ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತಿನಿಂದ ಹಿಂದೆ ಸರಿದ ಬಿಜೆಪಿ
ಮುಂಬೈ, ನವೆಂಬರ್ 10: ಭಾರಿ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರದ ಸರ್ಕಾರ ರಚನೆ ಕಸರತ್ತಿನಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಹೊರ ನಡೆದಿದೆ. "ಸರ್ಕಾರ ರಚನೆಗೆ ಅಗತ್ಯವಾದಷ್ಟು ಸಂಖ್ಯಾಬಲ ನಮಗಿಲ್ಲ. ಹಾಗಾಗಿ ನಾವು ಸರ್ಕಾರ ರಚಿಸುವ ಪ್ರಯತ್ನ ಮಾಡುವುದಿಲ್ಲ" ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.
ಭಾನುವಾರದಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರ ರಚನೆಗೆ ಅಗತ್ಯ ಬೆಂಬಲ ಸಿಗದ ಕಾರಣ, ಅಧಿಕಾರ ಸ್ಥಾಪನೆ ಹಕ್ಕು ಪ್ರತಿಪಾದಿಸದಿರಲು ನಿರ್ಧರಿಸಲಾಯಿತು. ಸರ್ಕಾರ ರಚನೆ ಬಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಹಂಗಾಮಿ ಸಿಎಂ ದೇವೇಂದ್ರ ಫಡ್ನವಿಸ್ ಈ ವಿಷಯ ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಕಾಂತ್ ಪಾಟೀಲ್, " ಶಿವಸೇನೆ ಜತೆಗೂಡಿ ಸರ್ಕಾರ ರಚಿಸಲು ನಮಗೆ ಜನಾದೇಶ ಲಭಿಸಿತ್ತು. ಆದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸರ್ಕಾರ ರಚನೆಗೆ ಬೆಂಬಲ ನೀಡಲು ಹಿಂದೇಟು ಹಾಕುತ್ತಿದೆ. ಆದ್ದರಿಂದ, ನಾವು ಸರ್ಕಾರ ರಚನೆಯ ಪ್ರಯತ್ನಕ್ಕೆ ಮುಂದಾಗಿರಲು ನಿರ್ಧರಿಸಿದ್ದೇವೆ" ಎಂದರು.
ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಎನ್ಸಿಪಿ ಬೆಂಬಲದೊಂದಿಗೆ ಶಿವಸೇನಾ ಸರ್ಕಾರ ರಚಿಸಲು ಮುಂದಾಗಿರುವ ಪ್ರಯತ್ನ ನಡೆಸಿದೆ, ಶಿವಸೇನಾಗೆ ಒಳ್ಳೆಯದಾಗಲಿ ಎಂದು ಚಂದ್ರಕಾಂತ್ ಪಾಟೀಲ್ ಶುಭಹಾರೈಸಿದ್ದಾರೆ.

ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಅತಂತ್ರ
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 228 ಕ್ಷೇತ್ರಗಳ ಪೈಕಿ 105 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. 56 ಸ್ಥಾನಗಳಲ್ಲಿ ಶಿವಸೇನೆ ಜಯ ದಾಖಲಿಸಿತ್ತು. ಉಳಿದಂತೆ, ಎನ್ ಸಿಪಿ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೂ ಮೊದಲು ಮೈತ್ರಿ ಮಾಡಿಕೊಂಡಿದ್ದ ಉಭಯ ಪಕ್ಷಗಳು, ಫಲಿತಾಂಶ ಹೊರ ಬೀಳುತ್ತಿದ್ದಂತೆ ಗದ್ದುಗೆ ಹಿಡಿಯಲು ಗುದ್ದಾಡುತ್ತಿವೆ.

ಚುನಾವಣಾ ಪೂರ್ವ ಮೈತ್ರಿ ಫಲ ನೀಡಲಿಲ್ಲ
ಚುನಾವಣಾ ಪೂರ್ವ ಮೈತ್ರಿಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಶ್ವಾಸನೆ ನೀಡಿದಂತೆ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಬೇಕು. ಅಧಿಕಾರ ಅವಧಿ ಸಮನಾಗಿ ಹಂಚಿಕೆಯಾಗಬೇಕು, ಉನ್ನತ ಸ್ಥಾನಗಳು ಸಿಗಬೇಕು, 2.5 ವರ್ಷ ಬಿಜೆಪಿಯಿಂದ ಸಿಎಂ ಹಾಗೂ 2.5 ವರ್ಷ ಶಿವಸೇನಾದಿಂದ ಸಿಎಂ ಎಂದು ಶಿವಸೇನಾ ತನ್ನ ಬೇಡಿಕೆ ಬಗ್ಗೆ ಲಿಖಿತ ಒಪ್ಪಂದವಾಗಬೇಕು ಎಂದು ಶಿವಸೇನಾ ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ಅನಗತ್ಯ, ಈ ಬಗ್ಗೆ ಯಾವುದೆ ಒಪ್ಪಂದವಾಗಿಲ್ಲ ಎಂದು ಬಿಜೆಪಿಯ ಸಿಎಂ ಅಭ್ಯರ್ಥಿ ದೇವೇಂದ್ರ ಫಡ್ನವೀಸ್ ಇಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಗೆ ಅಧಿಕಾರ ಅವಕಾಶ ಸಿಕ್ಕರೂ ಸಂಖ್ಯಾಬಲವಿಲ್ಲ
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಗೊಂದಲ ಮುಂದುವರೆಯುವ ಲಕ್ಷಣ ಕಂಡು ಬಂದರೂ ಬಿಜೆಪಿಗೆ ಸರ್ಕಾರ ರಚನೆ ಅವಕಾಶ ಸಿಕ್ಕಿತ್ತು. ಶಿವಸೇನಾ ಬೆಂಬಲವಿಲ್ಲದಿದ್ದರೂ, ವಿಧಾನಸಭಾ ಚುನಾವಣೆ ಬಳಿಕ ದೊಡ್ಡಪಕ್ಷವಾಗಿ ಹೊರಹೊಮ್ಮಿದ ಕಾರಣಕ್ಕೆ ಬಿಜೆಪಿಗೆ ಸರ್ಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೌಶಿಯರ್ ಆಹ್ವಾನ ನೀಡಿದ್ದರು. ಬಿಜೆಪಿ-ಶಿವಸೇನಾ ಚುನಾವಣಾಪೂರ್ವ ಮೈತ್ರಿ ಇದ್ದಿದ್ದರಿಂದ ಸಂಖ್ಯಾಬಲ ಹೊಂದಾಣಿಕೆ ಮ್ಯಾಜಿಕ್ ನಂಬರ್ 146 ದಾಟುವ ಸಾಧ್ಯತೆಯಿತ್ತು. ಆದರೆ ಶಿವಸೇನಾ ಬೆಂಬಲವೂ ಸಿಗಲಿಲ್ಲ, ಬಿಜೆಪಿಗೆ ಬಹುಮತಕ್ಕೆ ಬೇರೆ ಮಾರ್ಗವೂ ಸಿಗಲಿಲ್ಲ.

ಕಾಂಗ್ರೆಸ್- ಎನ್ಸಿಪಿ ಜೊತೆ ಶಿವಸೇನಾ ಸರ್ಕಾರ?
ಕಾಂಗ್ರೆಸ್- ಎನ್ಸಿಪಿ ಜೊತೆ ಸೇರಿಕೊಂಡು ಶಿವಸೇನಾ ಸರ್ಕಾರ ರಚನೆಗೆ ಮುಂದಾಗಿದ್ದು, ಅಗತ್ಯ ಸಂಖ್ಯಾಬಲವೂ ಸಿಗಲಿದೆ. ಆದರೆ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಬಿಜೆಪಿ ಮುಂದಿಟ್ಟ ಬೇಡಿಕೆಗಳನ್ನು ಹೊಸ ಮೈತ್ರಿಕೂಟದ ಮುಂದೆಯೂ ಶಿವಸೇನಾ ಇಡಲಿದೆ. ಪ್ರಮುಖವಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯಲಿದೆ. ಒಂದು ವೇಳೆ ಸರ್ಕಾರ ರಚನೆಯಾದರೂ ಅಧಿಕಾರ ಅವಧಿ ಹೆಚ್ಚು ಕಾಲ ಇರುವುದಿಲ್ಲ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಶಿವಸೇನಾ ಈ ರೀತಿ ಬಿಜೆಪಿ ಜೊತೆಗೆ ಮೈತ್ರಿ ಮುರಿದುಕೊಂಡರೆ, ಎನ್ಡಿಎಯಿಂದಲೂ ಹೊರ ಬರಬೇಕಾಗುತ್ತದೆ.












Click it and Unblock the Notifications