ಇಂಧನದ ಮೇಲಿನ ವ್ಯಾಟ್ ಕಡಿತ ಮಾಡದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಮುಂಬೈ, ನವೆಂಬರ್ 05: ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತ ಮಾಡುವ ಒತ್ತಾಯ ವ್ಯಕ್ತವಾಗಿತ್ತು. ಪ್ರಸ್ತುತ ಹಲವಾರು ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಅನ್ನು ಕಡಿತ ಮಾಡಿದೆ. ಆದರೆ ಮಹಾರಾಷ್ಟ್ರ ಸರ್ಕಾರವು ಇಂಧನ ಮೇಲಿನ ವ್ಯಾಟ್ ಅನ್ನು ಕಡಿತ ಮಾಡಿಲ್ಲ. ಈ ಕಾರಣದಿಂದಾಗಿ ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಇದಾದ ಒಂದು ಗಂಟೆಯಲ್ಲೇ ಹಲವಾರು ರಾಜ್ಯಗಳು ಇಂಧನದ ಮೇಲೆ ರಾಜ್ಯ ಸರ್ಕಾರ ಹೇರುವ ವ್ಯಾಟ್ ಅನ್ನು ಕಡಿತ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಇಳಿಕೆ ವ್ಯಾಟ್ ಅನ್ನು ಕಡಿತ ಮಾಡದ ಕಾರಣದಿಂದ ಬಿಜೆಪಿಯು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ 9 ಬಿಜೆಪಿ ಆಡಳಿತದ ರಾಜ್ಯದಲ್ಲಿ ಇಂಧನ ಬೆಲೆ ಹೆಚ್ಚುವರಿ ಕಡಿತ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಶಿವಸೇನೆ, ಕಾಂಗ್ರೆಸ್, ಎನ್ಸಿಪಿಯನ್ನು ಒಳಗೊಂಡ ಮೈತ್ರಿ ಸರ್ಕಾರ ಮಹಾ ವಿಕಾಸ್ ಅಘಾಡ್ (ಎಂವಿಎ) "ಇತ್ತೀಚೆಗೆ ಉಪಚುನಾವಣೆಯಲ್ಲಿ ಹಲವಾರು ಸ್ಥಾನಗಳನ್ನು ಕಳೆದುಕೊಂಡ ಕಾರಣದಿಂದಾಗಿ ಬಿಜೆಪಿಯು ಈಗ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಇಳಿಕೆ ಮಾಡಿದೆ," ಎಂದು ಹೇಳಿಕೊಂಡಿದೆ.
ಇನ್ನು ಮಹಾ ಸರ್ಕಾರದ ವಿರುದ್ದವಾಗಿ ಗುರುವಾರ ಮಾತನಾಡಿದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯ, " ಮಹಾರಾಷ್ಟ್ರ ರಾಜ್ಯ ಸರ್ಕಾರವು ಬಿಜೆಪಿ ಆಡಳಿತ ಇರುವ ರಾಜ್ಯಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಯಾವುದೇ ಕ್ರಮ ಕೈಗೊಳ್ಳಬೇಕು. ಸರ್ಕಾರ ವ್ಯಾಟ್ ಅನ್ನು ಕಡಿಮೆ ಮಾಡುವ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಕೆ ಮಾಡಬೇಕು," ಎಂದು ಒತ್ತಾಯಿಸಿದ್ದಾರೆ.
"ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಎಷ್ಟು ಕಡಿಮೆ ಮಾಡಿದೆಯೋ ಅಷ್ಟಾದರೂ ಬೆಲೆಯನ್ನು ರಾಜ್ಯ ಸರ್ಕಾರ ಕಡಿಮೆ ಮಾಡಬೇಕು. ನಿಜಕ್ಕೂ ಹೇಳಬೇಕಾದರೆ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಐದು ರೂಪಾಯಿ ಅಧಿಕವೇ ಕಡಿತ ಮಾಡಬೇಕು. ಏಕೆಂದರೆ ಕಳೆದ ಎರಡು ವರ್ಷದಲ್ಲಿ ಈ ರಾಜ್ಯ ಸರ್ಕಾರವು ನಿರಂತರವಾಗಿ ಇಂಧನದ ಮೇಲಿನ ವ್ಯಾಟ್ ಅನ್ನು ಏರಿಕೆ ಮಾಡಿದೆ," ಎಂದು ಆಗ್ರಹ ಮಾಡಿದರು.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರು ಆದ ಭಾಗ್ವತ್ ಕರದ್ ಈ ಬಗ್ಗೆ ಮಾತನಾಡಿ, "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉಪ ಮುಖ್ಯಮಂತ್ರಿ, ಹಣಕಾಸು ಸಚಿವ ಅಜಿತ್ ಪವಾರ್ ಜೊತೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ಅನ್ನು ಏಳು ರೂಪಾಯಿ ಕಡಿತ ಮಾಡುವಂತೆ ತಿಳಿಸಲಾಗಿದೆ," ಎಂದಿದ್ದಾರೆ.
'ಪೆಟ್ರೋಲ್, ಡೀಸೆಲ್ ಬೆಲೆ 2014 ರ ವರ್ಷಕ್ಕೆ ಸಮಾನವಾಗುವುದು ಯಾವಾಗ?'
ಎಲ್ಲಾ ಚುನಾವಣೆಯ ಪ್ರಭಾವ ಎಂದ ಸಚಿವ
"ಬಿಜೆಪಿಯು ಇತ್ತೀಚಿನ ಚುನಾವಣೆಗಳಲ್ಲಿ ಸೋಲು ಕಂಡ ಕಾರಣದಿಂದಾಗಿ ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲಯನ್ನು ಕಡಿಮೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬಳಿಕ ಪ್ರಸ್ತುತ ಎಷ್ಟು ಅಬಕಾರಿ ಸುಂಕವನ್ನು ಹೇರುತ್ತಿದೆಯೋ ಅದು ಕೂಡಾ ಅಧಿಕವೇ ಆಗಿದೆ. ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಅಂತರಾಷ್ಟ್ರೀಯ ಬೆಲೆಗಳು ಇನ್ನೂ ಕಡಿಮೆ ಆಗಿದೆ. ಮುಂದಿನ ಚುನಾವಣೆಯ ಹಿನ್ನೆಲೆ ಬಿಜೆಪಿ ಈಗ ಬೆಲೆ ಇಳಿಕೆ ಮಾಡಿದೆ. ಎಲ್ಲಾ ಚುನಾವಣೆಯ ಪ್ರಭಾವ ," ಎಂದು ಎನ್ಸಿಪಿ ಸಚಿವ ನವಾಬ್ ಮಲ್ಲಿಕ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)