 700 ಹಸುಗಳನ್ನು ಪೋಷಿಸಲಾಗುತ್ತಿದೆ. ಅತ್ಯಂತ ಅಚ್ಚುಕಟ್ಟಾಗಿ ಕೃಷಿ ನಿರ್ವಹಣೆಯನ್ನು ಸ್ಥಾಪಿಸಲಾಗಿದೆ. ಚೆಕ್ ಡ್ಯಾಂನಿಂದ ಇದರಿಂದ ನೀರು ವ್ಯರ್ಥವಾಗುವುದಿಲ್ಲ, ಸದಾ ನೀರು ದೊರೆಯುತ್ತದೆ. ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ತರುವ ಕುರಿತು ಬೆಂಗಳೂರಿಗೆ ಆಗಮಿಸಿದ ಕೂಡಲೇ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಪ್ರಭು ಚವ್ಹಾಣ್ ಹೇಳಿದ್ದಾರೆ.
ದೇಶದ ಮೊದಲ ಪುಣ್ಯಕೋಟಿ ಯೋಜನೆ ಯಶಸ್ವಿಗೊಳಿಸಲು ಚೌವ್ಹಾಣ್ ಕರೆ
ಹಸುಗಳಿಗೆ ಎಲ್ಲಾ ಸಮಯದಲ್ಲೂ ನೀರು ಮತ್ತು ಮೇವು ದೊರೆಯಲು ಗ್ರಾಮೀಣಾಭಿವೃದ್ಧಿ ಇಲಾಖೆಗೆ ನರೇಗಾ ಯೋಜನೆಯಡಿ ಚೆಕ್ ಡ್ಯಾಂ ಮತ್ತು ನೀರಿನ ಟ್ಯಾಂಕ್ ನಿರ್ಮಿಸಲು ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಐದು ಎಕರೆ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಉತ್ಪಾದನೆಗೆ ಕ್ರಮಕೈಗೊಳ್ಳಲಾಗುವುದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅಹಮದ್ನಗರ ಜಿಲ್ಲೆಯ ಲೋಣಿಯಲ್ಲಿ ಮಹಾರಾಷ್ಟ್ರದ ಪಶುಸಂಗೋಪನಾ ಸಚಿವ ರಾಧಾಕೃಷ್ಣ ವೈ.ಕೆ.ಪಾಟೀಲ್ ಅವರನ್ನು ಭೇಟಿ ಮಾಡಿ ಹಸುಗಳ ಅಭಿವೃದ್ಧಿ ಕುರಿತು ಚರ್ಚಿಸಿದರು. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯಿದೆ, ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ, 100 ಸರ್ಕಾರಿ ಗೋಶಾಲೆಗಳು, ಪಶು ಸಂಜೀವಿನಿ, ಪುಣ್ಯಕೋಟಿ ದತ್ತು ಯೋಜನೆ, ಗೋಮಾತಾ ಸಹಕಾರಿ ಸಂಘ, ಆತ್ಮನಿರ್ಭರ ಗೋಶಾಲೆ, ಎಫ್ಎಂಡಿ ಲಸಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಹೈನುಗಾರಿಕೆ ಮತ್ತು ಗೋಸಂರಕ್ಷಣೆಯಲ್ಲಿ ವಿವಿಧ ಯೋಜನೆಗಳ ಮೂಲಕ ಅಳವಡಿಸಿಕೊಂಡಿರುವ ಯೋಜನೆಗಳ ಕುರಿತು ಅಧ್ಯಯನ ಮಾಡಲು ಮುಂದಿನ ದಿನಗಳಲ್ಲಿ ಸರ್ಕಾರಿ ಗೋಶಾಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗೋಶಾಲೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸುವುದಾಗಿ ರಾಧಾಕೃಷ್ಣ ವೈ.ಕೆ.ಪಾಟೀಲ ತಿಳಿಸಿದರು.
ಈ ಕಾರ್ಯಕ್ರಮ ಅಡಿಯಲ್ಲಿ ಗೋಶಾಲೆಗಳಲ್ಲಿನ ಹಸುಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ದತ್ತು ಪಡೆದುಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಗೋಶಾಲೆಗಳಲ್ಲಿರುವ ಹಸುಗಳಿಗೆ ಉತ್ತಮ ಸೌಕರ್ಯ ಮತ್ತು ಸೌಲಭ್ಯ ಒದಗಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕದಲ್ಲಿ ಸರ್ಕಾರವೇ ನಿರ್ಮಿಸಿದ ಸುಮಾರು 215 ಗೋಶಾಲೆಗಳಿದ್ದು, ಗೋವುಗಳ ಆರೈಕೆಯೇ ಅವುಗಳ ಮುಖ್ಯ ಧ್ಯೇಯವಾಗಿದೆ. ಈ ಕಾರ್ಯಕ್ರಮವು ಹಸುಗಳ ಸಂತಾನೋತ್ಪತ್ತಿಗೆ ಮಾತ್ರವಲ್ಲದೆ ಹಿಂಡಿನ ಸಂರಕ್ಷಣೆಗೆ ಸಹಾಯವಾಗುತ್ತದೆ.
ಪಶುಸಂಗೋಪನೆಯಲ್ಲಿ ತೊಡಗಿರುವ ಹಲವಾರು ಖಾಸಗಿ ಸಂಸ್ಥೆಗಳು ವಿವಿಧ ಕಾರಣಗಳಿಂದ ತಮ್ಮ ಹಸುಗಳನ್ನು ಬಿಡುತ್ತವೆ. ಆದ್ದರಿಂದ, ಗೋವುಗಳನ್ನು ರಕ್ಷಿಸಲು ಮತ್ತು ಪೋಷಿಸಲು ರಾಜ್ಯ ಸರ್ಕಾರವೇ ಗೋವಿನ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಿದೆ.