ಜಾತಿಯ ಬೆಂಕಿ, ಗಲಭೆಯ ಬಿರುಗಾಳಿಗೆ ಮುಂಬೈ ತತ್ತರ
ಮುಂಬೈ, ಜನವರಿ 03: ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದ ಭೀಮ-ಕೊರೆಗಾಂವ್ ಗಲಭೆ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ, ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ.
ಜ.1 ರಂದು ಭೀಮ ಕೊರೆಗಾಂವ್ ವಿಜಯೋತ್ಸವದ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ಪುಣೆಯಲ್ಲಿ ದಲಿತರು ಮತ್ತು ಮರಾಠರ ನಡುವೆ ನಡೆದ ಗಲಭೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಮರಾಠಾ ವ್ಯಕ್ತಿಯೊಬ್ಬ ಅಸುನೀಗಿದ್ದ.
ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಬಿಬಿಎಂ (ಭರಿಪ ಬಹುಜನ ಮಹಾಸಂಘ) ಮುಖ್ಯಸ್ಥ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಜ.3 ರಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದರು.
ಜನವರಿ 1, 1818 ರಂದು ನಡೆದ ಕೊರೆಗಾಂವ್ ಕದನದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡುವುದಕ್ಕೆ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಕೈಜೋಡಿಸಿದ್ದ ಮೆಹರ್ ಸಮುದಾಯ ಈ ಹೋರಾಟದಲ್ಲಿ ಗೆಲುವು ಸಾಧಿಸಿತ್ತು. ಈ ಹೋರಾಟ ಭೀಮ ಕೊರೆಗಾಂವ್ ಎಂಬ ಪ್ರದೇಶದಲ್ಲಿ ನಡೆದಿದ್ದರಿಂದ ಇದನ್ನು ಭೀಮ ಕೊರೆಗಾಂವ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಆದರೆ ಈಸ್ಟ್ ಇಂಡಿಯಾ ಕಂಪೆನಿಯ ಗೆಲುವನ್ನು ಸಂಭ್ರಮಿಸುತ್ತಿರುವ ದಲಿತರ ನಡೆಯನ್ನು ಖಂಡಿಸಿ ಕೆಲವ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಈ ಹಿಂಸಾಚಾರ ಆರಂಭವಾಗಿದೆ.
ಜ.2 ರಂದು ಮಹಾರಾಷ್ಟ್ರದಲ್ಲಿ ಎಲ್ಲೆಲ್ಲೂ ಗಲಭೆ, ಕಲ್ಲುತೂರಾಟ, ಹಲ್ಲೆ ಪ್ರಕರಣಗಳು ಕೇಳಿಬಂದವು. ಮಹಾರಾಷ್ಟ್ರ ಗಲಭೆಯ ಕೆಲವು ಚಿತ್ರಗಳು ನಿಮಗಾಗಿ ಇಲ್ಲಿವೆ.

ಪ್ರತಿಭಟನಾಕಾರರೊಡನೆ ಪೊಲೀಸರ ಹೆಜ್ಜೆ!
ದೇಶದವಾಣಿಜ್ಯ ಕೇಂದ್ರವಾದ ಮುಂಬೈ ಮತ್ತು ಪುಣೆಯಲ್ಲಿ ಎಲ್ಲೆಲ್ಲೂ ಹಿಂಸಾಚಾರ ಆರಂಭವಾಗಿದ್ದರಿಂದ ಪೊಲೀಸರು ಪ್ರತಿಭಟನಾಕಾರರೊಂದಿಗೆ ಹೆಜ್ಜೆಯಿಡುತ್ತಿದ್ದ ದೃಶ್ಯ ಎಲ್ಲೆಲ್ಲೂ ಕಂಡುಬಂತು. ಸುಮಾರು 21,000 ಪೊಲೀಸ್ ಸಿಬ್ಬಂದಿಗಳನ್ನು ಕೇವಲ ಮುಂಬೈ ಒಂದರಲ್ಲೇ ಆಯೋಜಿಸಲಾಗಿತ್ತು.

ಪ್ರಚೋದನಾತ್ಮಕ ಭಾಷಣ ನಿಲ್ಲಿಸಿ!
ಭಾರತೀಯರೊಂದಿಗೆ ಬ್ರಿಟೀಶರು ಹೋರಾಡಿ ಗೆದ್ದ ದಿನವನ್ನು ವಿಜಯೋತ್ಸವ ಎಂದು ಆಚರಿಸುವುದು ಸರಿಯೇ ಎಂಬುದು ಬಲಪಂಥೀಯರ ಪ್ರಶ್ನೆ. ಅಲ್ಲದೆ, ಪ್ರಚೋದನಾಕಾರಿ ಭಾಷಣದ ಮೂಲಕ ಜರನ್ನು ಸುಖಾಸುಮ್ಮನೆ ಹಿಂಸೆಗೆ ಪ್ರಚೋದಿಸಿದ್ದಾರೆಂದು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ, ದೆಹಲಿಯ ಜವಹರಲಾಲ್ ನೆಹರು ವಿವಿಯ ಉಮರ್ ಖಲೀದ್ ವಿರುದ್ಧ ಆರೋಪ ಹೊರಿಸಲಾಗಿದೆ.

ಬಸ್ಸುಗಳು ಜಖಂ
ಗಲಭೆಯಿಂದಾಗಿ ಹಲವು ಕೋಟಿ ರೂ. ಆಸ್ತಿಪಾಸ್ತಿ ನಷ್ಟವಾಗಿದೆ. ಸುಮಾರು 15 ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆಸಿದ ಕಾರಣ ಬಸ್ಸುಗಳು ಜಖಂಗೊಂಡಿವೆ. ಗಲಭೆಯ ಸಂದರ್ಭದಲ್ಲಿ ಪ್ರತಿಭಟನಾ ನಿರತ 100 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನೂ ಬಿಡದ ಪ್ರತಿಭಟನಾಕಾರರು
ಪೊಲೀಸ್ ಠಾಣೆಯ ಮೇಲೂ ದಾಳಿ ನಡೆಸಿದ ದಲಿತ ಸಂಘಟನೆಯ ಕೆಲವು ಪ್ರತಿಭಟನಾಕಾರರು, ಠಾಣೆಯ ಗಾಜುಗಳನ್ನು ಒಡೆದುಹಾಕಿದ್ದರು. ಪುಣೆ, ಥಾಣೆ, ಮುಂಬೈ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಇದ್ದಿದ್ದರಿಂದ ಹೆಚ್ಚು ಅಹಿತಕರ ಘಟನೆ ನಡೆದಿಲ್ಲ. ಉಳಿದಂತೆ ಹಲವೆಡೆ ರೈಲು ತಡೆ, ರಸ್ತೆ ತಡೆ ನಡೆದರೂ ಪ್ರತಿಭಟನೆ ಶಾಂತ ರೀತಿಯಲ್ಲೇ ಸಾಗಿದೆ.












Click it and Unblock the Notifications